ಎಚ್ಕೆಆರ್‌ ಹಾದಿಯಲ್ಲೇ ಅಂಗನವಾಡಿ ನೌಕರರ ಸಂಘಟನೆ

| Published : Dec 29 2024, 01:19 AM IST

ಸಾರಾಂಶ

ದಾವಣಗೆರೆ: ಸದಾ ಕಾರ್ಮಿಕರು, ದುಡಿಯುವ ವರ್ಗ, ಜನರ ಒಳಿತಿಗಾಗಿ ಪ್ರಾಮಾಣಿಕ ಹೋರಾಟ ಮಾಡುತ್ತಿದ್ದ ಕಾರ್ಮಿಕ ಮುಖಂಡ ದಿವಂಗತ ಎಚ್.ಕೆ.ರಾಮಚಂದ್ರಪ್ಪನವರನ್ನೇ ಸ್ಫೂರ್ತಿಯಾಗಿಟ್ಟುಕೊಂಡು, ಅದೇ ಹಾದಿಯಲ್ಲಿ ನ್ಯಾಯಕ್ಕಾಗಿ ಹೋರಾಡೋಣ ಎಂದು ರೈತ ಮತ್ತು ಕಾರ್ಮಿಕ ರಾಜ್ಯ ಮುಖಂಡ ಎಂ.ಗೋಪಾಲ ಕರೆ ನೀಡಿದರು.

ದಾವಣಗೆರೆ: ಸದಾ ಕಾರ್ಮಿಕರು, ದುಡಿಯುವ ವರ್ಗ, ಜನರ ಒಳಿತಿಗಾಗಿ ಪ್ರಾಮಾಣಿಕ ಹೋರಾಟ ಮಾಡುತ್ತಿದ್ದ ಕಾರ್ಮಿಕ ಮುಖಂಡ ದಿವಂಗತ ಎಚ್.ಕೆ.ರಾಮಚಂದ್ರಪ್ಪನವರನ್ನೇ ಸ್ಫೂರ್ತಿಯಾಗಿಟ್ಟುಕೊಂಡು, ಅದೇ ಹಾದಿಯಲ್ಲಿ ನ್ಯಾಯಕ್ಕಾಗಿ ಹೋರಾಡೋಣ ಎಂದು ರೈತ ಮತ್ತು ಕಾರ್ಮಿಕ ರಾಜ್ಯ ಮುಖಂಡ ಎಂ.ಗೋಪಾಲ ಕರೆ ನೀಡಿದರು.

ನಗರದ ಪಾಲಿಕೆ ಆವರಣದ ಚನ್ನಗಿರಿ ರಾಧಮ್ಮ ರಂಗಪ್ಪ ಸ್ಮಾರಕ ರಂಗ ಮಂದಿರದಲ್ಲಿ ಶನಿವಾರ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸಂಘ(ಎಚ್‌ಕೆಆರ್ ಬಣ) ಉದ್ಘಾಟಿಸಿ ಮಾತನಾಡಿದ ಅವರು, ಸಂಘಟನೆಗೆ ಎಚ್ಕೆ ರಾಮಚಂದ್ರಪ್ಪನವರೇ ಸ್ಫೂರ್ತಿಯಾಗಿದ್ದು, ಇಂತಹ ನಾಯಕರು ತೋರಿದ ಹಾದಿಯಲ್ಲೇ ನ್ಯಾಯಕ್ಕಾಗಿ ಹೋರಾಡೋಣ ಎಂದು ಹೇಳಿದರು.

ಉತ್ತಮ ನಾಯಕತ್ವ, ಸಂಘಟನೆ ಬಲ ಹೊಂದಿದ್ದ ರಾಮಚಂದ್ರಪ್ಪನವರ ಧ್ಯೇಯದೊಂದಿಗೆ ಸಂಘಟನೆ ಮುಂದಡಿ ಇಡಬೇಕು. 1975ರಲ್ಲಿ ಅಂದಿನ ಸರ್ಕಾರ ಗರ್ಭಿಣಿ, ಬಾಣಂತಿ, ಶಿಶುಗಳಿಗೆ ಪೌಷ್ಟಿಕ ಆಹಾರ ಒದಗಿಸುವ ಸದುದ್ದೇಶದಿಂದ ಜಾರಿಗೊಳಿಸಿದ್ದ ಯೋಜನೆ ಯಶಸ್ಸಿಗೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ನಿರಂತರ ಪರಿಶ್ರಮ ದೊಡ್ಡದಿದೆ ಎಂದರು.

ಆಳುವ ಸರ್ಕಾರಗಳು ದೇಶದ ಸುಮಾರು 12 ಕೋಟಿ ಫಲಾನುಭವಿಗಳ ಸೇವೆಯನ್ನು ನಿರಂತರ ಮಾಡಿಕೊಂಡು ಬಂದ ಅಂಗನವಾಡಿ ನೌಕರರ ಸಮಸ್ಯೆ ಆಲಿಸುವ, ಬೇಡಿಕೆಗಳನ್ನು ಈಡೇರಿಸುವ ಕೆಲಸ ಮಾಡದೆ, ಸಂಪೂರ್ಣ ಕಡೆಗಣಿಸುತ್ತಾ ಬಂದಿವೆ. ಇಂತಹ ಪರಿಸ್ಥಿತಿಯಲ್ಲಿ ಎಚ್ಕೆಆರ್ ರಂತಹ ನಾಯಕರು ಹಾಕಿಕೊಟ್ಟ ಸಂಘಟನೆ, ಹೋರಾಟದ ಹಾದಿಯಲ್ಲಿ ನ್ಯಾಯ ಸಿಗುವವರೆಗೂ ಹೋರಾಟವನ್ನು ನಡೆಸಬೇಕೆಂದು ಹೇಳಿದರು. ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಜನಪರ ಸಂಘಟನೆಗಳು ನೊಂದವರಿಗೆ ಶಕ್ತಿಯಾಗುತ್ತವೆ. ಈ ನಿಟ್ಟಿನಲ್ಲಿ ಎಚ್ಕೆಆರ್ ಬಣವು ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಕಾರ್ಯ ನಿರ್ವಹಿಸಲಿದೆ. ಮಾಯಕೊಂಡ ಕ್ಷೇತ್ರದ ಅಂಗನವಾಡಿ ಕೇಂದ್ರಗಳಲ್ಲಿ ಯಾವುದೇ ಸಮಸ್ಯೆ ಇದ್ದರೂ, ನನ್ನ ಗಮನಕ್ಕೆ ತಂದರೆ, ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚಿಸಿ, ಸಮಸ್ಯೆ ಪರಿಹರಿಸಲು ಶ್ರಮಿಸುವೆ. ಸರ್ಕಾರದ ಮಟ್ಟದಲ್ಲಿ ನಿಮ್ಮ ಬೇಡಿಕೆಗಳ ಬಗ್ಗೆ ಪ್ರಸ್ತಾಪಿಸಿ, ನ್ಯಾಯ ಕೊಡಿಸುವ ಕೆಲಸ ಮಾಡುವೆ ಎಂದರು.

ನಗರವಾಣಿ ಸಹ ಸಂಪಾದಕ ಬಿ.ಎನ್.ಮಲ್ಲೇಶ್ ಮಾತನಾಡಿ, ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು ಹಲವಾರು ಬಣಗಳಾಗಿ ಹೋಗಿವೆ. ಇದೀಗ ಭಾರತೀಯ ಕಮ್ಯುನಿಷ್ಟ್ ಪಕ್ಷದಲ್ಲೂ ಬಣಗಳುಂಟಾಗುತ್ತಿರುವುದು ಬೇಸರ ತಂದಿದೆ. ಸಂಘಟನೆ ಒಡೆಯಬಾರದು. ಬಣಗಳು ನಮ್ಮಲ್ಲಿನ ಶಕ್ತಿ ಕುಂದಿಸುತ್ತವೆ. ಹಾಗಾಗಿ ಯಾವದೇ ಅನ್ಯಾಯ, ಅಸಮಾಧಾನ, ಬೇಸರ, ಭಿನ್ನಾಭಿಪ್ರಾಯಗಳಿದ್ದರೆ ನಾಲ್ಕು ಗೋಡೆ ಮಧ್ಯೆ ಕುಳಿತು, ಚರ್ಚಿಸಿ, ಸರಿಪಡಿಸಿಕೊಳ್ಳುವುದು ಸೂಕ್ತ ಎಂದು ಕಿವಿಮಾತು ಹೇಳಿದರು.

ಪ್ರಸ್ತುತ ದಿನಮಾನಗಳಲ್ಲಿ ಕಮ್ಯುನಿಷ್ಟ್ ಪಕ್ಷಕ್ಕೆ ಸಂಬಂಧಿಸಿದಂತೆ ದಾವಣಗೆರೆಯಲ್ಲಿ ನಾಯಕತ್ವದ ಕೊರತೆ ಇದೆಯೆಂಬುಂತೆ ಭಾಸವಾಗುತ್ತಿದೆ. ಒಬ್ಬರನ್ನು ಉಚ್ಛಾಟಿಸುವ ಮೊದಲು ಪಕ್ಷ ಕ್ಕಾಗಲೀ, ಸಂಘ, ಸಂಸ್ಥೆ, ಸಂಘಟನೆಗೆ ಅಂತಹವರ ಕೊಡುಗೆ ಎಷ್ಟಿದೆಯೆಂಬುದನ್ನೂ ಆಲೋಚಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಿಪಿಐನಲ್ಲಿ ಆದ ಬೆಳವಣಿಗೆಯಿಂದ ಬಣಗಳಾಗುತ್ತಿರುವುದನ್ನು ಗಂಭೀರವಾಗಿ ಆಲೋಚಿಸಬೇಕಿದೆ. ಸಿಪಿಐನ ಎಲ್ಲಾ ಮುಖಂಡರೂ ಒಗ್ಗೂಡಿಸಿಕೊಂಡು, ಅಸಮಾಧಾನ ನಿವಾರಿಸಿ, ಸಂಘಟನೆಯಲ್ಲಿ ಒಗ್ಗಟ್ಟನ್ನು ಮೂಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣಕುಮಾರ್, ಹಿರಿಯ ವಕೀಲ ಎ.ವೈ.ಕೃಷ್ಣಮೂರ್ತಿ, ವಿಶಾಲಾಕ್ಷಿ ಮೃತ್ಯುಂಜಯ, ಜಿ.ರೇಣುಕಾ, ಕೆ.ಸುಧಾರ, ಡಿ.ಎಂ.ರೇಣುಕಾ, ಎಂ.ಸರ್ವಮ್ಮ, ಸಿ.ಬಿ.ಕಾಳಮ್ಮ, ವಿ.ಸಾವಿತ್ರಮ್ಮ, ಎಚ್.ಚೌಡಮ್ಮ, ಜೆ.ಎಂ.ಉಮಾ, ಎಂ.ಎಸ್.ಹೊನ್ನಮ್ಮ, ಭರಮಕ್ಕ, ಗೀತಾ, ಎ.ಮಂಜುಳಾ, ವಿಶಾಲಮ್ಮ ಇತರರು ಇದ್ದರು.