ಒಕ್ಕೂಟದ ಅಧ್ಯಕ್ಷ ಬಿ.ಎಚ್.ನರೇಂದ್ರ ಪೈ ನೇತೃತ್ವ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಅನುದಾನ ರಹಿತ ಶಾಲೆಗಳಿಗೆ ಸ್ಯಾಟ್ಸ್ ಪ್ರಕಾರ ಪಠ್ಯಪುಸ್ತಕಗಳ ಖರೀದಿಸಲು ತೀವ್ರ ಆರ್ಥಿಕ ಹೊರೆಯಾಗುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ಜಿಲ್ಲಾ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟ ಪದಾಧಿಕಾರಿಗಳು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ರಿಗೆ ಬುಧವಾರ ಮನವಿ ಸಲ್ಲಿಸಿದರು.

ಈ ಕುರಿತು ಮಾತನಾಡಿದ ಒಕ್ಕೂಟದ ಅಧ್ಯಕ್ಷ ಬಿ.ಎಚ್.ನರೇಂದ್ರ ಪೈ, ಶಾಲೆಗಳಲ್ಲಿ ಹಿಂದಿನ ವರ್ಷದ ವಿದ್ಯಾರ್ಥಿಗಳಿಂದ ಪಠ್ಯಪುಸ್ತಕ ಸಂಗ್ರಹಿಸಿ ಅವುಗಳನ್ನು ಈ ಸಾಲಿನ ಬಡ ವಿದ್ಯಾರ್ಥಿಗಳಿಗೆ ನೀಡುವ ವ್ಯವಸ್ಥೆಯಿರುವುದರಿಂದ ಸ್ಯಾಟ್ಸ್ ಪ್ರಕಾರ ಪಠ್ಯಪುಸ್ತಕಗಳನ್ನು ಖರೀದಿಸುವುದು ಆಡಳಿತ ಮಂಡಳಿಗೆ ಆರ್ಥಿಕ ಹೊರೆಯಾಗಿದೆ ಎಂದು ತಿಳಿಸಿದರು.

ಶೇ.25 ರಷ್ಟು ಮುಂಗಡ ಹಣ ಪಾವತಿಸುವುದು ಕಷ್ಟವಾಗುತ್ತದೆ. ಅನುದಾನ ರಹಿತ ಶಾಲೆಗಳಿಗೆ ವರ್ಷದ ಕೊನೆಯಲ್ಲಿ ಇಷ್ಟು ಹಣ ಒಟ್ಟಿಗೆ ಪಾವತಿಸುವುದು ಕಷ್ಟ ಸಾಧ್ಯ. ಈಗಾಗಲೇ ಅನುದಾನ ರಹಿತ ಮಕ್ಕಳಿಗೂ ಪಠ್ಯಪಸ್ತಕವನ್ನು ಉಚಿತವಾಗಿ ನೀಡಲು ವ್ಯವಸ್ಥೆ ಮಾಡಬೇಕು. ಸರ್ಕಾರಿ ಮತ್ತು ಖಾಸಗಿ ಶಾಲೆ ಮಕ್ಕಳೆಲ್ಲರೂ ಒಂದೇ ಎಂದು ಪರಿಗಣಿಸಬೇಕು ಎಂದರು.


ಜಿಲ್ಲೆಯ ಬಹಳಷ್ಟು ಶಾಲೆಗಳಿಗೆ ಕಳೆದ 3-4 ವರ್ಷಗಳಿಂದ ಆರ್‌ಟಿಇ ಹಣ ಬಾಕಿ ಉಳಿಸಿ ಕೊಂಡಿದೆ. ಖಾಸಗಿ ಶಾಲೆಗಳನ್ನು ಆರ್ಥಿಕ ಸಮಸ್ಯೆಗಳಿಗೆ ದೂಕಿರುವುದಲ್ಲದೇ ಅಭಿವೃದ್ಧಿ ಕಾರ್ಯಗಳು ಸ್ಥ ಗಿತಗೊಂಡಿವೆ. ಆದ್ದರಿಂದ ಸಣ್ಣಪುಟ್ಟ ನೆಪ ನೀಡಿ ಆರ್‌ಟಿಇ ಕಂತುಗಳನ್ನು ಅನುದಾನ ರಹಿತ ಶಾಲೆಗಳಿಗೆ ಕೂಡಲೇ ಬಿಡುಗಡೆ ಮಾಡಲು ಆದೇಶಿಸಬೇಕು ಎಂದು ತಿಳಿಸಿದರು.

ಈ ವೇಳೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ.ಎನ್.ಷಡಕ್ಷರಿ, ಕಾರ್ಯದರ್ಶಿ ನಂದಕುಮಾರ್, ಸಹ ಕಾರ್ಯದರ್ಶಿ ಸಿ.ಎಚ್.ಶ್ರೀನಿವಾಸ್, ಖಜಾಂಚಿ ಶರತ್‌ಕುಮಾರ್, ಸದಸ್ಯರಾದ ನಿರ್ಮಲಾ ಬೆನನ್, ಸಾವಿತ್ರಿ, ಮಂಜೇಗೌಡ, ಇದ್ದರು.