ಸಾರಾಂಶ
ಬೀದರ್: ಬೀದರ್ ಜಿಲ್ಲೆಯಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆಯಲ್ಲದೆ ಕಲ್ಯಾಣ ನಾಡಿನಲ್ಲಷ್ಟೇ ಅಲ್ಲ ದೇಶದಲ್ಲಿರುವ ಶರಣ ಸ್ಮಾರಕಗಳ ರಕ್ಷಣೆಗೆ ಪ್ರಯತ್ನಿಸಲಾಗುವುದು ಎಂದು ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.ನಗರದ ಬಸವಗಿರಿಯಲ್ಲಿ ಆಯೋಜಿಸಲಾಗಿರುವ 23ನೇ ವಚನ ವಿಜಯೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಚನ ಸಾಹಿತ್ಯ ಈ ನೆಲದ ಅಸ್ಮಿತೆ. ಬಸವಾದಿ ಶರಣರು ಸಾಮಾಜಿಕ ನ್ಯಾಯ ಸರ್ವರಿಗೂ ಸಮಬಾಳು ಕಲ್ಪಿಸಿ ಬಾಳು ಬಂಗಾರವಾಗಿಸಿಕೊಂಡಿದ್ದಾರೆ. ಅದು ಇಂದು ನಮಗೆ ಮಾರ್ಗದರ್ಶಕವಾಗಿದೆ ಎಂದರು. 12ನೇ ಶತಮಾನದಲ್ಲಿ 33 ಜನ ಶರಣೆಯರು ವಚನಗಳನ್ನು ರಚಿಸಿದ್ದು, ಅಪರೂಪದ್ದು. ಮಹಿಳೆಯರ ಸಬಲೀಕರಣಕ್ಕಾಗಿ ದುಡಿಯಬೇಕೆಂದು ಕರೆ ನೀಡಿದ ಅವರು, ಕೆಟ್ಟ ಹಾಗೂ ಶುಷ್ಕ ವಿಚಾರ ದುಷ್ಟಕೃತ್ಯಕ್ಕೆ ಮೂಲ ಒಳ್ಳೆಯ ವಿಚಾರ, ವಚನಗಳ ಅನುಷ್ಠಾನದಿಂದ ಸಮಸ್ಯೆಗಳ ಪರಿಹಾರ ಸಾಧ್ಯ. ಅಂದಿಗಿಂತ ಇಂದು ವಚನಗಳ ಪಾಲನೆ ಅವಶ್ಯಕತೆಯಿದ್ದು, ನಾವೆಲ್ಲರೂ ವಚನ ಸಾಹಿತ್ಯ ಸಂರಕ್ಷಣೆಗಾಗಿ ಹುತಾತ್ಮರಾದ ಶರಣ, ಶರಣೆಯರನ್ನು ಸ್ಮರಿಸಬೇಕಿದೆ ಎಂದರು.ನೇತೃತ್ವ ವಹಿಸಿದ್ದ ಡಾ.ಗಂಗಾಂಬಿಕಾ ಅಕ್ಕ ಪ್ರಾಸ್ತಾವಿಕವಾಗಿ ಮಾತನಾಡಿ, 12ನೇ ಶತಮಾನದಲ್ಲಿ ಶರಣರ ಅನುಭಾವದಿಂದ ಮೂಡಿ ಬಂದ ವಚನಗಳು 21ನೇ ಶತಮಾನದಲ್ಲಿ ನಮಗೆ ಉಳಿಸಿಕೊಟ್ಟಿದ್ದರ ಹಿಂದೆ ವೀರಗಾಥೆ ಇದೆ. ತಮ್ಮ ಜೀವತ್ತೆತ್ತು ನಮಗಿತ್ತ ವಚನ ಸಾಹಿತ್ಯ ಸಂರಕ್ಷಣೆಯ ಐತಿಹಾಸಿಕ ಘಟನೆ ಮರೆಯಬಾರದು. ಅದಕ್ಕಾಗಿ ಪ್ರತಿ ವರ್ಷ ವಚನ ವಿಜಯೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.ಧಮ್ಮಾನಂದ ಮಹಾಥೇರೋ, ಬಲವಂತಸಿಂಗ್ ಸಮ್ಮುಖ ವಹಿಸಿದ್ದರು.
ಬಸವಕೇಂದ್ರ ಅಧ್ಯಕ್ಷ ಶರಣಪ್ಪ ಮಿಠಾರೆ, ರಾಷ್ಟ್ರೀಯ ಬಸವದಳದ ಅಧ್ಯಕ್ಷ ಸೋಮಶೇಖರ ಪಾಟೀಲ, ಭಾರತೀಯ ಬಸವದಳದ ರಾಜಾಧ್ಯಕ್ಷ ಬಾಬು ವಾಲಿ, ಬಸವೇಶ್ವರ ದೇವಸ್ಥಾನ ವಿಶ್ವಸ್ಥ ಸಮಿತಿ ಅಧ್ಯಕ್ಷ ಶಶಿಕಾಂತ ದುರ್ಗೆ, ಸುಭಾಷ ಮಡಿವಾಳ, ಸುಭಾಷ ಟಿಳೆಕರ, ರಾಜಕುಮಾರ ನಾಗೇಶ್ವರ, ಸೋಮಶೇಖರ, ಸುಭಾಷ ಗಜರೆ, ಚಂದ್ರಕಾಂತ ಹೂಗಾರ ಉಪಸ್ಥಿತರಿದ್ದರು. ಸುವರ್ಣಾ ಚಿಮಕೋಡೆ ಸ್ವಾಗತಿಸಿದರು. ಜ್ಞಾನದೇವಿ ಬಬಛೆಡೆ ನಿರೂಪಿಸಿದರೆ, ಸಾವಿತ್ರಿ ಮಹಾಜನ ವಂದಿಸಿದರು.