ಸಾರಾಂಶ
ದೊಡ್ಡಬಳ್ಳಾಪುರ: ಜೆಡಿಎಸ್ ಪಕ್ಷವನ್ನು ವಿವಿಧ ಹಂತಗಳಲ್ಲಿ ಸದೃಢಗೊಳಿಸುವಲ್ಲಿ ದಿವಂಗತ ಅಪ್ಪಯ್ಯಣ್ಣ ಅವರ ಕೊಡುಗೆ ಅನನ್ಯವಾದದ್ದು. ಕೃಷಿ, ಸಹಕಾರ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅವರ ಪ್ರಾಮಾಣಿಕ ಸೇವೆ ಗಣನೀಯ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಮರಿಸಿದರು.
ತಾಲೂಕಿನ ಹಾಡೋನಹಳ್ಳಿ ಗ್ರಾಮದ ರಂಗ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ದಿವಂಗತ ಎಚ್.ಅಪ್ಪಯ್ಯಣ್ಣ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಪ್ಪಯ್ಯಣ್ಣ ಸಾವು ಅನಿರೀಕ್ಷಿತ. ಅವರು ಇನ್ನೂ ಹತ್ತಾರು ವರ್ಷ ನಮ್ಮ ಜೊತೆ ಇರಬೇಕಿತ್ತು. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟಲು ಅವಿರತ ಹೋರಾಟ ನಡೆಸಿದ ಅಪ್ಪಯ್ಯಣ್ಣ ಸಾವು ಪಕ್ಷಕ್ಕೆ ತುಂಬಲಾರದ ನಷ್ಟ ಎಂದು ಅಭಿಪ್ರಾಯಪಟ್ಟರು.ತಾವು ದೆಹಲಿಯಲ್ಲಿದ್ದ ವೇಳೆ ಅಪ್ಪಯ್ಯಣ್ಣ ಅವರ ಸಾವಿನ ವಿಷಯ ತಿಳಿದಾಗ ನಂಬಲು ಸಾಧ್ಯವಾಗಲಿಲ್ಲ. ಈ ಕುರಿತು ತಪ್ಪು ಮಾಹಿತಿ ಇರಬೇಕು ನೋಡಿ ಎಂದು ಹೇಳಿದ್ದೆ. ಅವರ ಜೀವನ ಶೈಲಿ ಇತರರಿಗೂ ಮಾದರಿಯಾಗಿದ್ದು, ಅವರು ಉತ್ತಮ ಆರೋಗ್ಯ ಹೊಂದಿದ್ದರು. ಆದರೆ ಅವರ ಸಾವು ಅನಿರೀಕ್ಷಿತ. ತಮ್ಮೊಂದಿಗೆ ಅವರು ಆತ್ಮೀಯ ಒಡನಾಟ ಹೊಂದಿದ್ದರು. ಸಣ್ಣ ಹಳ್ಳಿಯ ರೈತನ ಮಗನಾಗಿ ಜನಿಸಿದ ಅವರು ತಾಲೂಕಿನ ನಾಯಕನಾಗಿ ಬೆಳೆದದ್ದು ಸುಲಭವಾಗಿರಲಿಲ್ಲ. ರಾಜ್ಯದಲ್ಲಿ ದೊಡ್ಡಬಳ್ಳಾಪುರ ಹಾಗೂ ಕನಕಪುರದಲ್ಲಿ ರಾಜಕೀಯ ಮಾಡುವುದು ಅಷ್ಟು ಸುಲಭವಲ್ಲ. ಸ್ಥಳೀಯ ಮಟ್ಟದ ಜೆಡಿಎಸ್ ಪಕ್ಷ ಸಂಘಟನೆ ಮಾಡುವಲ್ಲಿ ಅವರ ಕೊಡುಗೆ ಅಪಾರ. ತಳಮಟ್ಟದಿಂದ ಬೆಳೆದು ಬಂದ ನಾಯಕ ಅವರು ಎಂದರೆ ತಪ್ಪಾಗಲಾರದು ಎಂದು ಹೇಳಿದರು.
ರೈತರಿಗೆ ಶಕ್ತಿ ತುಂಬುವ ಕಾರ್ಯಕ್ರಮಗಳನ್ನು ರೂಪಿಸಿದ ಕೀರ್ತಿ ಅವರದ್ದು. ಸಹಕಾರ ಕ್ಷೇತ್ರದಲ್ಲಿ ಅವರ ಕೊಡುಗೆ ಅನನ್ಯ. ಅವರ ದೂರದೃಷ್ಟಿ ಚಿಂತನೆ ರೈತ ಮಹಿಳೆಯರಿಗೆ ಆರ್ಥಿಕವಾಗಿ ಜೀವನ ಕಟ್ಟಿಕೊಳ್ಳಲು ಅನುಕೂಲವಾಯಿತು. ಅವರ ಪ್ರಾಮಾಣಿಕ ಸೇವೆ ಅವರ ವ್ಯಕ್ತಿತ್ವ ಬಿಂಬಿಸುತ್ತದೆ ಎಂದರು.ಸಾವಿಗೆ ಬರಲಾಗಲಿಲ್ಲ: ವಿಷಾದ
ದೆಹಲಿಯಲ್ಲಿ ಪೂರ್ವ ನಿಯೋಜಿತಾ ಕಾರ್ಯಕ್ರಮ ನಿರ್ಧಾರವಾಗಿದ್ದ ಕಾರಣ ನಾನು ಅಪ್ಪಯ್ಯಣ್ಣ ಅವರ ಸಾವಿನ ಸಂದರ್ಭದಲ್ಲಿ ಬರಲು ಸಾಧ್ಯವಾಗಲಿಲ್ಲ. ಅದಕ್ಕೆ ಅಭಿಮಾನಿಗಳಲ್ಲಿ ಕ್ಷಮೆ ಕೋರುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮಿಜಿ, ಆದಿಚುಂಚನಗಿರಿ ಶಾಖಾಮಠದ ಮಂಗಳನಾಥ ಸ್ವಾಮೀಜಿ, ಪುಷ್ಪಾಂಡಜ ಮಹರ್ಷಿ ಆಶ್ರಮದ ದಿವ್ಯಜ್ಞಾನಾಂದ ಸ್ವಾಮೀಜಿ, ವಿಧಾನ ಪರಷತ್ ಸದಸ್ಯ ರಮೇಶ್ಗೌಡ, ಮಾಜಿ ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ, ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಪಿಳ್ಳಮುನಿಶಾಮಪ್ಪ, ಜಿ.ಚಂದ್ರಣ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ಕೇಂದ್ರ ರೇಷ್ಮೆ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಜೆಡಿಎಸ್ ಮುಖಂಡ ಹರೀಶ್ಗೌಡ, ಅಪ್ಪಯ್ಯಣ್ಣ ಪುತ್ರ ಎ.ನಾಗರಾಜ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ಜೆಡಿಎಸ್ ತಾಲೂಕು ಅಧ್ಯಕ್ಷ ಲಕ್ಷ್ಮೀಪತಿ, ವಕ್ತಾರ ಕುಂಟನಹಳ್ಳಿ ಮಂಜುನಾಥ್ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಮುಖಂಡರು, ಕೃಷಿ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ, ವಿವಿಧ ಸಂಘಟನೆಗಳ ಪ್ರಮುಖರು ಹಾಜರಿದ್ದರು.
11ಕೆಡಿಬಿಪಿ2-ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ನಡೆದ ದಿವಂಗತ ಎಚ್.ಅಪ್ಪಯ್ಯಣ್ಣ ನುಡಿನಮನ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪಾಲ್ಗೊಂಡರು.
--11ಕೆಡಿಬಿಪಿ3-
ದೊಡ್ಡಬಳ್ಳಾಪುರದ ಹಾಡೋನಹಳ್ಳಿಯಲ್ಲಿ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು.