ಸಾರಾಂಶ
ಗದಗ: ಜಾತಿ ಮತ್ತು ಸಾಮಾಜಿಕ- ಆರ್ಥಿಕ ಗಣತಿ ಕಾರ್ಯಕ್ಕೆ ನಿಯೋಜನೆಗೊಂಡಿರುವ ಶಿಕ್ಷಕರು, ತಂತ್ರಜ್ಞಾನದ ವೈಫಲ್ಯ ಮತ್ತು ಸಾರ್ವಜನಿಕರ ಅಸಹಕಾರದಿಂದ ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಗಣತಿದಾರರು ತಮ್ಮ ಸಮಸ್ಯೆಗಳನ್ನು ತಹಸೀಲ್ದಾರ್ ಕಚೇರಿಗೆ ತೆರಳಿ ಅಧಿಕಾರಿಗಳ ಮುಂದೆ ವಿವರಿಸಿ ಗೋಳಾಡಿದ್ದಾರೆ.
ಗಣತಿಗಾಗಿ ಬಳಸುತ್ತಿರುವ ಮೊಬೈಲ್ ಆ್ಯಪ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಶಿಕ್ಷಕರು ದೂರಿದ್ದಾರೆ. ಫೋಟೋ ಅಪ್ಲೋಡ್ ಮಾಡುವಾಗ ಆಗಾಗ್ಗೆ ಎರರ್ ಎನ್ನುವುದು ಸಾಮಾನ್ಯವಾಗಿದೆ. ಇದು ಸಮೀಕ್ಷಾ ಕಾರ್ಯವನ್ನು ವಿಳಂಬಗೊಳಿಸುತ್ತಿದೆ. ಅಲ್ಲದೆ, ಮನೆಗಳಿಗೆ ಅಂಟಿಸಿದ ಆರ್ಆರ್ ನಂಬರ್ಗಳು ಮಳೆ ಮತ್ತು ಇತರ ಕಾರಣಗಳಿಂದ ಹರಿದು ಹೋಗಿದ್ದು, ಸರಿಯಾದ ಮನೆಯನ್ನು ಹುಡುಕಲು ಗಣತಿದಾರರಿಗೆ ಕಷ್ಟವಾಗುತ್ತಿದೆ. ಈ ಗೊಂದಲಗಳ ನಡುವೆಯೇ, ಒಟಿಪಿ ಬರುವುದೂ ವಿಳಂಬವಾಗುತ್ತಿದ್ದು, ಸಮೀಕ್ಷೆ ನಡೆಸಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ.ಸಾರ್ವಜನಿಕರ ಅಸಹಕಾರ: ಗಣತಿ ಕಾರ್ಯಕ್ಕೆ ಸಾರ್ವಜನಿಕರೂ ಸಂಪೂರ್ಣವಾಗಿ ಸಹಕರಿಸುತ್ತಿಲ್ಲ ಎಂದು ಶಿಕ್ಷಕರು ಆರೋಪಿಸಿದ್ದಾರೆ. ಒಬ್ಬ ವ್ಯಕ್ತಿಗೆ 40 ಪ್ರಶ್ನೆಗಳು ಮತ್ತು ಪ್ರತಿ ಕುಟುಂಬಕ್ಕೆ 20 ಪ್ರಶ್ನೆಗಳನ್ನು ಕೇಳಬೇಕಿರುವುದರಿಂದ ಒಂದು ಮನೆಯ ಸಮೀಕ್ಷೆಗೆ ಒಂದು- ಎರಡು ಗಂಟೆಗಳ ಸಮಯ ಬೇಕಾಗುತ್ತಿದೆ. ಇಷ್ಟು ಸಮಯದ ವಿಸ್ತಾರವಾದ ಪ್ರಶ್ನೆಗಳಿಗೆ ಉತ್ತರಿಸಲು ಹಲವು ಕುಟುಂಬಗಳು ಬೇಸರ ವ್ಯಕ್ತಪಡಿಸುತ್ತಿವೆ. ತಮ್ಮ ವೈಯಕ್ತಿಕ ಕೆಲಸಗಳಿಗಾಗಿ ಗಣತಿ ಬೇಗ ಮುಗಿಸಿ ಹೋಗುವಂತೆ ಹೇಳುತ್ತಿದ್ದಾರೆ ಎಂದು ಗಣತಿದಾರರು ತಿಳಿಸಿದ್ದಾರೆ.ತಂತ್ರಜ್ಞಾನದ ದೋಷಗಳು ಮತ್ತು ನಾಗರಿಕರ ಸ್ಪಂದನೆ ಕೊರತೆಯು ಗಣತಿ ಕಾರ್ಯಕ್ಕೆ ದೊಡ್ಡ ಸವಾಲಾಗಿದೆ. ಈ ಸಮಸ್ಯೆಗಳು ಬಗೆಹರಿಯದಿದ್ದರೆ ನಿಗದಿತ ಸಮಯದಲ್ಲಿ ಗಣತಿ ಪೂರ್ಣಗೊಳಿಸುವುದು ಕಷ್ಟಕರವಾಗಬಹುದು ಎಂದು ಶಿಕ್ಷಕರು ಕಳವಳ ವ್ಯಕ್ತಪಡಿಸಿದ್ದಾರೆ.ಒಂದು ಕಡೆ ಆ್ಯಪ್ನಲ್ಲಿ ಸಮಸ್ಯೆ, ಮತ್ತೊಂದೆಡೆ ಸಾರ್ವಜನಿಕರ ಅಸಹಕಾರ. ಇದರಿಂದ ಸಮೀಕ್ಷೆ ನಡೆಸುವುದು ಕಷ್ಟವಾಗಿದೆ ಎಂದು ಶಿಕ್ಷಕ ಸಂಗಮೇಶ ತಿಳಿಸಿದರು.ಅಧಿಕಾರಿಗಳ ಜತೆ ಚರ್ಚೆ: ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳು ಗಮನಕ್ಕಿವೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಮೆಹಬೂಬ್ ತುಂಬರಮಟ್ಟಿ ತಿಳಿಸಿದರು.