ಸಾರಾಂಶ
ಸಿಂಧನೂರಿನ ಮಿನಿವಿಧಾನಸೌಧ ಕಾರ್ಯಾಲಯದಲ್ಲಿ ತಾಲೂಕು ಆಡಳಿತದಿಂದ ನಡೆದ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಗಣ್ಯರು, ಅಧಿಕಾರಿಗಳು ಪುಷ್ಪನಮನ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಸಿಂಧನೂರು
ನಗರದ ಮಿನಿವಿಧಾನಸೌಧ ಕಾರ್ಯಾಲಯದಲ್ಲಿ ತಾಲೂಕು ಆಡಳಿತ ವತಿಯಿಂದ ಭಾನುವಾರ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ ಕಾರ್ಯಕ್ರಮವನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಹಾಗೂ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.ನಿವೃತ್ತ ಶಿಕ್ಷಣಾಧಿಕಾರಿ ಎಚ್.ಜಿ.ಹಂಪಣ್ಣ ಮಾತನಾಡಿ, ಅಪ್ಪಣ್ಣ ಸುಮಾರು 370ಕ್ಕೂ ಹೆಚ್ಚು ವಚನ ರಚಿಸಿದ್ದು, ಇವರ ಪತ್ನಿ ಲಿಂಗಮ್ಮ ಕೂಡ ಕಾಯಕದ ಜೊತೆಗೆ ವಚನ ರಚನೆಯಲ್ಲಿಯೂ ತೊಡಗಿದ್ದರು. ಒಳ್ಳೆಯ ನಡೆ, ನುಡಿ, ಕಾಯಕಕ್ಕೆ ಬಾಗುವವರೇ ನಿಜವಾದ ಶರಣರು ಎಂಬುದು ಶ್ರೇಷ್ಠ ಸಂತ ಅಪ್ಪಣ್ಣರ ನಂಬಿಕೆಯಾಗಿತ್ತು ಎಂದು ವಿವರಿಸಿದರು.
ಜಾತಿ ನಿರ್ಮೂಲನಾ ಚಳವಳಿ ಸಂಚಾಲಕ ಎಚ್.ಎನ್.ಬಡಿಗೇರ್, ಬಿಜೆಪಿ ಮುಖಂಡ ಕೆ.ಕರಿಯಪ್ಪ, ಜಿಪಂ ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ ಮಾತನಾಡಿದರು. ಲೋಕೋಪಯೋಗಿ ಕಚೇರಿ ಪಕ್ಕದ ಹಡಪದ ಅಪ್ಪಣ್ಣ ವೃತ್ತದಲ್ಲಿ ಅವರ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು. ಆರ್ಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಪನಗೌಡ ಬಾದರ್ಲಿ, ಗ್ರೇಡ್-2 ತಹಸೀಲ್ದಾರ್ ಚಂದ್ರಶೇಖರ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್ ವಕೀಲ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಜೀನೂರು, ನಗರಸಭೆ ಮಾಜಿ ಅಧ್ಯಕ್ಷ ಶರಣಪ್ಪ ತೆಂಗಿನಕಾಯಿ, ಸದಸ್ಯ ಶೇಖರಪ್ಪ ಗಿಣಿವಾರ, ಹಡಪದ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಭೀಮಣ್ಣ ಬೆಳಗುರ್ಕಿ, ಮುಖಂಡರಾದ ಕಾಶಣ್ಣ, ಈರಣ್ಣ, ಸಿದ್ದು ಮಾಡಶಿರವಾರ ಇದ್ದರು.