ಆಪತ್ಬಾಂಧವ ಆಸಿಫ್‌ಗೆ ಬಸವ ಶ್ರೀ ಪ್ರಶಸ್ತಿ ಪ್ರದಾನ

| Published : Apr 09 2024, 12:47 AM IST

ಸಾರಾಂಶ

ಸಮಾಜ ಸೇವಕ ಆಸಿಫ್ ಆಪದ್ಬಾಂಧವ ಅವರಿಗೆ ಇತ್ತೀಚೆಗೆ ತುಮಕೂರು ಕನ್ನಡ ಭವನ ಸಭಾಂಗಣದಲ್ಲಿ ಬೆಂಗಳೂರು ಶ್ರೀ ಜ್ಞಾನ ಮಂದಾರ ಟ್ರಸ್ಟ್ ಮತ್ತು ತುಮಕೂರು ಶ್ರೀ ಸಾಯಿ ರಾಮನ್ ನೃತ್ಯ ಕೇಂದ್ರದ ಸಹಭಾಗಿತ್ವದಲ್ಲಿ ಕನ್ನಡ ಕಲಾ ಪ್ರತಿಭೋತ್ಸವ ವತಿಯಿಂದ ನೀಡಲ್ಪಡುವ ‘ಬಸವ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ತುಮಕೂರು ಕನ್ನಡ ಭವನ ಸಭಾಂಗಣದಲ್ಲಿ ಬೆಂಗಳೂರು ಶ್ರೀ ಜ್ಞಾನ ಮಂದಾರ ಟ್ರಸ್ಟ್ ಮತ್ತು ತುಮಕೂರು ಶ್ರೀ ಸಾಯಿ ರಾಮನ್ ನೃತ್ಯ ಕೇಂದ್ರದ ಸಹಭಾಗಿತ್ವದಲ್ಲಿ ಕನ್ನಡ ಕಲಾ ಪ್ರತಿಭೋತ್ಸವ ವತಿಯಿಂದ ನೀಡಲ್ಪಡುವ ‘ಬಸವ ಶ್ರೀ’ ಪ್ರಶಸ್ತಿಯನ್ನು ಸಮಾಜ ಸೇವಕ ಆಸಿಫ್ ಆಪದ್ಬಾಂಧವ ಅವರಿಗೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ವಹಿಸಿದ್ದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನಿಗಮದ ಅಧ್ಯಕ್ಷ ಡಾ. ಸೋಮಶೇಖರ್ ಸಿ. ಪ್ರಶಸ್ತಿ ಪ್ರದಾನ ನೆರವೇರಿಸಿದರು.

ಈ ಸಂದರ್ಭ ವಿವಿಧ ಕ್ಷೇತ್ರಗಳ ಸಾಧಕರಿಗೆ ಸಮಾಜ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಮಾಜಿಕ ಸೇವಾ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಈಶ್ವರ ಮಂಗಲ ನಿವಾಸಿ ಅಬ್ದುಲ್ ರಹಮಾನ್ ಹಾಜಿ, ಶಿಕ್ಷಣ ಕ್ಷೇತ್ರದಿಂದ ಹನೀಫ್ ಮಧುರ, ಸಮಾಜ ಸೇವಾ ಕ್ಷೇತ್ರದಿಂದ ನೂರಿ ಅಬ್ದುಲ್ ರೆಹಮಾನ್ ನಾಗೂರು ಬೈಂದೂರು ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಆಸಿಫ್ ಆಪತ್ಬಾಂಧವ ಮತ್ತು ಜನಸ್ನೇಹಿ ನ್ಯಾಯಾಧೀಶ ಎ.ಸೋಮಶೇಖರ್ ಬೆಂಗಳೂರು ಅವರಿಗೆ ಬಸವ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಚಲನಚಿತ್ರ ನಟಿ ಸಿಂಚನಾ ಪಿ. ರಾವ್, ತುಮಕೂರು ಸಿದ್ದಗಂಗಾ ತಾಂತ್ರಿಕ ಮಹಾ ವಿದ್ಯಾಲಯದ ಸಹಪಾಧ್ಯಾಪಕ ಸಾಗರ್ ಟಿ. ಎಸ್., ಚಲನಚಿತ್ರ ನಿರ್ಮಾಪಕ ಶ್ರೀನಿವಾಸ್, ಬೆಂಗಳೂರು ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೀಣಾ ರಮೇಶ್, ಜ್ಞಾನ ಮಂದಾರ ಟ್ರಸ್ಟ್ ಸಂಸ್ಥಾಪಕ ಸೋಮಶೇಖರ್ ಎಚ್., ಸಮಿತಿ ಪದಾಧಿಕಾರಿ ನವೀನ್ ಮಚಾದೋ ಸುಳ್ಯ, ರತಿಕಾ ಹಡಗಲಿ, ವಿದುಷಿ ಹರ್ಷಿತಾ ಎನ್. ಮತ್ತಿತರರು ಇದ್ದರು.

ಈ ಸಂದರ್ಭದಲ್ಲಿ ಒಲವಿನ ಮಂದಾರ ಹಾಗೂ ಬಾಳೊಂದು ಭಾವಗೀತೆ ಕೃತಿ ಬಿಡುಗಡೆಗೊಳಿಸಲಾಯಿತು. ಸುನಿತಾ ಎಂ. ಮತ್ತು ನಾಗವೇಣಿ ರಘುರಾಮ್ ಕಾರ್ಯಕ್ರಮ ನಿರೂಪಿಸಿದರು.