ಅಂಜಿನಪ್ಪರ ಕೃತಿಗಳೇ ಅವರ ಜೀವಪರ ನಿಲುವಿಗೆ ಸಾಕ್ಷಿ: ಡಾ.ಮೀರಸಾಬಿಹಳ್ಳಿ ಶಿವಣ್ಣ

| Published : Mar 27 2024, 01:06 AM IST

ಅಂಜಿನಪ್ಪರ ಕೃತಿಗಳೇ ಅವರ ಜೀವಪರ ನಿಲುವಿಗೆ ಸಾಕ್ಷಿ: ಡಾ.ಮೀರಸಾಬಿಹಳ್ಳಿ ಶಿವಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಪ್ರೊ.ಡಿ.ಅಂಜಿನಪ್ಪ ಅವರ ಜೀವ ಚಿಗುರಿನ ಧ್ಯಾನ ನುಡಿನಮನ, ಕೃತಿಗಳ ಅವಲೋಕನ, ಕವನ ಸಂಕಲನ ಬಿಡುಗಡೆಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಪ್ರೊ.ಅಂಜಿನಪ್ಪ ಅವರಲ್ಲಿದ್ದ ಜೀವಪರ ನಿಲುವುಗಳಿಗೆ ಅವರ ಕೃತಿಗಳೇ ಸಾಕ್ಷಿ ಎಂದು ಖ್ಯಾತ ಜಾನಪದ ವಿದ್ವಾಂಸ ಡಾ.ಮೀರಸಾಬಿಹಳ್ಳಿ ಶಿವಣ್ಣ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಎಂ.ಜಯಣ್ಣ ಚಾರಿಟಬಲ್ ಟ್ರಸ್ಟ್, ಅರುಂಧತಿ ಪ್ರಕಾಶನ, ಸಂಯುಕ್ತಾಶ್ರಯದಲ್ಲಿ ರೋಟರಿ ಬಾಲಭವನದಲ್ಲಿ ಏರ್ಪಡಿಸಲಾಗಿದ್ದ ಪ್ರೊ.ಡಿ.ಅಂಜಿನಪ್ಪ ಜೀವ ಚಿಗುರಿನ ಧ್ಯಾನ ನುಡಿನಮನ, ಕೃತಿಗಳ ಅವಲೋಕನ, ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಅವರು ಡಿ.ಅಂಜಿನಪ್ಪ ನವರ ಅಕಾಲಿಕ ನಿಧನ ಸಾಹಿತ್ಯ ಲೋಕಕ್ಕೆ ದೊಡ್ಡ ನಷ್ಟ ಎಂದರು.

ಡಿ.ಅಂಜಿನಪ್ಪ ಆರು ವರ್ಷಗಳ ಅವಧಿಯಲ್ಲಿ ಐದು ಕೃತಿಗಳನ್ನು ಪ್ರಕಟಿಸಿರುವುದು ಸುಲಭದ ಕೆಲಸವಲ್ಲ. ಅನಾರೋಗ್ಯಕ್ಕೆ ತುತ್ತಾಗಿ ಎಲ್ಲರನ್ನೂ ಅಗಲಿರುವುದು ಬೇಸರ ತಂದಿದೆ. ಅವರ ಅಪ್ರಕಟಿತ ಕೃತಿಗಳನ್ನು ಕುಟುಂಬದವರು ನೀಡಿದರೆ ನಾನೇ ಪ್ರಕಟಗೊಳಿಸುತ್ತೇನೆ, ನನಗೆ ಪರಮ ಆಪ್ತ ಶಿಷ್ಯನಾಗಿದ್ದ ಡಿ.ಅಂಜಿನಪ್ಪ ಅಪಾರವಾದ ಪ್ರೀತಿ ಗೌರವವಿಟ್ಟುಕೊಂಡಿದ್ದ. ಅದ್ಭುತವಾದ ವ್ಯಕ್ತಿತ್ವ ಆತನದು ಎಂದು ಶ್ಲಾಘಿಸಿದರು.

ಸಾಹಿತಿ ಡಾ.ಶಿವಲಿಂಗಪ್ಪ ಮೀರಾಸಾಬಿಹಳ್ಳಿ ಮಾತನಾಡಿಮ ಡಿ.ಅಂಜಿನಪ್ಪ ಒಬ್ಬ ಪ್ರತಿಭಾವಂತ, ಮಿತ ಭಾಷಿ, ನಿಷ್ಟುರತೆಯ ಸ್ವಭಾವದವರು. ಗಮನಾರ್ಹವಾದ ಹೊಸತನದ ವಿಮರ್ಶಕ. ಅವರ ಕೃತಿಗಳನ್ನು ಓದಿದಾಗ ಅವರ ಬರವಣಿಗೆಗೆ ಎಂತಹ ಶಕ್ತಿ ಇತ್ತು ಎನ್ನುವುದು ಗೊತ್ತಾಗುತ್ತದೆ. ವಿಮರ್ಶಕನಿಗೆ ಮುಕ್ತಾಯವಿಲ್ಲದ ಅಧ್ಯಯನ ಬೇಕು. ಬರಹಗಾರನಿಗೆ ಹಾಗೂ ವಿಮರ್ಶಕನಿಗೆ ಸಾಮಾಜಿಕ ಹೊಣೆಗಾರಿಕೆಯಿರಬೇಕು. ಕವಿ, ಲೇಖಕ ಕೃತಿಗಳನ್ನು ರಚಿಸಬೇಕಾದರೆ ಮುಖ್ಯವಾದ ಕಾರಣಗಳಿರುತ್ತವೆ. ವಿಮರ್ಶೆಯ ಪಥವನ್ನು ಡಿ.ಅಂಜಿನಪ್ಪ ತಾನೇ ಸೃಷ್ಟಿಕೊಂಡವನು. ಸಮ ಸಮಾಜ ಸಾಮಾಜಿಕ ನ್ಯಾಯದ ಪರಿಕಲ್ಪನೆ ಕೃತಿಯಲ್ಲಿರಬೇಕು ಎಂದರು.

ಕೃತಿಗಳ ಅವಲೋಕನ ಹಾಗೂ ಕವನ ಸಂಕಲನ ಅರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಹಾಗೂ ಚಿಂತಕ ಪ್ರೊ.ಹೆಚ್.ಲಿಂಗಪ್ಪ ಮಾತನಾಡಿ, ಡಿ.ಅಂಜಿನಪ್ಪ ಅವೆ ವಿಮರ್ಶೆಯಲ್ಲಿ ಡಿ.ಆರ್.ನಾಗರಾಜ್‍ರನ್ನೂ ಸರಿಗಟ್ಟುವಂತಹ ಪ್ರಮುಖರಾಗಿದ್ದರು. ಮೌನವಾಗಿದ್ದರೂ ಅಲ್ಪ ಕಾಲದಲ್ಲಿಯೇ ಅಗಾಧವಾದ ಸಾಹಿತ್ಯ ರಚಿಸುವಲ್ಲಿ ಅಸಾಧಾರಣ ಸೇವೆ ಸಲ್ಲಿಸಿದ್ದಾರೆ. ಅವರು ಆಯ್ಕೆ ಮಾಡಿಕೊಂಡಿದ್ದು, ವಿಮರ್ಶೆ ಮತ್ತು ವೈಚಾರಿಕತೆ. ಮೈಸೂರಿನ ರೇವಯ್ಯ ಅರಿವೆಯವರ ಮುಂದಿನ ಭಾಗವಾಗಿದ್ದರು ಎಂದು ಗುಣಗಾನ ಮಾಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ಸಾಹಿತಿ ಮೋದೂರು ತೇಜ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಧುಗಿರಿಯ ಎಂ.ಆರ್. ಮಂಜುನಾಥ್, ಬಿ.ಎಂ.ಗುರುನಾಥ್ ಮಾತನಾಡಿದರು.

ಜಿ.ಎಸ್.ಉಜ್ಜಿನಪ್ಪ, ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಡಾ.ಲೋಕೇಶ್ ಅಗಸನಕಟ್ಟೆ, ಪ್ರೊ.ಟಿ.ವಿ.ಸುರೇಶ್‍ಗುಪ್ತ ಇನ್ನು ಅನೇಕರು ಸಮಾರಂಭದಲ್ಲಿದ್ದರು.

ಪ್ರೊ.ಡಿ.ಅಂಜಿನಪ್ಪನವರ ಜೀವ ಚಿಗುರಿನ ಧ್ಯಾನ ನುಡಿನಮನ ಕೃತಿಗಳ ಅವಲೋಕನ ಕವನ ಸಂಕಲನ ಅರ್ಪಣೆ ಸಮಾರಂಭದಲ್ಲಿ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಮಾತನಾಡಿದರು.