ಸಾರಾಂಶ
ಕುಶಾಲನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಕ್ತಿ ಅಸೋಸಿಯೇಷನ್, ಕೂಡಿಗೆಯ ಶಕ್ತಿ ಧಾಮ ಆಶ್ರಯದಲ್ಲಿ ಜಿಲ್ಲಾ ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಸ್ಥೆ, ಕುಶಾಲನಗರ ಪೊಲೀಸ್ ಇಲಾಖೆ, ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ ನಡೆಯಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಕೆಟ್ಟ ಯೋಚನೆಗಳು ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಕುಶಾಲನಗರ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಕುಶಾಲನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಕ್ತಿ ಅಸೋಸಿಯೇಷನ್, ಕೂಡಿಗೆಯ ಶಕ್ತಿ ಧಾಮ ಆಶ್ರಯದಲ್ಲಿ ಜಿಲ್ಲಾ ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಸ್ಥೆ, ಕುಶಾಲನಗರ ಪೊಲೀಸ್ ಇಲಾಖೆ, ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಅಂಗವಾಗಿ ನಡೆದ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಯುವ ಪೀಳಿಗೆ ಯಾವುದೇ ಸಂದರ್ಭ ಹಾದಿ ತಪ್ಪಬಾರದು, ಸಮಯದ ದುರುಪಯೋಗ ಮಾಡಿದಲ್ಲಿ ಜೀವನ ಸಾರ್ಥಕ ಮಾಡಲು ಅಸಾಧ್ಯ ಎಂದರು.ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಪ್ರಮುಖ ಪ್ರಾಣೇಶ್ ಮಾತನಾಡಿ, ಭಾವನೆಗಳ ಬದಲಾವಣೆ ಮೂಲಕ ಎಲ್ಲಾ ಸಾಧನೆ ಸಾಧ್ಯ. ಮನಸ್ಸನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವುದು ತಪ್ಪಿದಲ್ಲಿ ಜೀವನ ನಾಶವಾಗುತ್ತದೆ ಎಂದರು.
ಪ್ರತಿಯೊಬ್ಬರೂ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು ಮನಸ್ಸಿಗೆ ಒಳ್ಳೆಯ ಅಂಶಗಳನ್ನು ನೀಡುವಂತಾಗಬೇಕು, ಕೆಟ್ಟ ವಿಷಯ ಸಂಗತಿಗಳನ್ನು ಹಂಚಿಕೊಳ್ಳಬಾರದು. ಗೊಂದಲ ದುರಭ್ಯಾಸ ಅನಗತ್ಯ ವಿಷಯಗಳಿಗೆ ಪ್ರೋತ್ಸಾಹ ನೀಡುವಂತಾಗಬಾರದು ಎಂದರು.ಕಾಲೇಜಿನ ಪ್ರಾಧ್ಯಾಪಕ ಫಿಲಿಪ್ ವಾಸ್ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.
ಪ್ರಾಂಶುಪಾಲ ನಾಗೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಡಿಕೇರಿಯ ಜಿಲ್ಲಾ ವಿಕಲಚೇತನ ಕ್ಷೇಮಾಭಿವೃದ್ಧಿ ಇಲಾಖೆಯ ಅಧಿಕಾರಿ ವಿಮಲಾ, ಕುಶಾಲನಗರ ಠಾಣೆಯ ಇನ್ಸ್ಪೆಕ್ಟರ್ ಪ್ರಕಾಶ್, ಅಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್ ಗೀತಾ, ಶಕ್ತಿ ಕೇಂದ್ರದ ಯೋಜನಾ ನಿರ್ದೇಶಕ ಪ್ರಭು, ಕೂಡಿಗೆ ಶಕ್ತಿಧಾಮದ ಚಂದ್ರು ಮತ್ತಿತರರು ಇದ್ದರು.