ಬಾಳೆಹೊನ್ನೂರುಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಬ್ಬಿರುವ ಎಲೆಚುಕ್ಕಿ, ಹಳದಿ ಎಲೆ ರೋಗದಿಂದ ಬೆಳೆಗಾರರು ಸಂಕಷ್ಟಕ್ಕೆ ಈಡಾಗಿದ್ದು ಕೇಂದ್ರ ಸರ್ಕಾರ ತಕ್ಷಣ ಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಲೆನಾಡು ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ತಲವಾನೆ ಪ್ರಕಾಶ್ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಬ್ಬಿರುವ ಎಲೆಚುಕ್ಕಿ, ಹಳದಿ ಎಲೆ ರೋಗದಿಂದ ಬೆಳೆಗಾರರು ಸಂಕಷ್ಟಕ್ಕೆ ಈಡಾಗಿದ್ದು ಕೇಂದ್ರ ಸರ್ಕಾರ ತಕ್ಷಣ ಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಲೆನಾಡು ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ತಲವಾನೆ ಪ್ರಕಾಶ್ ಮನವಿ ಮಾಡಿದರು.ಕೊಪ್ಪ ತಾಲೂಕಿನ ಗುಡ್ಡೇತೋಟದಲ್ಲಿನ ಖಾಸಗಿ ಗೆಸ್ಟ್ ಹೌಸ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಕೇಂದ್ರ ಸಚಿವ ಎಚ್‌ಡಿಕೆ ಅವರನ್ನು ಗುರುವಾರ ಭೇಟಿ ಮಾಡಿದ ಸಂಘಟನೆ ಸದಸ್ಯರು, ಎಲೆಚುಕ್ಕಿ ರೋಗ ದಿಢೀರ್ ವ್ಯಾಪಿಸಿದ ಪರಿಣಾಮ ಮಲೆನಾಡಿ ನಲ್ಲಿ ಶೇ.90ರಷ್ಟು ಫಸಲಿನ ನಷ್ಟದ ಜೊತೆಗೆ ಅಡಕೆ ಮರಗಳಿಗೂ ಹಾನಿಯಾಗಿದೆ. ಮುಂದೇನು ಎಂಬ ಚಿಂತೆಯಲ್ಲಿ ಬೆಳೆಗಾರರಿದ್ದಾರೆ. ಭೌಗೋಳಿಕ ವಾತಾವರಣ, ಹವಾಮಾನಕ್ಕೆ ಸರಿ ಹೊಂದುವ ಕಾಫಿ ಮತ್ತು ಕಾಳುಮೆಣಸು ಬೆಳೆ ಬೆಳೆಯಲು ಕನಿಷ್ಠ 5ರಿಂದ 6 ವರ್ಷ ಬೇಕು. ಈ ಮಧ್ಯಂತರ ಅವಧಿಯಲ್ಲಿ ಸಂತ್ರಸ್ಥ ರೈತರಿಗೆ ತುರ್ತು ಹಣಕಾಸಿನ ನೆರವು ಅಗತ್ಯವಿದೆ. ಹೀಗೆ ಪರ್ಯಾಯ ಬೆಳೆ ಬೆಳೆಯುವ ರೈತರಿಗೆ 5 ವರ್ಷಗಳವರೆಗೆ ಬಡ್ಡಿ ರಹಿತ ಸಾಲ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಹಿರಿಯ ಅಡಕೆ ಬೆಳೆಗಾರ ಜೋಗಿಸರದ ಸೂರ್ಯನಾರಾಯಣ ಮಾತನಾಡಿ, ಯಾವ ಸಂಶೋಧನಾ ಕೇಂದ್ರಗಳು ಈವರೆಗೆ ಎಲೆಚುಕ್ಕಿ ರೋಗಕ್ಕೆ ಮದ್ದು ಕಂಡು ಹಿಡಿದಿಲ್ಲ. ಸಂಶೋಧನಾ ಕೇಂದ್ರಗಳು ಸಲಹೆ ನೀಡುವಂತೆ ಗೊಬ್ಬರ ಮತ್ತು ರಾಸಾಯನಿ ಕಗಳನ್ನು ಸಿಂಪಡಿಸಲು ಅರ್ಥಿಕವಾಗಿ ಸಂಪೂರ್ಣ ಕುಗ್ಗಿ ಹೋಗಿರುವ ರೈತನಿಂದ ಪರಿಪೂರ್ಣಗೊಳಿಸಲು ಅಸಾಧ್ಯ. ಕೇಂದ್ರ ಸರ್ಕಾರ ಎಲೆಚುಕ್ಕಿ ರೋಗದ ಸಂಶೋಧನೆ ಕುರಿತು ಪ್ರತ್ಯೇಕ ವಿಜ್ಞಾನಿಗಳ ತಂಡ ರಚಿಸಿ ಕಾಲಮಿತಿಯೊಳಗೆ ಕಂಡು ಹಿಡಿಯುವಂತೆ ಒತ್ತಾಯಿಸಿದರು.ಮನವಿ ಸ್ವೀಕರಿಸಿ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ಅಡಕೆಗೆ ಎಲೆಚುಕ್ಕಿ ರೋಗ ಬಂದ ಮೇಲೆ ರೈತರು ಕೃಷಿ ನಿಲ್ಲಿಸಿ ಊರು ತೊರೆಯುತ್ತಿದ್ದಾರೆ. ಮೊದಲು ಹಳದಿ ಎಲೆ ರೋಗದಿಂದ ಬಹಳ ವರ್ಷಗಳ ಕಾಲ ಸಮಸ್ಯೆ ಎದುರಿಸಿದ್ದರು. ಅಡಕೆ ಕಾಯಿಲೆಗಳ ಬಗ್ಗೆ ಸಂಶೋಧಕರು ಹಲವಾರು ಸಂಶೋಧನೆ ಮಾಡುತ್ತಿದ್ದೇವೆ ಎಂದು ಹೇಳಿಕೊಂಡರೂ ರೈತರ ಪರಿಸ್ಥಿತಿ ಸರಿಪಡಿಸುವ ನಿಟ್ಟಿನಲ್ಲಿ ಸಂಶೋಧನೆಗಳು ಯಶಸ್ಸು ಕಂಡಿಲ್ಲ ಎಂಬುದು ರೈತರಲ್ಲಿ ಬೇಸರ ಮೂಡಿಸಿದೆ. ಬೆಳೆಗಾರರ ಮನವಿಯನ್ನು ರಾಜ್ಯ ಸರ್ಕಾರದ ಗಮನ ಸೆಳೆಯುತ್ತೇನೆ.ಹಿಂದೆ ಒಮ್ಮೆ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹ್ಹಾಣ್ ಕಚೇರಿಯಲ್ಲಿ ಅಡಕೆ ಕುರಿತು ಸಭೆ ನಡೆಸಿದ್ದೆ. ಮತ್ತೊಮ್ಮೆ ಅವರನ್ನು ಭೇಟಿ ಮಾಡಿ ಈಗಿನ ಸಮಸ್ಯೆಗಳ ಬಗ್ಗೆ ಚರ್ಚಿಸಿ ವೈಜ್ಞಾನಿಕವಾಗಿ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.ಸಂಘಟನೆ ಪ್ರಮುಖರಾದ ಅರವಿಂದ ಸಿಗದಾಳು, ಶೆಟ್ಟಿಗದ್ದೆ ರಾಮಸ್ವಾಮಿ, ತಲವಾನೆ ರಂಗನಾಥ್, ಉದ್ಯಮಿ ಗದ್ದೆಮನೆ ವಿಶ್ವನಾಥ್, ಜೆಡಿಎಸ್ ಮುಖಂಡ ಭಂಡಿಗಡಿ ನಾಗೇಂದ್ರ, ಎಚ್.ಎನ್.ಸತೀಶ್ ಜೈನ್ ಮತ್ತಿತರರು ಇದ್ದರು.೨೪ಬಿಎಚ್‌ಆರ್ ೬:

ಬಾಳೆಹೊನ್ನೂರು ಸಮೀಪದ ಗುಡ್ಡೇತೋಟದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮಲೆನಾಡು ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ತಲವಾನೆ ಪ್ರಕಾಶ್ ನೇತೃತ್ವದಲ್ಲಿ ಭೇಟಿ ಮಾಡಿ ಅಡಕೆ ಬೆಳೆಗಾರರ ಸಮಸ್ಯೆ ಕುರಿತು ಮನವಿ ಸಲ್ಲಿಸಿದರು.