ಸಾರಾಂಶ
ಹುಣಸಗಿ : ಹುಬ್ಬಳ್ಳಿಯ ಯುವತಿ ಅಂಜಲಿಯ ಅಮಾನುಷ ಹತ್ಯೆಯ ಪ್ರಕರಣದ ಆರೋಪಿ ಗಿರೀಶ ಎಂಬಾತನಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಹಾಗೂ ನಿರ್ಲಕ್ಷ್ಯತನ ತೋರಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಉಗ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗುರುವಾರ ಪಟ್ಟಣದಲ್ಲಿ ಅಖಿಲ ಕರ್ನಾಟಕ ಕೋಲಿ ಕಬ್ಬಲಿಗ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಿ, ಬಳಿಕ ತಹಸೀಲ್ದಾರ್ ಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಸಂಘಟನೆ ಮುಖಂಡರು, ಯುವತಿ ಅಂಜಲಿಗೆ ದುಷ್ಕರ್ಮಿ ಗಿರೀಶ ಎಂಬಾತನು ತನ್ನನ್ನು ಪ್ರೀತಿಸದಿದ್ದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದನು. ಈ ಕುರಿತಂತೆ ಮನೆಯವರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರೂ ಸಹ ತುರ್ತು ಕ್ರಮ ಕೈಗೊಳ್ಳಬೇಕಿದ್ದ ಪೊಲೀಸ್ ಅಧಿಕಾರಿಗಳು ತೀವ್ರ ನಿರ್ಲಕ್ಷ್ಯ ತೋರಿದ್ದರಿಂದಲೆ ಯುವತಿ ಅಂಜಲಿ ಕೊಲೆಗೀಡಾಗಲು ಕಾರಣವಾಗಿದೆ ಎಂದು ಆರೋಪಿಸಿದರು.
ಕೂಡಲೇ ಕೊಲೆ ಮಾಡಿದ ಆರೋಪಿ ಗಿರೀಶನಿಗೆ ಗಲ್ಲು ಶಿಕ್ಷೆ ವಿಧಿಸುವುದರ ಜೊತೆಗೆ ಪೊಲೀಸ್ ಅಧಿಕಾರಿಗಳ ವಿರುದ್ಧ ಉಗ್ರ ಕ್ರಮ ಕೈಗೊಳ್ಳಬೇಕು ಹಾಗೂ ಅಂಜಲಿ ಕುಟುಂಬದವರಿಗೆ 50 ಲಕ್ಷ ರು. ಪರಿಹಾರ ಧನ ನೀಡಬೇಕೆಂದು ಒತ್ತಾಯಿಸಿದರು.
ನಂತರ ಸರಕಾರಕ್ಕೆ ಬರೆದ ಮನವಿಪತ್ರವನ್ನು ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ ಅವರಿಗೆ ಸಲ್ಲಿಸಲಾಯಿತು.
ಈ ವೇಳೆ ಸಂಘದ ಅಧ್ಯಕ್ಷ ಸಂತೋಷ ಡಂಗಿ, ಮುಖಂಡರಾದ ಬಸನಗೌಡ ಎನ್.ಪಾಟೀಲ್, ಮಲ್ಲು ಬಿ. ಬಾಕಲಿ, ಆರ್.ಎಲ್. ಸುಣಗಾರ, ಹನುಮಂತ್ರಾಯ ಕವಡಿಮಟ್ಟಿ, ಶಿವಣ್ಣ, ಮಲ್ಲಣ್ಣ ಡಂಗಿ, ಪರಮಣ್ಣ, ರಾಜೇಶ ಅಂಬಿಗೇರ, ಸಂಗಣ್ಣ, ಸಿದ್ದಣ್ಣ, ಈರಣ್ಣ ಗುಂಡಲಗೇರಿ, ಹನುಮಂತ್ರಾಯ ತಳ್ಳಳ್ಳಿ, ಯಲ್ಲಪ್ಪ, ಅಂಬರೀಶ್ ಸೇರಿ ಅನೇಕರಿದ್ದರು.