ಸಾರಾಂಶ
ತಾಲೂಕಿನ ಕುಂಕಾನಾಡು ಗ್ರಾಮದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು.
ರಥದ ಸುತ್ತ ಪಾನಕ ಬಂಡಿ ಓಡಿಸಿ ಹರಕೆ ಸಲ್ಲಿಕೆ
ಕನ್ನಡಪ್ರಭ ವಾರ್ತೆ,ಕಡೂರುತಾಲೂಕಿನ ಕುಂಕಾನಾಡು ಗ್ರಾಮದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು. ಶ್ರೀ ಆಂಜನೇಯಸ್ವಾಮಿಯವರಿಗೆ ಮೂಲಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ವಿಶೇಷ ಅಭಿಷೇಕ, ಪೂಜಾ ಕೈಂಕರ್ಯಗಳು ನೆರವೇರಿದ ನಂತರ ಮೂಲ ದೇವರಿಗೆ ಬೆಳ್ಳಿಕವಚ ಧಾರಣೆ ನಂತರ ಅಲಂಕಾರ ನೆರವೇರಿತು. ಆಂಜನೇಯ ಉತ್ಸವ ಮೂರ್ತಿಯನ್ನು ಸಕಲ ವಾದ್ಯಗಳ ಸಮೇತ ಆಲಂಕೃತ ರಥದಲ್ಲಿ ಪ್ರತಿಷ್ಟಾಪಿಸ ಲಾಯಿತು. ಬಲಿಪೂಜೆ ನಂತರ ನೆರೆದ ಭಕ್ತರು ಸುಡು ಬಿಸಿಲಲ್ಲೂ ಉತ್ಸಾಹದಿಂದ ರಥವನ್ನು ಎಳೆದು ಸಂಭ್ರಮಿಸಿದರು. ಸುತ್ತಮುತ್ತಲ ಗ್ರಾಮಸ್ಥರು ಆಲಂಕೃತ ಪಾನಕದ ಬಂಡಿಯನ್ನು ರಥದ ಸುತ್ತ ಓಡಿಸಿ ಹರಕೆ ತೀರಿಸಿದರು. ರಥೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ಪಾನಕ,ಕೋಸಂಬರಿ ಮತ್ತು ಮಜ್ಜಿಗೆ ವಿತರಿಸಲಾಯಿತು.
ಕುಂಕಾನಾಡು ಗ್ರಾಮದ ಆಂಜನೇಯ ಸ್ವಾಮಿ ರಥೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಸೇರುವುದು ಮೊದಲಿನಿಂದಲೂ ನಡೆದು ಬಂದ ಪದ್ಧತಿಯಾಗಿದೆ. ಸೂರ್ಯ ಮಂಡಲದೊಂದಿಗೆ ಸ್ವಾಮಿ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು. ಮಂಗಳವಾರ ಗ್ರಾಮ ದೇವತೆ ಶ್ರೀಅಂತರಘಟ್ಟಮ್ಮ ದೇವಿಯವರ ಬಾನ ಸೇವೆ ಹಾಗೂ ವಿಶೇಷವಾಗಿ ಮಹಿಷ ಉತ್ಸವ ನಡೆಯಲಿದೆ.28ಕೆಕೆಡಿಯು1.ಕುಂಕಾನಾಡು ಗ್ರಾಮದಲ್ಲಿ ಶ್ರೀ ಆಂಜನೇಯಸ್ವಾಮಿ ರಥೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು.