ಸಂದರ್ಭದಲ್ಲಿ ಸಿಮೆಂಟ್ ಪೈಪ್ ಬಳಕೆಯಿಂದ ಎಲ್ಲೆಂದರಲ್ಲಿ ಸೋರಿಕೆ ಉಂಟಾಗಿ ನೀರಾವರಿ ಯೋಜನೆ ನನೆಗುದಿಗೆ ಬಿತ್ತು.
ಹೂವಿನಹಡಗಲಿ: ರೈತರ ಖುಷ್ಕಿ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ರೂಪಿತಗೊಂಡ ಕುಡುಗೋಲು ಮಟ್ಟಿ ಏತ ನೀರಾವರಿ ಯೋಜನೆಗೆ ಆರಂಭದಿಂದ ಈವರೆಗೆ ₹16.80 ಕೋಟಿ ಸುರಿದರೂ ಕಾಲುವೆಗಳಿಗೆ ಹನಿ ನೀರು ಹರಿಯುತ್ತಿಲ್ಲ.
ತುಂಗಭದ್ರಾ ನದಿ ತಟದ ಅಂಗೂರು ಬಳಿ 2006-07ರಲ್ಲಿ ಕುಡುಗೋಲು ಮಟ್ಟಿ ಏತ ನೀರಾವರಿ ಯೋಜನೆ ನಿರ್ಮಾಣಕ್ಕೆ ಕ್ರಿಯಾ ಯೋಜನೆ ಸಿದ್ಧವಾಗಿ ₹7.80 ಕೋಟಿಗೆ ಟೆಂಡರ್ ಕರೆದು ಅಂದು ಕೆಡಿಎಚ್ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಆ ಸಂದರ್ಭದಲ್ಲಿ ಸಿಮೆಂಟ್ ಪೈಪ್ ಬಳಕೆಯಿಂದ ಎಲ್ಲೆಂದರಲ್ಲಿ ಸೋರಿಕೆ ಉಂಟಾಗಿ ನೀರಾವರಿ ಯೋಜನೆ ನನೆಗುದಿಗೆ ಬಿತ್ತು.ಈ ಯೋಜನೆಗಾಗಿ 2017ರಲ್ಲಿ ಮತ್ತೆ ₹1 ಕೋಟಿ ಅನುದಾನ ಮಂಜೂರಾಗಿ ಟ್ಯಾಂಕ್ ನಿರ್ಮಿಸಿ ಕೆಲವೆಡೆ ಪಿಎಸ್ಸಿ ಪೈಪ್ ಅಳವಡಿಸಲಾಗಿತ್ತು. ಅದು ಕೂಡ ಕಾಮಗಾರಿ ಅರೆಬರೆಯಾಗಿ ಪೈಪ್ಲೈನ್ ಕಿತ್ತು ಹೋಗಿತ್ತು. ಈವರೆಗೂ ಯೋಜನೆಗಾಗಿ ₹16.80 ಕೋಟಿ ವೆಚ್ಚ ಮಾಡಿದ್ದರೂ ರೈತರ ಜಮೀನುಗಳಿಗೆ ನೀರುಣಿಸಲು ಆಗಿಲ್ಲ.
ಯೋಜನೆ ವ್ಯಾಪ್ತಿಯಲ್ಲಿ ಅಂಗೂರು, ಬೀರಬ್ಬಿ, ಕೋಟಿಹಾಳು ಗ್ರಾಮಗಳ 1012 ಹೆಕ್ಟೇರ್ ಪ್ರದೇಶಕ್ಕೆ, 1ನೇ ಹಂತದಲ್ಲಿ 1.23 ಕಿ.ಮೀ ಉದ್ದ, 2ನೇ ಹಂತದಲ್ಲಿ 3.48 ಕಿ.ಮೀ ಉದ್ದ ಪೈಪ್ಲೈನ್ ಮೂಲಕ ನೀರುಣಿಸಬೇಕಿತ್ತು. ಈ ಯೋಜನೆಗೆ ಈಗ ಮತ್ತೆ ₹10.70 ಕೋಟಿ ಅಂದಾಜು ಪತ್ರಿಕೆ ಸಿದ್ಧವಾಗಿದೆ. ತಾಂತ್ರಿಕ ಅನುಮೋದನೆಗಾಗಿ ಸಲ್ಲಿಕೆಯಾಗಿದೆ. ನೀರಾವರಿ ತಜ್ಞ ರಂಗರಾಜನ್ ಈ ಯೋಜನೆ ಕುರಿತು ಕೆಲ ಮಾರ್ಪಾಡುಗಳನ್ನು ಮಾಡಲು ತಿಳಿಸಿದ್ದಾರೆ. ಆ ಪ್ರಕಾರವಾಗಿ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.ಈ ಬಾರಿಯಾದರೂ ಯೋಜನೆಗೆ ಅಗತ್ಯ ಅನುದಾನ ನೀಡಿ, ಸಮರ್ಪಕ ರೀತಿಯಲ್ಲಿ ಗುಣಮಟ್ಟದ ಕಾಮಗಾರಿ ಮಾಡಿ ರೈತರ ಜಮೀನುಗಳಿಗೆ ನೀರುಣಿಸಬೇಕೆಂಬ ಆಶಾಭಾವನೆ ರೈತರಲ್ಲಿ ಮೂಡಿದೆ.
ಅಂಗೂರು ಬಳಿಯ ಕುಡುಗೋಲು ಮಟ್ಟಿ ಏತ ನೀರಾವರಿ ಯೋಜನೆಯ ಎಂಎಸ್ ಪೈಪ್ಲೈನ್ ಕಾಮಗಾರಿಗೆ ₹10.70 ಕೋಟಿ ಅಂದಾಜು ಪತ್ರಿಕೆ ಸಿದ್ಧವಾಗಿ ತಾಂತ್ರಿಕ ಅನುಮೋದನೆಗೆ ಸಲ್ಲಿಸಲಾಗಿದೆ. ಚಂದ್ರಕಾಂತ್, ಸಹಾಯಕ ಎಂಜಿನಿಯರ್, ಸಣ್ಣ ನೀರಾವರಿ- ಅಂತರ್ಜಲ ಇಲಾಖೆ.ಕುಡುಕೋಲು ಮಟ್ಟಿ ಏತ ನೀರಾವರಿ ನನೆಗುದಿಗೆ ಬಿದ್ದು ಹತ್ತಾರು ವರ್ಷ ಕಳೆದಿದೆ. ಈವರೆಗೂ ರೈತರ ಜಮೀನುಗಳಿಗೆ ಹನಿ ನೀರು ಹರಿಯುತ್ತಿಲ್ಲ. ಸರ್ಕಾರ ಕೂಡಲೇ ಅಗತ್ಯ ಅನುದಾನ ನೀಡಿ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು. ಅಂಗೂರು ಗ್ರಾಮಸ್ಥರು.