ಬೇಲೂರು ರಥೋತ್ಸವದಲ್ಲಿ ಕುರಾನ್‌ ಪಠಣ ನಿರ್ಬಂಧಿಸಲು ಮನವಿ

| Published : Mar 29 2025, 12:30 AM IST

ಬೇಲೂರು ರಥೋತ್ಸವದಲ್ಲಿ ಕುರಾನ್‌ ಪಠಣ ನಿರ್ಬಂಧಿಸಲು ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವ ದಿನದಂದು ಮುಸ್ಲಿಂ ಖಾಜಿಯವರಿಂದ ಕುರಾನ್ ಪಠಣವನ್ನು ನಿರ್ಬಂಧಿಸಬೇಕೆಂದು ರಾಮಧೂತ ಹಿಂದೂ ಸಮಾಜ ಹಾಗೂ ಶ್ರೀ ಚನ್ನಕೇಶವ ಸ್ವಾಮಿ ಭಕ್ತರ ವತಿಯಿಂದ ಶುಕ್ರವಾರ ತಾಲೂಕು ಆಡಳಿತಕ್ಕೆ ಮನವಿ ಪತ್ರವನ್ನು ಸಲ್ಲಿಸಿದರು. ದೇಗುಲದ ಮ್ಯಾನ್ಯುಯಲ್‌ನಲ್ಲೂ ಸಹ ಕುರಾನ್ ಪಠಣಕ್ಕೆ ಅವಕಾಶ ಇಲ್ಲ. ಅವರಿಗೆ ಮರ್ಯಾದೆ ನೀಡಿ, ದೇವರಿಗೆ ವಂದನೆ ಸಲ್ಲಿಸಿ ತೆರಳುವ ಉಲ್ಲೇಖವಿದೆ. ಅದನ್ನು ಪಾಲಿಸಲಿ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವ ದಿನದಂದು ಮುಸ್ಲಿಂ ಖಾಜಿಯವರಿಂದ ಕುರಾನ್ ಪಠಣವನ್ನು ನಿರ್ಬಂಧಿಸಬೇಕೆಂದು ರಾಮಧೂತ ಹಿಂದೂ ಸಮಾಜ ಹಾಗೂ ಶ್ರೀ ಚನ್ನಕೇಶವ ಸ್ವಾಮಿ ಭಕ್ತರ ವತಿಯಿಂದ ಶುಕ್ರವಾರ ತಾಲೂಕು ಆಡಳಿತಕ್ಕೆ ಮನವಿ ಪತ್ರವನ್ನು ಸಲ್ಲಿಸಿದರು.

ಮನವಿ ಪತ್ರವನ್ನು ತಾಲೂಕು ದಂಡಾಧಿಕಾರಿಗಳಿಗೆ, ಪೊಲೀಸ್ ಇಲಾಖೆಗೆ ಶ್ರೀ ಚನ್ನಕೇಶವ ಸ್ವಾಮಿ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಸಲ್ಲಿಸಿದ ನಂತರ ಮಾತನಾಡಿದ ಹಿಂದೂ ಮುಖಂಡ ರಘು ಸಕಲೇಶಪುರ, ವಿಶ್ವವಿಖ್ಯಾತ ದೇವಾಲಯಗಳಲ್ಲಿ ಒಂದಾದ ಶ್ರೀ ಚನ್ನಕೇಶವ ದೇವಾಲಯದಲ್ಲಿ ನಡೆಯುವ ರಥೋತ್ಸವವು ಶಾಂತಿ, ಸೌಹಾರ್ದದ ಸಂಕೇತವಾಗಿದೆ. ಆದರೆ ಕೆಲ ವರ್ಷಗಳ ಹಿಂದೆ ಯಾರೋ ಒಬ್ಬರ ಹಿತಾಸಕ್ತಿಗಾಗಿ ಮುಸ್ಲಿಂ ಖಾಜಿಯವರು ರಥೋತ್ಸವ ಸಂದರ್ಭದಲ್ಲಿ ರಥದ ಮುಂದೆ ನಿಂತು ಕುರಾನ್ ಪಠಣ ಮಾಡಿದ್ದರಿಂದ ಹಾಗೇ ಬೆಳೆದುಕೊಂಡು ಬಂದಿತ್ತು ಎಂದರು.

ಈ ಬಾರಿ ಯಾವುದೇ ಕಾರಣಕ್ಕೂ ಕುರಾನ್ ಪಠಣ ನಡೆಸದಂತೆ ಹಿಂದಿನ ಸಂಪ್ರದಾಯದಂತೆ ದೇಗುಲದಲ್ಲಿ ಸೇವೆ ಸಲ್ಲಿಸುವ ಪಟೇಲರು, ಅಡ್ಡೆಗಾರರು ಪೊಲೀಸರು ಪ್ರತಿಯೊಬ್ಬರಿಗೂ ಗೌರವವನ್ನು ದೇವಾಲಯದ ವತಿಯಿಂದ ನೀಡುತ್ತಿದೆ. ಅದೇ ರೀತಿ ಖಾಜಿಯವರಿಗೂ ಗೌರವ ನೀಡಲಿ. ಅದನ್ನು ಬಿಟ್ಟು ಕುರಾನ್ ಪಠಣಕ್ಕೆ ಅವಕಾಶ ಕೊಟ್ಟು ಹಿಂದೂ ಧರ್ಮಕ್ಕೆ ಹಾಗೂ ಶ್ರೀ ಚನ್ನಕೇಶವ ಸ್ವಾಮಿ ಭಕ್ತರಿಗೆ ಧಕ್ಕೆ ಉಂಟುಮಾಡುವ ಕೆಲಸ ಮಾಡಬಾರದು. ಅಲ್ಲದೆ ಇದಕ್ಕೆ ಸಂಪೂರ್ಣ ಹೊಣೆ ಜಿಲ್ಲಾಡಳಿತ ಹಾಗು ತಾಲೂಕು ಆಡಳಿತದ್ದಾಗಿದ್ದು, ಯಾವುದೇ ರೀತಿಯ ಪಠಣಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು.

ದೇಗುಲದ ಮ್ಯಾನ್ಯುಯಲ್‌ನಲ್ಲೂ ಸಹ ಕುರಾನ್ ಪಠಣಕ್ಕೆ ಅವಕಾಶ ಇಲ್ಲ. ಅವರಿಗೆ ಮರ್ಯಾದೆ ನೀಡಿ, ದೇವರಿಗೆ ವಂದನೆ ಸಲ್ಲಿಸಿ ತೆರಳುವ ಉಲ್ಲೇಖವಿದೆ. ಅದನ್ನು ಪಾಲಿಸಲಿ. ಜಾತ್ರೆಯ ಸಂಬಂಧವಾಗಿ ತಾಲೂಕು ಆಡಳಿತ ಹಾಗೂ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಎಲ್ಲಾ ಧರ್ಮಗಳ ಮುಖಂಡರ ಶಾಂತಿ ಸಭೆಯಲ್ಲಿ ಮುಸ್ಲಿಂ ಧರ್ಮ ಗುರುಗಳೆ ಇದು ಒಂದು ಕುಟುಂಬದ ಪರಂಪರೆಯಾಗಿದ್ದು ಇದಕ್ಕೂ ನಮಗೂ ಸಂಬಂಧವಿಲ್ಲ. ದೇಗುಲದ ಆಡಳಿತ ಮಂಡಳಿ ಯಾವುದೇ ರೀತಿ ಕ್ರಮ ಕೈಗೊಂಡರೂ ನಮ್ಮ ಸಹಮತ ಇದೆ ಎಂದು ಸಭೆಯಲ್ಲಿ ತಿಳಿಸಿದ್ದು ಇದನ್ನು ಮತ್ತೆ ಪ್ರಚೋದನೆ ಪಡಿಸುವ ಅವಶ್ಯಕತೆ ಇಲ್ಲ. ಆ ಕುಟುಂಬದವರಿಗೆ ವಂದನೆ ಸಲ್ಲಿಸುವ ಅವಕಾಶ ಇದೆ. ಆದರೆ ಕುರಾನ್ ಪಠಣಕ್ಕೆ ಅವಕಾಶ ನೀಡಬಾರದು. ಒಂದು ಪಕ್ಷ ಇದನ್ನು ಉಲ್ಲಂಘಿಸಿದರೆ ಇದಕ್ಕೆ ನೇರ ಹೊಣೆ ನೀವೆ, ಯಾವುದೇ ಕಾರಣಕ್ಕೂ ಹಿಂದೂ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಬಾರದು. ಅದೇ ರೀತಿ ಜಾತ್ರೆಯಲ್ಲಿ ಹಿಂದೂ ದೇಗುಲದ ಸುತ್ತಮುತ್ತ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು. ಹಿಂದೂ ಧರ್ಮದವರಿಗೆ ಮೊದಲ ಆದ್ಯತೆ ನೀಡುವಂತೆ ದೇಗುಲದ ಕಾರ್ಯನಿರ್ವಾಹಣಾಧಿಕಾರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹಿಂದು ಸಮಾಜದ ಬಾಂಧವರಾದ ಮೋಹನ್, ಮಂಜುನಾಥ್, ಮಹೇಶ್, ಸುಪ್ರೀತ್, ರಾಜೇಶ್, ಧನು, ಧರ್ಶನ್, ರಕ್ಷಿತ್ ಇತರರು ಹಾಜರಿದ್ದರು.