ಸಾರಾಂಶ
- ಜೆಎನ್ಯು ಒಕ್ಕೂಟದ ಉಪಾಧ್ಯಕ್ಷ ಆರೋಪ
ಕನ್ನಡಪ್ರಭ ವಾರ್ತೆ ಕೊಪ್ಪಳಕೇಂದ್ರ ಸರ್ಕಾರ ಶಿಕ್ಷಣ ವಿರೋಧಿ ನೀತಿ ಅನುಸರಿಸುತ್ತಿದೆ. ಶಿಕ್ಷಣ ಕ್ಷೇತ್ರದತ್ತ ಕೇಂದ್ರ ಸರ್ಕಾರ ಗಮನ ಹರಿಸದಿರುವುದು ದುರದೃಷ್ಟಕರ ಎಂದು ಜೆಎನ್ಯು ಒಕ್ಕೂಟದ ಉಪಾಧ್ಯಕ್ಷ ಅವಿಜಿತ್ ಘೋಷ್ ಆರೋಪಿಸಿದರು.
ನಗರದ ಶಿವಶಾಂತ ಮಂಗಲಭವನದಲ್ಲಿ ನಡೆದ ಮೇ ಸಾಹಿತ್ಯ ಸಮ್ಮೇಳನದಲ್ಲಿ ಚಳವಳಿ ಮತ್ತು ಧರ್ಮ ರಾಜಕಾರಣ ಗೋಷ್ಠಿಯಲ್ಲಿ ವಿದ್ಯಾರ್ಥಿ ಚಳವಳಿ ಕುರಿತು ಅವರು ಮಾತನಾಡಿದರು.ಶಿಕ್ಷಣದ ಬುನಾದಿ ಅನಿಸಿರುವ ವೈಜ್ಞಾನಿಕ ಮನೋಭಾವ ತೆಗೆದುಹಾಕಿ, ತಮ್ಮ ಪ್ರೊಪಗಾಂಡಾ ಹೇರುವ ಸಂಚನ್ನು ಸರ್ಕಾರ ರೂಪಿಸಿದೆ. ಇದರ ವಿರುದ್ಧ ಜೆಎನ್ಯು ಪ್ರಬಲ ಹೋರಾಟ ನಡೆಸುತ್ತಿದೆ. ಅವಧಿ ಮುಗಿದು ನಾಲ್ಕು ವರ್ಷಗಳಾದರೂ ವಿದ್ಯಾರ್ಥಿ ಒಕ್ಕೂಟಕ್ಕೆ ಚುನಾವಣೆ ನಡೆಸದೇ ಇರುವುದು ಇದಕ್ಕೆ ಸಾಕ್ಷಿ ಎಂದು ಕಿಡಿಕಾರಿದರು.
ಎಬಿವಿಪಿ ಸಂಘಟನೆಯು ವಿವಿಯಲ್ಲಿ ನಡೆಸಿದ ಹಿಂಸಾಚಾರವೂ ಈ ಸಂಚಿನ ಭಾಗವೇ ಆಗಿದ್ದು, ವಿರೋಧಿಸಿದರೆ ಕತೆ ಕಟ್ಟಲಾಗುತ್ತದೆ ಎಂದರು.ಕೇಂದ್ರ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಖಾಸಗೀಕರಣ ಮಾಡುವ ಪ್ರಯತ್ನ ಮಾಡುತ್ತಲೇ ಬಂದಿದೆ. ಇದಕ್ಕೆ ಪೂರಕವಾಗಿರುವ ನೀತಿಗಳನ್ನು ಜಾರಿ ಮಾಡುತ್ತಿದೆ. ಸಾಮಾನ್ಯ ವಿದ್ಯಾರ್ಥಿಗಳಿಗೆ ಶಿಕ್ಷಣ ಕೈತಪ್ಪುವಂತೆ ಮಾಡುವ ಈ ಹುನ್ನಾರವನ್ನು ವಿದ್ಯಾರ್ಥಿ ಸಂಘಟನೆಗಳು ವಿರೋಧಿಸಬೇಕು ಎಂದು ಅವರು ಕರೆ ನೀಡಿದರು.
ಮಹಿಳಾ ಚಳವಳಿ ಕುರಿತು ಮಾತನಾಡಿದ ಹೋರಾಟಗಾರ್ತಿ ಕೆ. ನೀಲಾ, ಈಗ ಅಸಂಖ್ಯಾತ ಸಾಮಾಜಿಕ ಪ್ರಶ್ನೆಗಳು ನಮ್ಮೆದುರು ಇವೆ. ಪರಿಸ್ಥಿತಿ ಸಂಕೀರ್ಣವಾಗಿದೆ. ಹೀಗಾಗಿ ಹೊಸ ಆಲೋಚನೆ ಕ್ರಮದಲ್ಲಿ ಚಳವಳಿಗಳನ್ನು ಕಟ್ಟಬೇಕಿದೆ ಎಂದು ಅಭಿಪ್ರಾಯಪಟ್ಟರು.ಚಿಂತಕ ಡಾ. ಅಪ್ಪಗೆರೆ ಸೋಮಶೇಖರ್ ದಲಿತ- ಆದಿವಾಸಿ ಚಳವಳಿ ಕುರಿತು ಮಾತನಾಡಿ, ವರ್ತಮಾನದ ದಲಿತ- ಆದಿವಾಸಿಗಳ ಎದುರು ಸಂವಿಧಾನ ಭಾರತ ಹಾಗೂ ಧರ್ಮ ರಾಜಕಾರಣ ಎಂಬ ಎರಡು ಆಯ್ಕೆಗಳು ಇವೆ. ಇದರಲ್ಲಿ ಡಾ. ಅಂಬೇಡ್ಕರ್ ನೀಡಿದ ಸಂವಿಧಾನವೇ ಆಯ್ಕೆ ಆಗಬೇಕು ಎಂದು ಹೇಳಿದರು.
ದಲಿತರಲ್ಲದ ನಾಯಕರು ದಲಿತರ ಪರ ಹೋರಾಟ ಮಾಡಿದ ಹಲವು ನಿದರ್ಶನಗಳು ಇವೆ. ಅಂಥ ಹೋರಾಟಗಳನ್ನು ಗಮನಿಸಿ, ಚಳವಳಿ ಮರುರೂಪಿಸಿಕೊಳ್ಳುವ ಅಗತ್ಯವಿದೆ ಎಂದರು.ಕಾರ್ಮಿಕ-ರೈತ ಚಳವಳಿ ಕುರಿತು ಪತ್ರಕರ್ತ ಡಾ. ರವಿಕುಮಾರ್ ಬಾಗಿ ಮಾತನಾಡಿದರು.
ಬಸವರಾಜ ಶೀಲವಂತರ್, ಡಿ.ಎಚ್. ಪೂಜಾರ, ಅಶೋಕ ಬರಗುಂಡಿ, ಹನುಮೇಶ ಕಲ್ಮಂಗಿ ಉಪಸ್ಥಿತರಿದ್ದರು.ಡಾ. ಎಚ್.ಎಸ್. ಅನುಪಮಾ ಕಾರ್ಯಕ್ರಮ ನಿರೂಪಿಸಿದರು.