ಅಂಬೇಡ್ಕರ್ ಭವನಕ್ಕೆ ಜಾಗಕ್ಕಾಗಿ ಡೀಸಿಗೆ ಮನವಿ

| Published : Nov 15 2024, 12:34 AM IST

ಸಾರಾಂಶ

ಚಂದ್ರಗುಪ್ತ ಮೌರ್ಯ ದಲಿತ ಹೋರಾಟಗಾರರ ಒಕ್ಕೂಟದ ವತಿಯಿಂದ ಕೆ.ಗೋಪನಹಳ್ಳಿ ಅಲೆಮಾರಿ ಹಂದಿ ಜೋಗಿ ಕಾಲೋನಿಗೆ ಡಾ. ಬಿ ಆರ್‌ ಅಂಬೇಡ್ಕರ್‌ ಸಮುದಾಯ ಭವನ ನಿರ್ಮಾಣ ಮಾಡಲು 1 ಎಕರೆ ಜಾಗವನ್ನು ಮಂಜೂರು ಮಾಡಿಕೊಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಅಂಬೇಡ್ಕರ್‌ ಭವನ ಮತ್ತು ಉದ್ಯಾನವನ ನಿರ್ಮಾಣ ಮಾಡಲು ಮುಂದಾಗಲು ಸಿಜಿಎಂ ದಲಿತ ಹೋರಾಟಗಾರರ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಚಂದ್ರಗುಪ್ತ ಮೌರ್ಯ ದಲಿತ ಹೋರಾಟಗಾರರ ಒಕ್ಕೂಟದ ವತಿಯಿಂದ ಕೆ.ಗೋಪನಹಳ್ಳಿ ಅಲೆಮಾರಿ ಹಂದಿ ಜೋಗಿ ಕಾಲೋನಿಗೆ ಡಾ. ಬಿ ಆರ್‌ ಅಂಬೇಡ್ಕರ್‌ ಸಮುದಾಯ ಭವನ ನಿರ್ಮಾಣ ಮಾಡಲು 1 ಎಕರೆ ಜಾಗವನ್ನು ಮಂಜೂರು ಮಾಡಿಕೊಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷರಾದ ವಿಜಯಕುಮಾರ ಬಾಗಿವಾಳು ಮಾತನಾಡಿ, ಹೊಳೆನರಸೀಪುರ ತಾಲೂಕು, ಹಳ್ಳಿಮೈಸೂರು ಹೋಬಳಿ, ಕೆ.ಗೋಪನಹಳ್ಳಿ (ಕೆರೆಗೋಡು ದಾಖಲೆ) ಗ್ರಾಮದಲ್ಲಿ ಅಲೆಮಾರಿ ಹಂದಿ ಜೋಗಿ ಜನಾಂಗದ ಸುಮಾರು 30 ಕುಟುಂಬಗಳು ವಾಸವಾಗಿದ್ದು, ಸದರಿ ಹಂದಿ ಜೋಗಿ ಕಾಲೋನಿಯ ದಲಿತ ಸಮುದಾಯದವರು ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜನೆ, ಹಬ್ಬ ಹರಿದಿನ, ಮದುವೆ ಮುಂತಾದ ಕಾರ್ಯಕ್ರಮಗಳನ್ನು ಮತ್ತು ಸಮಾರಂಭಗಳನ್ನು ಮಾಡಲು ಜನರಿಗೆ ಜಾಗ ಅಥವಾ ಭವನ ಇಲ್ಲ. ಹೀಗಾಗಿ ರಸ್ತೆಗಳಲ್ಲಿ ಮತ್ತು ಬೀದಿಗಳಲ್ಲಿ ಸಮಾರಂಭಗಳನ್ನು ಮಾಡುತ್ತಿದ್ದು, ಇದರಿಂದ ತುಂಬಾ ತೊಂದರೆಯನ್ನು ಕಾಲೋನಿಯ ದಲಿತರು ಅನುಭವಿಸುತ್ತಿರುತ್ತಾರೆ. ಆದ್ದರಿಂದ ಕೆರಗೋಡು ಗ್ರಾಮದ ಸರ್ವೆ ನಂಬರ್ 46ರಲ್ಲಿ 5 ಎಕರೆ 17 ಗುಂಟೆ ಸರ್ಕಾರಿ ಗೋಮಾಳ ಜಾಗವಿದ್ದು, ಅಲೆಮಾರಿ ಹಂದಿ ಜೋಗಿ ಕಾಲೋನಿಗೆ ಹೊಂದಿಕೊಂಡಿದ್ದು, ಈ ಜಾಗಕ್ಕೆ ಡಾ. ಬಿ ಆರ್‌ ಅಂಬೇಡ್ಕರ್‌ ಭವನ ಮತ್ತು ಉದ್ಯಾನವನ ನಿರ್ಮಾಣ ಮಾಡಲು 1 ಎಕರೆ ಜಾಗವನ್ನು ಮಂಜೂರು ಮಾಡಿಕೊಡಬೇಕೆಂದು ಆಗ್ರಹಿಸಿ ಸಿಜಿಎಂ ದಲಿತ ಹೋರಾಟಗಾರರ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ಹುಳವಾರೆ, ಜಿಲ್ಲಾ ಕಾರ್ಯಧ್ಯಕ್ಷರಾದ ಗೋವಿಂದರಾಜು ಎಂ ವಿ, ರಂಗಸ್ವಾಮಿ ಎಸ್ ಎಸ್, ಚಂದ್ರಶೇಖರ್‌ ಸಾಣೆನಹಳ್ಳಿ, ಕೇಶವಣ್ಣ ಮುಸಾವತ್ತೂರು ಹಾಗೂ ಪ್ರಸನ್ನಕುಮಾರ, ಸಂಪಾದಕರು ಭೀಮಾ ಶ್ರೇಯಸ್ ಮತ್ತು ಗ್ರಾಮಸ್ಥರಾದ ಮಂಜುನಾಥ್ ಹರೀಶ ಗೋವಿಂದರಾಜು ಜಯಣ್ಣ ಮುಂತಾದವರು ಉಪಸ್ಥಿತರಿದ್ದರು.