ಸಾರಾಂಶ
ಚೌಡಯ್ಯನವರು ಏಕದೇವೋಪಾಸನೆ, ಇಷ್ಟಲಿಂಗನಿಷ್ಟೆ ಕುರಿತು ಸಾವಿರಾರು ವಚನ ರಚಿಸಿದ ಅನುಭವಮಂಟಪದ ಅನರ್ಘ್ಯರತ್ನ ಎಂದು ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಹೇಳಿದರು
ಕನ್ನಡಪ್ರಭ ವಾರ್ತೆ ಹುನಗುಂದ
ಅಂಬಿಗರ ಚೌಡಯ್ಯನವರು ಏಕದೇವೋಪಾಸನೆ, ಇಷ್ಟಲಿಂಗನಿಷ್ಟೆ ಕುರಿತು ಸಾವಿರಾರು ವಚನ ರಚಿಸಿದ ಅನುಭವಮಂಟಪದ ಅನರ್ಘ್ಯರತ್ನ ಎಂದು ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಹೇಳಿದರು.ಪಟ್ಟಣದ ನಾಗಲಿಂಗ ನಗರದ ಶರಣೆ ರಂಗಮ್ಮ, ಶರಣ ಕನಕಪ್ಪ ಅಂಬಿಗೇರ ಮನೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ನಡೆದ 27ನೇ ಮನೆ ಮನಗಳಿಗೆ ವಚನ ಸೌರಭ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಅಂಬಿಗರ ಚೌಡಯ್ಯನವರು ಬಸವಾದಿ ಶರಣರ ಚಿಂತನೆಯಿಂದ ಪ್ರಭಾವಿತರಾಗಿ ಬಸವಕಲ್ಯಾಣದ ಅನುಭವ ಮಂಟಪಕ್ಕೆ ಆಗಮಿಸಿ ಅಂಬಿಗ ಕಾಯಕವನ್ನು ನಿಷ್ಟೆಯಿಂದ ಮಾಡುತ್ತಾ ವೈಚಾರಿಕ ವಿಚಾರ ಹೊಂದಿ ಕಂದಾಚಾರ ಮೂಢನಂಬಿಕೆಗಳ ಬಗ್ಗೆ ಜನರಿಗೆ ತಮ್ಮ ವಚನಗಳ ಮೂಲಕ ಸಮಾಜದ ಬದಲಾವಣೆಗೆ ಪ್ರಮುಖ ಪಾತ್ರ ವಹಿಸಿ ನಿಜಶರಣರಾಗಿದ್ದಾರೆಂದರು.
ನಿವೃತ್ತ ಉಪನ್ಯಾಸಕ ಡಾ.ನಾಗರಾಜ ನಾಡಗೌಡ ಮಾತನಾಡಿ, ಅಂಬಿಗರ ಚೌಡಯ್ಯ ನಾಡುಕಂಡ ಬಸವಾದಿ ಶರಣರಲ್ಲಿ ನಿಜಶರಣರೆಂದು ಕರೆಸಿಕೊಂಡಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ.ಎಸ್.ಎನ್.ಹಾದಿಮನಿ, ಚೌಡಯ್ಯನವರು ಬಸವಣ್ಣನವರ ವಿಚಾರಗಳನ್ನು ಕೂಡಾ ಪರಾಮರ್ಶೆಗೆ ಒಳಪಡಿಸದೇ ಒಪ್ಪಿಕೊಳ್ಳುವ ಜಾಯಮಾನದವರಲ್ಲ ಎಂದರು.ಸಭೆಯಲ್ಲಿ ಭಕ್ತಿಸೇವೆ ಮಾಡಿದ ಶರಣ ದಂಪತಿಯನ್ನು ಪೂಜ್ಯರು ಗೌರವಿಸಿದರು. ಕದಳಿ ಮಹಿಳಾ ವೇದಿಕೆ ಅಧ್ಯಕ್ಷ ಡಾ.ಶಿವಗಂಗಾ ರಂಜಣಗಿ, ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಭು ಮಾಲಗಿತ್ತಿಮಠ, ಕಾರ್ಯದರ್ಶಿ ಸಂಗಮೇಶ ಹೊದ್ಲೂರ ಇದ್ದರು.