ತಾಲೂಕಿನ ನಂಜರಾಯಪಟ್ಟಣ ಗ್ರಾಮದ ನಂಜುಂಡೇಶ್ವರ ಹಾಗೂ ಬಸವೇಶ್ವರ ದೇವರ ವಾರ್ಷಿಕ ಪೂಜೋತ್ಸವ ಶ್ರದ್ದಾಭಕ್ತಿಯಿಂದ ನೆರವೇರಿತು.
ಕನ್ನಡಪ್ರಭವಾರ್ತೆ ಕುಶಾಲನಗರ
ತಾಲೂಕಿನ ನಂಜರಾಯಪಟ್ಟಣ ಗ್ರಾಮದ ನಂಜುಂಡೇಶ್ವರ ಹಾಗೂ ಬಸವೇಶ್ವರ ದೇವರ ವಾರ್ಷಿಕ ಪೂಜೋತ್ಸವ ಶ್ರದ್ದಾಭಕ್ತಿಯಿಂದ ನೆರವೇರಿತು. ಬಸವೇಶ್ವರ ಹಾಗೂ ಕನ್ನಂಬಾಡಮ್ಮ ದೇವತಾ ಮೂರ್ತಿಗಳನ್ನು ಕಾವೇರಿ ನದಿಗೆ ಕೊಂಡೊಯ್ದು ಗಂಗಾ ಪೂಜೆ ನೆರವೇರಿಸಲಾಯಿತು.ವೀರಗಾಸೆ ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ದೇವಾಲಯದ ಆವರಣಕ್ಕೆ ದೇವರನ್ನು ತರಲಾಯಿತು. ಕೊಂಡೋತ್ಸವ ಪೂಜೆ ಬಳಿಕ ದೇವತಾ ಮೂರ್ತಿ ಹೊತ್ತೊಯ್ದ ಭಕ್ತರು ವೀರಗಾಸೆಯವರೊಂದಿಗೆ ಕೊಂಡವನ್ನು ತುಳಿದು ಭಕ್ತಿ ಸಮರ್ಪಿಸಿದರು. ಧಾರ್ಮಿಕ ಕಾರ್ಯಕ್ರಮದಲ್ಲಿ ವಿರಾಜಪೇಟೆ ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ದಿಂಡಗಾಡು ಬಸವಜ್ಯೋತಿ ಮಠದ ಶ್ರೀ ಅಪ್ಪಾಜಿ ಸ್ವಾಮೀಜಿ ಆಶೀರ್ವಚನ ನೀಡಿದರು.
ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ್ ಕುಮಾರ್, ಕಾರ್ಯದರ್ಶಿ ಕೆ.ವಿ.ಪ್ರೇಮಾನಂದ, ಖಜಾಂಚಿ ಮುರುಳಿ ಮಾದಯ್ಯ ಪದಾಧಿಕಾರಿಗಳಾದ ಕೆ.ಎಸ್.ರತೀಶ್, ಬಾಲಕೃಷ್ಣ, ವಿಜು ಚೆಂಗಪ್ಪ, ಲೀಲಾವತಿ, ಬಿ.ಸಿ. ಕಾಳಯ್ಯ, ಲೋಕನಾಥ್ ಮತ್ತಿತರರು ಇದ್ದರು. ಪಾಂಡವಪುರದ ತಂಡದಿಂದ ವೀರಗಾಸೆ ಕುಣಿತ ಭಕ್ತರನ್ನು ಮನಸೂರೆಗೊಳಿಸಿತು.