ಸಾರಾಂಶ
ಹುಬ್ಬಳ್ಳಿ:
ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ನಡೆದ ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮಂಗಳವಾರ ಸಂಜೆಯೊಳಗೆ (ಮೇ 21) ಆದೇಶ ಹೊರಡಿಸಲಾಗುವುದು ಎಂದು ತಿಳಿಸಿರುವ ಗೃಹ ಸಚಿವ ಜಿ. ಪರಮೇಶ್ವರ, ಯಾವುದೇ ಕಾರಣಕ್ಕೂ ನೇಹಾ ಹಾಗೂ ಅಂಜಲಿ ಕೊಲೆ ಪ್ರಕರಣಗಳನ್ನು ಸಿಬಿಐಗೆ ವಹಿಸುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.ಕಾಲೇಜ್ ಕ್ಯಾಂಪಸ್ನಲ್ಲಿ ಹತ್ಯೆಯಾಗಿರುವ ನೇಹಾ ಹಿರೇಮಠ ಹಾಗೂ ಇತ್ತೀಚಿಗೆ ಕೊಲೆಯಾಗಿರುವ ಅಂಜಲಿ ಅಂಬಿಗೇರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ಪ್ರಕಟಿಸಿದರು.
ಈಗಾಗಲೇ ನೇಹಾ ಹಿರೇಮಠ ಕೇಸ್ನ್ನು ಸಿಐಡಿಗೆ ವಹಿಸಲಾಗಿದೆ. ಅದರ ತನಿಖೆ ಕೂಡ ನಡೆಯುತ್ತಿದೆ. ಅದರಂತೆ ಅಂಜಲಿ ಅಂಬಿಗೇರ ಕೇಸ್ನ್ನೂ ಸಿಐಡಿಗೆ ವಹಿಸಲಾಗುವುದು. ಈ ಕುರಿತು ಆದೇಶವನ್ನು ಶೀಘ್ರದಲ್ಲೇ ಗೃಹ ಇಲಾಖೆ ಹೊರಡಿಸಲಿದೆ ಎಂದು ತಿಳಿಸಿದರು.ಈ ಎರಡೂ ಪ್ರಕರಣಗಳನ್ನು ಸಿಬಿಐಗೆ ವಹಿಸುವುದಿಲ್ಲ. ರಾಜ್ಯದ ಪೊಲೀಸರು ಸಮರ್ಥರಿದ್ದಾರೆ. ಅವರೇ ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಹೊರಗೆಳೆಯುತ್ತಾರೆ ಎಂದು ಡಾ.ಪರಮೇಶ್ವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸ್ಥಳೀಯ ಪೊಲೀಸರು ಸಮರ್ಥರಿಲ್ಲವೇ ಎಂಬ ಪ್ರಶ್ನೆಗೆ, ಹಾಗೇನೂ ಇಲ್ಲ. ಸ್ಥಳೀಯ ಪೊಲೀಸರು ಸಮರ್ಥರೇ ಇದ್ದಾರೆ. ಕೆಲವೊಂದಿಷ್ಟು ಸೂಕ್ಷ್ಮ ಪ್ರಕರಣಗಳಲ್ಲಿ ಯಾವುದೇ ಇನ್ಫ್ಯುಲೆನ್ಸ್ ಆಗಬಾರದು ಎಂಬ ಕಾರಣಕ್ಕೆ ಸಿಐಡಿಗೆ ನೀಡಲಾಗುತ್ತಿದೆ ಅಷ್ಟೇ ಎಂದರು.ಕೊಲೆ ಪ್ರಕರಣಗಳಲ್ಲಿ ಕೆಲ ನಾಯಕರು ರಾಜಕೀಯ ಬಣ್ಣ ಕಟ್ಟುವ ಪ್ರಯತ್ನ ಮಾಡಿದ್ದರು. ಆದರೆ ಸಿಐಡಿ ತನಿಖೆಯಿಂದ ಎಲ್ಲ ಸತ್ಯಾಸತ್ಯತೆ ಹೊರಬರಲಿದೆ. ಅಧಿಕಾರಿಗಳ ಮೇಲೆ ಯಾವುದೇ ಒತ್ತಡ ಹಾಕುವುದಿಲ್ಲ. ಯಾವುದೇ ಕಾರಣಕ್ಕೂ ತನಿಖೆಯಲ್ಲಿ ನಿರಾಸಕ್ತಿ ಆಗಲು ಬಿಡಲ್ಲ ಎಂದು ತಿಳಿಸಿದರು.
ಅಂಜಲಿ ಕೊಲೆ ಬೆದರಿಕೆ ಬಗ್ಗೆ ಪೊಲೀಸರು ನಿರ್ಲಕ್ಷ್ಯ ಮಾಡಿದ್ದು ಕಂಡು ಬಂದಿದೆ. ಈ ಕಾರಣಕ್ಕಾಗಿ ಅಲ್ಲಿನ ಸಿಬ್ಬಂದಿ, ಪಿಐ ಅವರನ್ನು ಅಮಾನತುಗೊಳಿಸಲಾಗಿದೆ. ಡಿಸಿಪಿ ಕೂಡ ಜವಾಬ್ದಾರಿಯಾದ ಕಾರಣ ಅವರನ್ನು ಅಮಾನತು ಮಾಡಲಾಗಿದೆ. ಇದೀಗ ತನಿಖೆ ನಡೆಯುತ್ತಿದೆ. ಮತ್ಯಾವ ಅಧಿಕಾರಿ ನಿರ್ಲಕ್ಷ್ಯ ಮಾಡಿದ್ದಾರೋ ಅವರ ಮೇಲೆಲ್ಲ ಕ್ರಮವಾಗುತ್ತದೆ ಎಂದು ಸ್ಪಷ್ಟಪಡಿಸಿದರು.ಮಾಧ್ಯಮಗೋಷ್ಠಿಯಲ್ಲಿ ಶಾಸಕರಾದ ಎನ್.ಎಚ್. ಕೋನರಡ್ಡಿ, ಪ್ರಸಾದ ಅಬ್ಬಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಅನಿಲಕುಮಾರ ಪಾಟೀಲ, ಅಲ್ತಾಫ್ ಹಳ್ಳೂರ, ಮುಖಂಡರಾದ ಸದಾನಂದ ಡಂಗನವರ, ರಾಜಶೇಖರ ಮೆಣಸಿನಕಾಯಿ ಸೇರಿದಂತೆ ಹಲವರಿದ್ದರು.ಸಿಎಂ ಜತೆ ಚರ್ಚಿಸಿ ಕ್ರಮ:
ಅಂಜಲಿ ಅಂಬಿಗೇರ ಅವಳದ್ದು ಕಡುಬಡತನದ ಕುಟುಂಬ. ಧನಸಹಾಯ ಮಾಡುವಂತೆ, ಸಹೋದರಿಯೊಬ್ಬಳ್ಳಿಗೆ ಸರ್ಕಾರಿ ನೌಕರಿ, ವಾಸಿಸಲು ಮನೆ ವ್ಯವಸ್ಥೆಯನ್ನು ಆ ಕುಟುಂಬ ಕೇಳಿಕೊಂಡಿದೆ. ಆದರೆ ಸದ್ಯ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಯಾವುದೇ ಪ್ರಕಟಣೆ ಮಾಡಲು ಬರುವುದಿಲ್ಲ. ಹೀಗಾಗಿ ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಜಿ. ಪರಮೇಶ್ವರ ತಿಳಿಸಿದರು.