ಕಾರವಾರದಲ್ಲಿ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ

| Published : Feb 10 2025, 01:50 AM IST

ಸಾರಾಂಶ

ತಾಳ್ಮೆ, ಏಕಾಗ್ರತೆ ಬರಲು ಗಾಳ ಹಾಕಿ ಮೀನು ಹಿಡಿಯುವುದು ಸಹಕಾರಿ ಆಗುತ್ತದೆ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ತಿಳಿಸಿದರು.

ಕಾರವಾರ: ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ ಉತ್ತಮ ಸ್ಪರ್ಧೆಯಾಗಿದ್ದು, ವಿದ್ಯಾರ್ಥಿಗಳಿಗೆ ತಾಳ್ಮೆಯ ಪಾಠ ಹೇಳಿಕೊಡುವಾಗ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ ಆಯೋಜನೆ ಮಾಡಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ತಿಳಿಸಿದರು.ಇಲ್ಲಿನ ಯುವ ಮೀನುಗಾರರ ಸಂಘರ್ಷ ಸಮಿತಿ ವತಿಯಿಂದ ನಗರದ ಬೈತಖೋಲದ ಬ್ರೇಕ್ ವಾಟರ್ ಬಳಿ ಭಾನುವಾರ ಆಯೋಜಿಸಿದ್ದ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆಯಲ್ಲಿ ಮಾತನಾಡಿ, ತಾಳ್ಮೆ, ಏಕಾಗ್ರತೆ ಬರಲು ಗಾಳ ಹಾಕಿ ಮೀನು ಹಿಡಿಯುವುದು ಸಹಕಾರಿ ಆಗುತ್ತದೆ ಎಂದ ಅವರು, ಮೀನುಗಾರ ಮುಖಂಡರಾಗಿದ್ದ ದಿ. ರಾಜು ತಾಂಡೇಲ್ ಅವರ ಅನುಪಸ್ಥಿತಿ ನಮಗೆ ಬೇಸರ ಉಂಟು ಮಾಡುವಂತಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಮಾತನಾಡಿ, ಸಾಗರಮಾಲಾ ಸಂದರ್ಭದಲ್ಲಿ ದಿ. ರಾಜು ತಾಂಡೇಲ್ ಅವರೊಂದಿಗೆ ನನ್ನ ಒಡನಾಟವಿತ್ತು. ಅವರ ಸರಳತೆ, ಮುಗ್ಧತೆ, ಆತ್ಮೀಯತೆ ಎಂಥವರಿಗೂ ಹತ್ತಿರವಾಗುವಂತಹವರಾಗಿದ್ದರು. ಅವರು ಎಲ್ಲ ಸಮಾಜಕ್ಕೆ ಬೇಕಾದವರಾಗಿದ್ದರು. ನಗರಸಭೆ ವ್ಯಾಪ್ತಿಯ ಫ್ಲೈಒವರ್‌ಗೆ ರಾಜು ತಾಂಡೇಲ್ ಅವರ ಹೆಸರನ್ನು ಇಡುವ ಮೂಲಕ ಅವರ ಹೆಸರು ಶಾಶ್ವತವಾಗಿರುವಂತೆ ಮಾಡಬೇಕು. ನಗರಸಭೆಯಿಂದ ಠರಾವು ಮಾಡಿ ಕಳುಹಿಸಿದರೆ ಸರ್ಕಾರದ ಮಟ್ಟದಲ್ಲಿ ತಾವು ಮಾಡಿಸಿಕೊಂಡು ಬರುವುದಾಗಿ ತಿಳಿಸಿದರು.ಬಹುಮಾನ: ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆಯಲ್ಲಿ ತಿಲಕ ಗೌಡ ೫೦ ಮೀನು ಹಿಡಿಯುವ ಮೂಲಕ ಪ್ರಥಮ, ಗಣೇಶ ಗುನಗಿ ೩೬ ಮೀನು ಹಿಡಿಯುವ ಮೂಲಕ ದ್ವಿತೀಯ, ನಿರಂಜನ ಗೌಡ ೩೦ ಮೀನು ಹಿಡಿಯುವ ಮೂಲಕ ತೃತೀಯ ಸ್ಥಾನ ಪಡೆದರು.ಕಾರವಾರ, ಅಂಕೋಲಾ, ಗೋಕರ್ಣ, ಕುಮಟಾ, ಹೊನ್ನಾವರ, ಭಟ್ಕಳ, ಮಂಗಳೂರು, ಪುಣೆ ಭಾಗಗಳಿಂದಲೂ ಅಂದಾಜು ೪೭ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸಿದ್ದರು. ಕಾಳೇರ, ತಾಂಬೂಸ್, ಕುರುಡೆ ಸೇರಿದಂತೆ ಹಲವು ಬಗೆಯ ಮೀನುಗಳನ್ನು ಸ್ಪರ್ಧಾಳುಗಳು ಹಿಡಿದರು. ಇಲ್ಲಿನ ನಗರಸಭೆಯ ಅಧ್ಯಕ್ಷ ರವಿರಾಜ ಅಂಕೋಲೇಕರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸದಸ್ಯರಾದ ರಾಜೇಶ ಮಾಜಾಳಿಕರ್, ಸ್ನೇಹಲ್ ಹರಿಕಂತ್ರ, ಉ.ಕ. ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ವೆಂಕಟೇಶ ತಾಂಡೇಲ, ಕಾರ್ಯಕ್ರಮದ ಆಯೋಜಕ ವಿನಾಯಕ ಹರಿಕಂತ್ರ ಮೊದಲಾದವರು ಇದ್ದರು.

ಸವಣಗೇರಿಯಲ್ಲಿ ಅನ್ನದಾತರಿಗೆ ಗೌರವ ಸಮರ್ಪಣೆ

ಯಲ್ಲಾಪುರ: ತಾಲೂಕಿನ ಸವಣಗೇರಿ ಸ.ಹಿ.ಪ್ರಾ. ಶಾಲೆಯಲ್ಲಿ ಗುರು ಗೌರವ, ಅನ್ನದಾತರಿಗೆ ಗೌರವ ಸಮರ್ಪಣೆಯ ಅಪರೂಪದ ಕಾರ್ಯಕ್ರಮ ಶನಿವಾರ ನಡೆಯಿತು.

ಶಾಲೆಯ ಹಳೆಯ ವಿದ್ಯಾರ್ಥಿ, ಮಾಜಿ ಯೋಧ, ಪ್ರಸ್ತುತ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಜಾನ್ ಪೆದ್ರು ದಡೆದವರ್ ಅವರು ತಮ್ಮ ವಿದ್ಯಾರ್ಜನೆಗೆ ಪ್ರೋತ್ಸಾಹಿಸಿದವರನ್ನು ಗೌರವಿಸಿ, ಕೃತಜ್ಞತೆ ಸಲ್ಲಿಸಿದರು.ವಿದ್ಯಾಭ್ಯಾಸದ ಸಂದರ್ಭದಲ್ಲಿ ಅನ್ನದಾನ ಮಾಡಿದ ಸ್ಥಳೀಯ ಹಿರಿಯರಾದ ಪರಮೇಶ್ವರ ಹೆಗಡೆ ಕೊಂಕಣಕೊಪ್ಪ, ಕೃಷ್ಣ ಹೆಗಡೆ ಕೊಂಕಣಕೊಪ್ಪ, ಗೋಪಾಲ ಭಟ್ಟ ಬೆಳಸೂರು ಅವರನ್ನು ಅವರನ್ನು ಗೌರವಿಸಲಾಯಿತು. ಕಲಿಸಿದ ಶಿಕ್ಷಕ ದಿ. ರಾಮಾ ನಾಯ್ಕ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಗಣಪತಿಗಲ್ಲಿ ಶಾಲೆಯ ಮುಖ್ಯಾಧ್ಯಾಪಕ ಆರ್.ಐ. ನಾಯ್ಕ ಮಕ್ಕಳಿಗೆ ಬಿಸಿಯೂಟದ ತಟ್ಟೆ ವಿತರಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಶಿಲ್ಪಾ ನಾಯ್ಕ, ಸದಸ್ಯ ಸುಬ್ಬಣ್ಣ ಉದ್ದಾಬೈಲ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ, ಟಿಎಸ್ಎಸ್ ನಿರ್ದೇಶಕ ಕೃಷ್ಣ ಹೆಗಡೆ ಜೂಜಿನಬೈಲ್, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಶ್ರೀಪಾದ ಹೆಗಡೆ ಇತರರಿದ್ದರು.