ಸಾರಾಂಶ
ಪ್ರಸ್ತುತ ವರ್ಷ ದಸರಾ ಉತ್ಸವವನ್ನು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಐತಿಹಾಸಿಕ ದಸರಾ ಆಚರಣೆಗೆ ಕೇವಲ ಎರಡೂವರೆ ತಿಂಗಳು ಬಾಕಿ ಉಳಿದಿರುವುದರಿಂದ ಶೀಘ್ರ ಮಡಿಕೇರಿ ದಸರಾ ಸಮಿತಿಯ ಪೂರ್ವಭಾವಿ ಸಭೆ ನಡೆಸುವಂತೆ ಸಮಿತಿಯ ಕಳೆದ ಬಾರಿಯ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ದಶಮಂಟಪ ಸಮಿತಿಯ ಕಳೆದ ಬಾರಿಯ ಅಧ್ಯಕ್ಷ ಜಗದೀಶ್ ಜಿ.ಸಿ ಹಾಗೂ ಪ್ರಧಾನ ಕಾರ್ಯದರ್ಶಿ ಯೋಗೇಶ್ ಹೆಚ್.ಎಲ್ ಅವರು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ ಮನವಿ ಸಲ್ಲಿಸಿದರು.ಪ್ರಸ್ತುತ ವರ್ಷ ದಸರಾ ಉತ್ಸವವನ್ನು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಸಂಪೂರ್ಣ ಸಹಕಾರ ನೀಡಬೇಕು ಎಂದು ಕೋರಿದರು. ಕಳೆದ ವರ್ಷ ಮಡಿಕೇರಿ ದಸರಾ ಜನೋತ್ಸವ ಯಶಸ್ವಿಯಾಗಲು ಸಹಕರಿಸಿದ ಕಾರಣಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಕಾಶ್ ಆಚಾರ್ಯ ಇತಿಹಾಸ ಪ್ರಸಿದ್ಧ ಮಡಿಕೇರಿ ದಸರಾದ ಅರ್ಥಪೂರ್ಣ ಆಚರಣೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವೆಂದರು.ಜಗದೀಶ್ ಜಿ.ಸಿ ಮಾತನಾಡಿ ಕಳೆದ ಬಾರಿಯ ದಸರಾ ಆಚರಣೆ ಅತ್ಯಂತ ಯಶಸ್ವಿಯಾಗಿದೆ. ಇದಕ್ಕೆ ಪ್ರಮುಖವಾಗಿ ಶಾಸಕರಾದ ಡಾ.ಮಂತರ್ ಗೌಡ, ಜಿಲ್ಲಾಧಿಕಾರಿಗಳು, ಅಧಿಕಾರಿಗಳು, ಎಲ್ಲಾ ಜನಪ್ರತಿನಿಧಿಗಳು, ನಗರದ ನಾಲ್ಕು ಶಕ್ತಿ ದೇವತೆಗಳ ದೇವಾಲಯ ಸಮಿತಿಗಳು, ಎಲ್ಲಾ ಹತ್ತು ಮಂಟಪ ಸಮಿತಿಗಳು ಹಾಗೂ ಸಾರ್ವಜನಿಕರು ಕಾರಣಕರ್ತರಾಗಿದ್ದಾರೆ. ಇವರೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಈ ಬಾರಿಯ ಮಡಿಕೇರಿ ದಸರಾ ಆಚರಣೆಗೂ ಶಾಸಕರು ಕಳೆದ ಬಾರಿಯಂತೆ ಹೆಚ್ಚಿನ ಅನುದಾನ ತರುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.