ಹಾವೇರಿ: ಈ ಭಾಗದ ಹಜ್ ಯಾತ್ರಿಗಳ ಬಹುದಿನದ ಬೇಡಿಕೆಯಾದ ಹಜ್ ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸಕ್ತ ಬಜೆಟ್ನಲ್ಲಿ ಹುಬ್ಬಳ್ಳಿಗೆ ಮಂಜೂರು ಮಾಡಿರುವುದು ಸ್ವಾಗತಾರ್ಹ ಎಂದು ಹಾವೇರಿ ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಇರ್ಫಾನ್ ಖಾನ್ ಪಠಾಣ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿತ್ತೂರು ಕರ್ನಾಟಕದ ಬಹುದಿನಗಳ ಕನಸಾಗಿದ್ದ ಹುಬ್ಬಳ್ಳಿಯ ಹಜ್ ಭವನ ನಿರ್ಮಾಣಕ್ಕೆ ಸರ್ಕಾರ ಅಸ್ತು ಎಂದಿರುವುದನ್ನು ಅಂಜುಮನ್ ಕಮಿಟಿ ಸ್ವಾಗತಿಸುತ್ತದೆ. ಹಾವೇರಿ, ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಕಿತ್ತೂರು ಕರ್ನಾಟಕ ಭಾಗದ ಹಜ್ ಯಾತ್ರಿಗಳು ಯಾತ್ರೆಗೆ ತೆರಳುವ ಸಂದರ್ಭದಲ್ಲಿ ಅಗತ್ಯವಿರುವ ಮಾರ್ಗದರ್ಶನ, ತರಬೇತಿ, ವಸತಿ ಹಾಗೂ ಆಡಳಿತಾತ್ಮಕ ವ್ಯವಸ್ಥೆಗಳ ಕೊರತೆಯನ್ನು ಅನುಭವಿಸುತ್ತಿದ್ದರು. ಸರ್ಕಾರ ಈ ಸಲದ ಬಜೆಟ್ನಲ್ಲಿ ಹಜ್ ಭವನ ಘೋಷಣೆ ಮಾಡಿರುವುದರಿಂದ ಯಾತ್ರಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತದೆ ಎಂದರು.ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ ಅವರು ಈ ಭಾಗದ ಜನರ ನಾಡಿಮಿಡಿತ ಅರಿತು ಹಜ್ ಭವನದ ಸ್ಥಾಪನೆ ಅತ್ಯವಶ್ಯಕ ಎಂಬುದರ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತಂದು ಬಜೆಟ್ನಲ್ಲಿ ಘೋಷಣೆ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸತತ ಪ್ರಯತ್ನ ಹಾಗೂ ಬದ್ಧತೆಯ ಫಲವಾಗಿ ಹುಬ್ಬಳ್ಳಿ ನಗರದಲ್ಲಿ ಹಜ್ ಭವನ ನಿರ್ಮಾಣವಾಗುತ್ತಿರುವುದು ಮುಸ್ಲಿಂ ಸಮುದಾಯಕ್ಕೆ ಸಂತಸದ ವಿಷಯವಾಗಿದೆ. ಭವನ ನಿರ್ಮಾಣವಾದರೆ ಹಜ್ ಯಾತ್ರೆ ಮಾರ್ಗದರ್ಶನ ಜತೆಗೆ ಅಲ್ಪಸಂಖ್ಯಾತರ ಬಡ ಮಕ್ಕಳಿಗೆ ಐಎಎಸ್, ಕೆಎಎಸ್ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಸಹ ನೀಡಬಹುದಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಇಮಾಮ್ಹುಸೇನ ಬಾಲೇಬಾಯಿ, ಕಾರ್ಯದರ್ಶಿ ಮುಜಫರ್ ಕೊಟ್ಟಿಗೇರಿ, ಖಜಾಂಚಿ ಚಮನ್ಶರೀಫ ಮುಲ್ಲಾ, ಸದಸ್ಯರಾದ ಜಮೀರ್ ಜಿಗರಿ, ಅನ್ವರ ಕಡೇಮನಿ, ವಸೀಮ್ ಸನ್ನುಖಾನವರ, ಸಾದಿಕ್ ಸವಣೂರ, ಕಮರ್ ಕಲ್ಯಾಣ, ಹಜರತ್ಅಲಿ ತಹಸೀಲ್ದಾರ, ಮುಕ್ತಿಯಾರ್ ತಟ್ಟಿಮನಿ ಇದ್ದರು. ಸಲೀಂ ಅಹ್ಮದ್ ಅವರಿಗೆ ಸಚಿವ ಸ್ಥಾನ ನೀಡಲಿ: ಕಿತ್ತೂರು ಕರ್ನಾಟಕ ಭಾಗದಲ್ಲಿ ಸುಮಾರು 25 ಲಕ್ಷ ಅಲ್ಪಸಂಖ್ಯಾತರ ಸಮುದಾಯದ ಜನರಿದ್ದು, ಹಲವು ವರ್ಷಗಳಿಂದ ಇಲ್ಲಿ ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನವನ್ನು ಸರ್ಕಾರ ನೀಡಿಲ್ಲ. ಹಾಗಾಗಿ ಸರ್ಕಾರ ಸಚಿವ ಸಂಪುಟ ವಿಸ್ತರಣೆ ಮಾಡಿದರೆ ಕಿತ್ತೂರು ಕರ್ನಾಟಕ ಭಾಗದ ಜನರ ಕಾಳಜಿಯನ್ನು ಹೊಂದಿರುವ ವಿಪ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಪಕ್ಷದ ಹೈಕಮಾಂಡ್ ನಾಯಕರಿಗೆ ಕಮಿಟಿ ಅಧ್ಯಕ್ಷ ಇರ್ಫಾನಖಾನ್ ಪಠಾಣ ಒತ್ತಾಯಿಸಿದರು.