ಸಾರಾಂಶ
ಕುಮಟಾ: ಇಂದಿನ ಮಕ್ಕಳು ಹುಟ್ಟು ಪ್ರತಿಭೆಗಳು. ಮೂಲ ಸೌಕರ್ಯಗಳಿಗೆ ಹಿಂದಿನಷ್ಟು ಕೊರತೆ ಇಲ್ಲ. ಅವರಿಗೆ ಗುಣಮಟ್ಟದ ಶಿಕ್ಷಣ ಮತ್ತು ಪ್ರತಿಭಾ ಅನಾವರಣಕ್ಕೆ ಪೂರಕವಾಗಿ ಎಲ್ಲರೂ ಪ್ರೋತ್ಸಾಹ ನೀಡಿದರೆ ಉನ್ನತ ಸಾಧನೆ ಮಾಡಬಲ್ಲರು ಎಂದು ಗೋವಾ ರಾಜ್ಯದ ಜಲಸಂಪನ್ಮೂಲ ಸಚಿವ ಸುಭಾಷ್ ಶಿರೋಡ್ಕರ್ ತಿಳಿಸಿದರು.ಪಟ್ಟಣದ ಹವ್ಯಕ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀನಿವಾಸ ಕುಲಕರ್ಣಿ ಚಾರಿಟೇಬಲ್ ಟ್ರಸ್ಟ್ನ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ಉದ್ಘಾಟಿಸಿ, ಸನ್ಮಾನಿತರಾಗಿ ಮಾತನಾಡಿದರು. ಶಿಕ್ಷಣ ಬದುಕಿಗೆ ಆಧಾರ. ಸತತ ಪರಿಶ್ರಮವೇ ಯಶಸ್ಸಿಗೆ ಕಾರಣ. ಎಲ್ಲ ಪಾಲಕರೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಸುಶಿಕ್ಷಿತರು ಹೆಚ್ಚಿದಷ್ಟೂ ಸಮಾಜ ಸುಧಾರಿಸುತ್ತದೆ ಎಂದರು. ಲಯನ್ಸ್ ಕ್ಲಬ್ನ ಗಿರೀಶ ಕುಚ್ಚಿನಾಡ ಮಾತನಾಡಿ, ಶ್ರೀನಿವಾಸ ಕುಲಕರ್ಣಿ ಚಾರಿಟೇಬಲ್ ಟ್ರಸ್ಟ್ ಸಮಾಜಮುಖಿ ಕಾರ್ಯವನ್ನು ಮಾಡುತ್ತಿದೆ. ಹೊಸ ಶಿಕ್ಷಣ ನೀತಿ ಒಳ್ಳೆಯ ಯೋಜನೆ. ಮಕ್ಕಳಿಗೆ ಬೇಕಾಗುವುದನ್ನು ಕಲಿಯಲು ಅವಕಾಶ ಕಲ್ಪಿಸುತ್ತದೆ. ಆದರೆ ಅದು ಜಾರಿಯಾಗಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ಕುಲಕರ್ಣಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಡಾ. ಮಿಲಿಂದ್ ಕುಲಕರ್ಣಿ ಮಾತನಾಡಿ, ಕಲಿಕೆ ನಿರಂತರವಾಗಿ ಇರಬೇಕು. ಬದಲಾವಣೆಗಳಿಗೆ ಹೊಂದಿಕೊಳ್ಳುತ್ತಾ ಸಾಗಬೇಕು. ವಿದ್ಯಾರ್ಥಿಗಳಿಗೆ ಬೆನ್ನೆಲುಬಾಗಿ ಇರುತ್ತೇವೆ. ಸಾಧ್ಯವಾದ ಎಲ್ಲ ಸೇವೆಗಳನ್ನೂ ಮಾಡಲು ಸಿದ್ಧರಿದ್ದೇವೆ ಎಂದರು. ಹಿರಿಯ ಯಕ್ಷಗಾನ ಕಲಾವಿದ ಶ್ರೀಧರ ಶಡಕ್ಷರಿ, ವಾಲಿಬಾಲ್ ಆಟಗಾರ ಯತೀಶ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಖಜಾಂಚಿ ಎಚ್.ಎನ್. ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಸುಮಾರು ₹೨೦ ಲಕ್ಷಗಳನ್ನು ಶಿಷ್ಯವೇತನವಾಗಿ ನೀಡಲಾಗುತ್ತಿದೆ ಎಂದರು.ಮಹಾಲಕ್ಷ್ಮಿ ಪ್ರಾರ್ಥಿಸಿದರು. ಟ್ರಸ್ಟ್ನ ಕಾರ್ಯದರ್ಶಿ ಸತೀಶ ಎಸ್. ನಾಯ್ಕ ಸ್ವಾಗತಿಸಿದರು. ಸತೀಶ ಬಿ. ನಾಯ್ಕ, ಪ್ರಶಾಂತ ಹೆಗಡೆ ಅತಿಥಿಗಳನ್ನು ಪರಿಚಯಿಸಿದರು. ಮಂಜುನಾಥ ನಾಯ್ಕ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಗದಾಯುದ್ಧ ಯಕ್ಷಗಾನ ಪ್ರದರ್ಶನ ಕಲಾರಸಿಕರನ್ನು ರಂಜಿಸಿತು.ರಾಘವೇಂದ್ರ ಪ್ರಸಾದಗೆ ಹವ್ಯಕ ಕೃಷಿ ರತ್ನ ಪ್ರಶಸ್ತಿ
ಯಲ್ಲಾಪುರ: ಬೆಂಗಳೂರಿನಲ್ಲಿ ನಡೆದ ೩ನೇ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭೆಯು ನೀಡುವ ಹವ್ಯಕ ಕೃಷಿ ರತ್ನ ಪ್ರಶಸ್ತಿಯನ್ನು ರಾಘವೇಂದ್ರ ಪ್ರಸಾದ ಎಸ್. ಭಟ್ಟ ಹಳವಳ್ಳಿ ಅವರ ಕೃಷಿ ಸಾಧನೆಯನ್ನು ಗುರುತಿಸಿ, ಪ್ರಶಸ್ತಿ ಪ್ರದಾನ ಮಾಡಿ, ಸನ್ಮಾನಿಸಲಾಯಿತು.ತಾಲೂಕಿನ ಕಲ್ಲೇಶ್ವರ ಕೆಳಗಿನಕೇರಿಯ ಸದಾನಂದ ಭಟ್ಟ ಮತ್ತು ವೀಣಾ ಭಟ್ಟ ದಂಪತಿಗಳ ಪುತ್ರನಾದ ಇವರು ಈ ಹಿಂದೆ ಅಂಕೋಲಾ ಕೃಷಿ ಇಲಾಖೆಯು ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಮತ್ತು ಟಿಎಸ್ಎಸ್ ಸಂಸ್ಥೆಯು ಉತ್ತಮ ತೋಟಗಾರ ಪ್ರಶಸ್ತಿಗೆ ಭಾಜನರಾಗಿದ್ದರು.ಇವರು ಉತ್ತಮ ಕೃಷಿಕರಾಗಿದ್ದು, ಅಡಕೆ, ಬಾಳೆ, ತೆಂಗು, ಕಾಳುಮೆಣಸು, ಜಾಯಿಕಾಯಿಗಳನ್ನು ಗಣನೀಯ ಪ್ರಮಾಣದಲ್ಲಿ ಬೆಳೆದು ದಾಖಲಿಸಿದ್ದಾರೆ. ಇವರು ಉತ್ತಮ ಸಾಮಾಜಿಕ ಸಂಘಟಕರು, ದಾನಿಗಳು, ಜನಪ್ರಿಯರೂ ಆಗಿದ್ದಾರೆ.