ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಜಿಲ್ಲೆಯ ಜೇವರ್ಗಿ ತಾಲೂಕಿನ ಆಂದೋಲಾ ಕರುಣೇಶ್ವರ ಮಠದ ಪೀಠಾಧಿಪತಿ, ಶ್ರೀರಾಮ ಸೇನೆಯ ಅಧ್ಯಕ್ಷ ಸಿದ್ದಲಿಂಗ ಶ್ರೀಗಳ ವಿರುದ್ಧ ಕಲಬುಗಿಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.ಕಲಬುರಗಿಯ ಇಲ್ಲಿನ ಸ್ಟೇಷನ್ ಬಜಾರ್ ಠಾಣೆಯಲ್ಲಿ ದಾಖಲಾಗಿರುವ ಸದರಿ ಪ್ರಕರಣದ ವಿಚಾರಣೆಗೆ ಮುಂದಾಗಿರುವ ಪೊಲೀಸರು ಈ ಕುರಿತಂತೆ ವಿಚಾರಣೆಗೆ ಹಾಜರಾಗಲು ಗುರುಗಳಿಗೆ ನೋಟೀಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಠಾಣೆಗೆ ಹಾಜರಾಗಿರುವ ಸಿದ್ದಲಿಂಗ ಶ್ರೀಗಳ ಧ್ವನಿ ಮಾದರಿ ಸಂಗ್ರಹಿಸಿರುವ ಪೊಲೀಸರು ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.
ಕಳೆದ ತಿಂಗಳು ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಹಾಗೂ ಕಮಲಾಪುರದ ಮುಗುಳ ನಾಗಾವಿಯ ಯುವಕನ ಆತ್ಮಹತ್ಯೆ ಪ್ರಕರಣಗಳನ್ನು ಖಂಡಿಸಿ ಕಲಬುರಗಿಯ ಪಟೇಲ್ ವೃತ್ತದಲ್ಲಿ ನಡೆದ ನಾಗರಿಕ ಸಮೀತಿ ಹೋರಾಟ ದಲ್ಲಿ ಪಾಲ್ಗೊಂಡಿದ್ದ ಶ್ರೀಗಳು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆ ಪಕ್ಷದ ಕುರಿತಂತೆ ನಿಂದನೆ ಮಾಡಿದ್ದಾರೆ. ಇದು ನಮ್ಮ ಸಮುದಾಯಕ್ಕೆ ನೋವು ತಂದಿದೆ ಎಂದು ಆಂದೋಲಾ ಶ್ರಿಗಳು ಸೇರಿದಂತೆ ವಿಜಯಪುರ ಶಾಸಕ ಬಸನಗೌಡ ಯತ್ನಾಳ ಹಾಗೂ ಸಂಸದ ಉಮೇಶ ಜಾಧವ ವಿರುದ್ದ ಕಲಬುರಗಿ ಸ್ಟೇಷನ್ ಬಜಾರ ಪೋಲಿಸ್ ಠಾಣೆಯಲ್ಲಿ ಪ್ರಾದೇಶಿಕ ಕುರುಬ ಸಂಘದ ಜಿಲ್ಲಾ ಉಪಾಧ್ಯಕ್ಷ. ನಾಗೇಂದ್ರಪ್ಪ ಪೂಜಾರಿ ಇವರು ಪ್ರಕರಣ ದಾಖಲಿಸಿದ್ದರು.ಈ ಪ್ರಕರಣದಲ್ಲಿ ತಮಗೆ ನೋಟೀಸ್ ಜಾರಿಯಾದ ತಕ್ಷಣವೇ ಏ. 27 ರಂದೇ ನ್ಯಾಯಲಯಕ್ಕೆ ಶರಣಾಗಿ ಶ್ರೀಗಳು ಜಾಮೀನು ಪಡೆದಿದ್ದರು. ಆದಾಗ್ಯೂ ಕೂಡಾ ಪೊಲೀಸರ ನೋಟೀಸಿಗೆ ಸ್ಪಂದಿಸಿ ಠಾಣೆಗೆ ಹಾಜರಾದಾಗ ಶ್ರೀಗಳ ಧ್ವನಿ ಮಾದರಿ ಸಂಗ್ರಹಿಸಿ ಎಫ್ ಎಸ್ ಎಲ್ ಗೆ ಕಳುಹಿಸಿದ್ದಾರೆಂದು ಗೊತ್ತಾಗಿದೆ.
ಜಾತಿ ನಿಂದನೆ ಮಾಡದಿದ್ದರೂ ರಾಜಕೀಯ ಒತ್ತಡದಿಂದ ನಮ್ಮಮೇಲೆ ಸುಳ್ಳು ಆರೋಪ ಮಾಡಿ ದೂರು ದಾಖಲಿಸಿದ್ದಾರೆಂದು ಆಂದೋಲಾ ಸಿದ್ದಲಿಂಗ ಶ್ರೀಗಳು ಕನ್ನಡಪ್ರಭ ಜೊತೆ ಮಾತನಾಡುತ್ತ ಆಕ್ರೋಶ ಹೊರಹಾಕಿದ್ದಾರೆ.ಈ ಪ್ರಕರಣದ ಬಗ್ಗೆ ನ್ಯಾಯಲದಲ್ಲಿ ಕಾನೂನು ಹೋರಾಟ ನಡೆಸುತ್ತೇವೆಂದು ಹೇಳಿರುವ ಸಿದ್ದಲಿಂಗ ಶ್ರೀಗಳು ಕಲಬುರಗಿಯಲ್ಲಿ ಪೊಲೀಸರಿಗೆ, ಜಿಲ್ಲಾ ಆಡಳಿತಕ್ಕೆ ಪ್ರಭಾವಿ ರಾಜಕೀಯದವರಿಗೆ ಒಂದು ನಿಯಮ, ಸಾಮಾನ್ಯ ಜನರಿಗೆ ಇನ್ನೊಂದು ನಿಯಮ ಎಂಬಂತೆ ಮಾಡಿದ್ದಾರೆ. ಪೊಲೀಸರ, ಇನ್ನಿತರರ ಇಂತಹ ದ್ವಂದ್ವ ನಿಲುವುಗಳನ್ನೆಲ್ಲ ಹೊರಹಾಕುತ್ತೇವೆ. ಎಲ್ಲವನನು ನ್ಯಾಯಾಲಯದ ಗಮನಕ್ಕೆ ತರುತ್ತೇವೆ ಎಂದು ಹೇಳಿದ್ದರೆ.
2023 ರ ಅಕ್ಟೋಬರ್ನಲ್ಲಿ ಜೇವರ್ಗಿಯಲ್ಲಿ ತಮಗೆ ದೂರವಾಣಿ ಕರೆ ಮಾಡಿ ಓರ್ವ ವ್ಯಕ್ತಿ ನಿಂದನೆ ಮಾಡಿದ್ದರು. ಈ ಪ್ರಕರಣದಲ್ಲಿ ಜಾತಿ ನಿಂದನೆ ಕೇಸ್ ದಾಖಲಿಸಲು ತಮ್ಮ ಶಿಷ್ಯರು, ರಾಮ ಸೇನೆಯ ಮುಖಂಡರು ಠಾಣೆಗೆ ಹೋದಾಗ ನಿಂದನೆಯಿಂದ ಬಾಧಿತರಾದವರು ಬಂದು ಪ್ರಕರಣ ದಾಖಲಿಸಲಿ, ನೀವೆಲ್ಲ ಬಂದು ದಾಖಲಿಸಿದರೆ ಅವಕಾಶ ನೀಡೋದಿಲ್ಲವಂದು ಪ್ರಕರಣವನ್ನೇ ದಾಖಲಿಸದೆ ನಿರಾಕರಿಸಲಾಗಿತ್ತು.ಇದೀಗ ನಾನು ಕಲಬುರಗಿ ನಾಗರಿಕ ಸಮೀತಿ ಹೋರಾಟದಲ್ಲಿ ಪಾಲ್ಗೊಡು ಸಿಎ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ನಿಂದಿಸಿದ್ದೇನೆ. ಅದು ಕೇವಲ ರಾಜಕೀಯವಾಗಿ ಹಾಗೂ ಆಯಾ ಸಂದರ್ಭಕ್ಕನುಗುಣವಾಗಿ ನನ್ನ ನಿಂದನೆ ಇದೆ. ಯಾವ ಹಂತದಲ್ಲೂ ಜಾತಿ ಸೂಚಕ ಪದಗಳನ್ನು ಭಾಷಣದಲ್ಲಿ ಬಳಸಿಲ್ಲ. ಆದಾಗ್ಯೂ ಇಲ್ಲಿ ನನ್ನ ಮಾತಿನಿಂದ, ನಿಂದನೆಯಿಂದ ಬಾಧಿತರಾದವರು ಯಾರೂ ಬಂದು ಪ್ರಕರಣ ಕೊಟ್ಟಿಲ್ಲ. ಯಾರೋ ಅನ್ಯರು ಪ್ರಕರಣ ಕೊಟ್ಟರೆಂದು ಪೊಲಸರು ತುಂಬ ಮುತುವರ್ಜಿಯಿಂದ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ. ಇದು ಪೊಲೀಸರ ಪಕ್ಷಪಾತಿ ಧೋರಣೆಗೆ ಹಿಡಿದ ಕನ್ನಡಿ. ಪೊಲೀಸರು ಯಾರದ್ದೋ ಪ್ರಭಾವಕ್ಕೆ ಒಳಗಾಗಿದ್ದಾರೆ, ಯಾರದೋ ಅಣತಿಯಂತೆ ತನಿಖೆಗೆ ಮುಂದಾಗುತ್ತಿರೋದು ಸ್ಪಷ್ಟವಾಗಿದೆ. ಇದೆಲ್ಲವನ್ನು ನ್ಯಾಯಾಲಯದ ಗಮನಕ್ಕೆ ತಂದು ನ್ಯಾಯಕ್ಕಾಗಿ ಕೋರುತ್ತೇವೆ ಎಂದು ಆಂದೋಲಾ ಶ್ರೀಗಳು ಹೇಳಿದ್ದಾರೆ.