ಗಣತಿಯಲ್ಲಿ ತಾಳೆಯಾಗದ ಜನಸಂಖ್ಯೆ ಅಂಕಿಅಂಶ

| Published : Oct 11 2025, 12:02 AM IST

ಗಣತಿಯಲ್ಲಿ ತಾಳೆಯಾಗದ ಜನಸಂಖ್ಯೆ ಅಂಕಿಅಂಶ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿಯವರೆಗೂ ಒಟ್ಟು ೫೭೨೯೫ ಮನೆಗಳ ಗಣತಿ ಕಾರ್ಯಪೂರ್ಣಗೊಳಿಸಲಾಗಿದೆ. ಆದರೆ ಈಗ ಮತ್ತೆ ಒಂದೊಂದೇ ಸವಾಲು ಎದುರಾಗುತ್ತಿದ್ದು, ಇದ್ದಕ್ಕಿದ್ದ ಹಾಗೆ ೬೫,೦೦೦ ಮನೆಗಳಿಂದ ಈಗ ಏಕಾಏಕಿ ೭೧,೨೮೪ ಮನೆಗಳ ಗಣತಿಗೆ ಏರಿಕೆಯಾಗಿದೆ. ಬೆಸ್ಕಾಂ ಸಿಕ್ಕ ಸಿಕ್ಕ ಕಡೆ ಸ್ಟಿಕ್ಕರ್‌ಗಳನ್ನು ಅಂಟಿ ಯುಎಚ್‌ಐಡಿಗಳನ್ನು ನಮೂದಿಸಿರುವುದೇ ಸಮಸ್ಯೆಗೆ ಕಾರಣ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಸಾಮಾಜಿಕ,ಶೈಕ್ಷಣಿಕ ಗಣತಿ ಕಾರ್ಯ ಬಹುತೇಕ ಕೊನೆ ಹಂತ ತಲುಪಿದ್ದರೂ ಗಣತಿದಾರರಿಗೆ ಸಮಸ್ಯೆಗಳು ಮಾತ್ರ ಕೊನೆಗೊಂಡಿಲ್ಲ. ಗಣತಿದಾರರಿಗೆ ಹಂಚಿಕೆ ಮಾಡಲಾಗಿದ್ದ ಮನೆಗಳ ಸಂಖ್ಯೆ ಹೆಚ್ಚಾಗಿದ್ದು, ಜನಸಂಖ್ಯೆಯ ಅಂಕಿ ಅಂಶಗಳು ಹೊಂದಾಣಿಕೆ ಆಗದಿರುವುದು ದೊಡ್ಡ ಸಮಸ್ಯೆಯಾಗಿದೆ. ರಾಜ್ಯ ಸರ್ಕಾರ ಹಮ್ಮಿಕೊಂಡಿರುವಂತಹ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಕಾರ್ಯಕ್ಕೆ ಆರಂಭದಲ್ಲಿ ಹತ್ತು ಹಲವು ತಾಂತ್ರಿಕ ವಿಘ್ನಗಳು ಕಾಣಿಸಿಕೊಂಡಿದ್ದವು. ಅವುಗಳನ್ನು ಎದುರಿಸುತ್ತಾ ಗಣತಿ ಕಾರ್ಯ ಮಾಡುವುದು ಗಣತಿದಾರರಿಗೆ ಸವಾಲಿನ ಕೆಲಸವಾಗಿತ್ತು. ನಂತರದ ದಿನಗಳಲ್ಲಿ ತಾಂತ್ರಿಕ ಸಮಸ್ಯೆಗಳು ಬಹುತೇಕ ಬಗೆಹರಿದ ಕಾರಣ ಗಣತಿ ಕಾರ್ಯ ವೇಗ ಪಡೆದಿತ್ತು.

ಮನೆಗಳ ಸಂಖ್ಯೆ ಏರಿಕೆ

ಇಲಾಖೆಯ ನಿರ್ದೇಶನದಂತೆ ತಾಲೂಕಿನಲ್ಲಿ ಈ ಹಿಂದೆ ೬೫ ಸಾವಿರ ಮನೆಗಳ ಗಣತಿಯ ಗುರಿಯನ್ನು ಹೊಂದಲಾಗಿತ್ತು. ಗುರಿಯನ್ನು ನಿರ್ದಿಷ್ಟ ಸಮಯದಲ್ಲಿ ತಲುಪಲು ೫೮೭ ಬ್ಲಾಕ್‌ಗಳನ್ನು ಗುರ್ತಿಸಿ, ೫೮೭ ಗಣಿದಾರರನ್ನು ಸಹ ನಿಯೋಜನೆ ಮಾಡಲಾಗಿತ್ತು. ಇಲ್ಲಿಯವರೆಗೂ ಒಟ್ಟು ೫೭೨೯೫ ಮನೆಗಳ ಗಣತಿ ಕಾರ್ಯಪೂರ್ಣಗೊಳಿಸಲಾಗಿದೆ. ಆದರೆ ಈಗ ಮತ್ತೆ ಒಂದೊಂದೇ ಸವಾಲು ಎದುರಾಗುತ್ತಿದ್ದು, ಇದ್ದಕ್ಕಿದ್ದ ಹಾಗೆ ೬೫,೦೦೦ ಮನೆಗಳಿಂದ ಈಗ ಏಕಾಏಕಿ ೭೧,೨೮೪ ಮನೆಗಳ ಗಣತಿಗೆ ಏರಿಕೆಯಾಗಿದೆ.

ಹೆಚ್ಚಾಗಿರುವ ಮನೆಗಳನ್ನು ಗಣತಿಯನ್ನು ಪೂರ್ಣಗೊಳಿಸಲು ಗಣತಿದಾರರು ಮನೆಗಳ ಹುಡುಕಾಟಕ್ಕೆ ಮುಂದಾಗಿದ್ದು, ಗಣತಿದಾರರಿಗೆ ತಲೆನೋವು ಎದುರಾಗಿದೆ. ತಾಲೂಕಿನಲ್ಲಿ ಎಲ್ಲಾ ಗಣತಿದಾರರು ದಿನವೆಲ್ಲಾ ಹುಡುಕಿದರೂ ೧೫೦ ಮನೆಗಳ ಗಡಿ ದಾಟುತ್ತಿಲ್ಲ. ಬೆಸ್ಕಾಂ ಇಲಾಖೆಯವರು ಹಸು ಶೆಡ್, ಶೌಚಾಲಯ ಸೇರಿದಂತೆ ಸಿಕ್ಕ ಸಿಕ್ಕ ಕಡೆ ಸ್ಟಿಕ್ಕರ್‌ಗಳನ್ನು ಅಂಟಿ ಯುಎಚ್‌ಐಡಿಗಳನ್ನು ನಮೂದಿಸಿರುವುದರಿಂದ ಮನೆಗಳ ಸಂಖ್ಯೆ ಹೆಚ್ಚಾಗಿದ್ದು, ಎಷ್ಟೇ ಹುಡುಕಿದರೂ ಮನೆಗಳು ಕಾಣಸಿಗುತ್ತಿಲ್ಲ ಎಂಬುದು ಗಣತಿದಾರರ ಆರೋಪವಾಗಿದೆ.

ತಾಳೆಯಾಗದ ಜನಸಂಖ್ಯೆ ಗಣತಿ

ಇದರೊಟ್ಟಿಗೆ ತಾಲೂಕುಗಳಲ್ಲಿ ಗಣತಿ ಕಾರ್ಯ ಕೊನೆ ಹಂತ ತಲುಪಿದ್ದರೂ ಸಹ ನಿಗದಿಯಾಗಿರುವ ಜನಸಂಖ್ಯೆ ಸಿಗುತ್ತಿಲ್ಲ. ಗಣತಿದಾರರು ಗಣತಿ ವೇಳೆ ಮನೆಯಲ್ಲಿನ ಪಡಿತರ ಚೀಟಿಯಂತೆ ಒಟ್ಟೂ ಜನಸಂಖ್ಯೆಯನ್ನು ಸರಿಯಾಗಿ ಗಣತಿಯಲ್ಲಿ ಸರಿಯಾಗಿ ನಮೂದಿಸಿಲ್ಲ ಎಂಬ ಆರೋಪ ಕೇಳಿ ಬಂದಿದ್ದು, ಇದರಿಂದ ಮತ್ತೊಮ್ಮೆ ಗಣತಿದಾರರು ಮನೆಗಳಿಗೆ ಭೇಟಿ ನೀಡಬೇಕಾದ ಅನಿವಾರ್ಯ ಎದುರಾಗಿದೆ. ಅದರಿಂದ ತಾಲ್ಲೂಕು ಕಚೇರಿಯಲ್ಲಿ ಗಣತಿದಾರರು ನೀಡಿರುವಂತಹ ದೂರವಾಣಿ ಸಂಖ್ಯೆಯನ್ನು ಬಳಸಿಕೊಂಡು ಕುಟುಂಬ ಸದಸ್ಯರಿಗೆ ಕರೆ ಮಾಡಿ ಕ್ರಾಸ್ ಚೆಕ್ ಮಾಡುವ ಕಾರ್ಯ ತಾಲೂಕು ಆಡಳಿತ ಮಾಡುತ್ತಿದೆ. ಇದರಲ್ಲಿ ಕುಟುಂಬ ಸದಸ್ಯರ ಸಂಖ್ಯೆ ಕಂಡು ಬಂದರೆ ಅಂತಹ ಮನೆಯ ಗಣತಿ ಕಾರ್ಯವನ್ನು ಮತ್ತೊಮ್ಮೆ ಮಾಡಿ ನಿಗದಿತ ದಿನಾಂಕದೊಳಗೆ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಗಣತಿ ಆರಂಭಕ್ಕೂ ಮುಂಚೆಯೇ ಸರಿಯಾದ ಮಾಹಿತಿ ನೀಡಿದ್ದರೆ ಗಣತಿಯನ್ನು ಸರಿಯಾದ ರೀತಿಯಲ್ಲಿ ಮಾಡಿ ಮುಗಿಸಬಹುದಾಗಿತ್ತು. ಆದರೆ ಒಂದೊಂದು ದಿನ ಒಂದೊಂದು ಮಾಹಿತಿಯನ್ನು ಕೇಳುತ್ತಿರುವುದರಿಂದ ಗಣತಿಗೆ ಸಮಸ್ಯೆಯಾಗಿದೆ. ಗಣತಿ ವೇಳೆ ಕುಟುಂಬ ಸದಸ್ಯರು ನೀಡಿದ ಮಾಹಿತಿಯನ್ನು ಪಡೆದು ಮಾಹಿತಿಯನ್ನು ನೀಡಲಾಗಿದೆ. ಆದರೆ ಈಗ ಮತ್ತೊಮ್ಮೆ ಗಣತಿ ಮಾಡಿ ಎಂದರೆ ಕಷ್ಟವಾಗುತ್ತದೆ ಎಂಬುದು ಗಣತಿದಾರರ ಅಳಲಾಗಿದೆ.

ಕೋಟ್‌........................

೨೦೧೧ ರ ಜನಗಣತಿ ಹಾಗೂ ೨೦೨೫ರ ಜನಸಂಖ್ಯೆಗೆ ಅನುಗುಣವಾಗಿ ತಾಳೆ ನೋಡಿದಾಗ ಗಣತಿಯಲ್ಲಿ ಜನಸಂಖ್ಯೆ ಸರಿಯಾಗಿ ಕಾಣಸಿಗುತ್ತಿಲ್ಲ. ಗಣತಿದಾರರು ಗಣತಿ ವೇಳೆ ಸರಿಯಾಗಿ ಮಾಹಿತಿಯನ್ನು ಪಡೆದಿಲ್ಲ ಎನ್ನಲಾಗುತ್ತಿದೆ. ಮತ್ತೊಮ್ಮೆ ಗಣತಿ ಮನೆಗಳಿಂದ ಜನಸಂಖ್ಯೆ ಮಾಹಿತಿ ಕಲೆ ಹಾಕಲು ಸೂಚಿಸಲಾಗಿದೆ. ಗಣತಿದಾರರು ಮತ್ತು ಸೂಪರ್ ವೈಸರ್ ಗಳಿಗೆ ಶನಿವಾರ ಸಂಜೆ ಒಳಗೆ ಸರಿಯಾದ ಮಾಹಿತಿಯನ್ನು ನೀಡಲು ನಿರ್ದೇಶನ ನೀಡಲಾಗಿದೆ. ಅಕಸ್ಮಾತ್ ನೀಡದಿದ್ದರೆ ಸೂಕ್ತ ಕ್ರಮ ಜರುಗಿಸುವುದಾಗಿ ನೋಟೀಸ್ ನೀಡಲಾಗಿದೆ.

ಸುಜಾತ, ತಹಸೀಲ್ದಾರ್.