ಪರಿಹಾರ ನೀಡುವಂತೆ ಸಂಸದ ಬೊಮ್ಮಾಯಿಗೆ ಮನವಿ

| Published : Sep 19 2025, 01:01 AM IST / Updated: Sep 19 2025, 01:02 AM IST

ಸಾರಾಂಶ

ತಾಲೂಕಿನಲ್ಲಿ ಅತಿವೃಷ್ಟಿಗೆ ಮುಂಗಾರು ಬೆಳೆಗಳೆಲ್ಲ ಹಾಳಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಕಾರಣ ಅವರಿಗೆ ಬೆಳೆ ಹಾನಿ, ಬೆಳೆ ವಿಮೆ ಪರಿಹಾರದೊಂದಿಗೆ ರೈತರು ಮಾಡಿದ ಸಾಲ ಮನ್ನಾ ಮಾಡಬೇಕು ಹಾಗೂ ಬಂದಷ್ಟು ಬೆಳೆ ಬೆಂಬಲ ಬೆಲೆಯಲ್ಲಿ ಖರೀದಿಸಲು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿ ಕೃಷಿಕ ಸಮಾಜ ಹಾಗೂ ರಾಜ್ಯ ರೈತ ಸಂಘಟನೆ ಸದಸ್ಯರು ಸಂಸದ ಬಸವರಾಜ ಬೊಮ್ಮಾಯಿಗೆ ಬುಧವಾರ ಮನವಿ ಸಲ್ಲಿಸಿದರು.

ಲಕ್ಷ್ಮೇಶ್ವರ: ತಾಲೂಕಿನಲ್ಲಿ ಅತಿವೃಷ್ಟಿಗೆ ಮುಂಗಾರು ಬೆಳೆಗಳೆಲ್ಲ ಹಾಳಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಕಾರಣ ಅವರಿಗೆ ಬೆಳೆ ಹಾನಿ, ಬೆಳೆ ವಿಮೆ ಪರಿಹಾರದೊಂದಿಗೆ ರೈತರು ಮಾಡಿದ ಸಾಲ ಮನ್ನಾ ಮಾಡಬೇಕು ಹಾಗೂ ಬಂದಷ್ಟು ಬೆಳೆ ಬೆಂಬಲ ಬೆಲೆಯಲ್ಲಿ ಖರೀದಿಸಲು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿ ಕೃಷಿಕ ಸಮಾಜ ಹಾಗೂ ರಾಜ್ಯ ರೈತ ಸಂಘಟನೆ ಸದಸ್ಯರು ಸಂಸದ ಬಸವರಾಜ ಬೊಮ್ಮಾಯಿಗೆ ಬುಧವಾರ ಮನವಿ ಸಲ್ಲಿಸಿದರು.

ಈ ವೇಳೆ ಹಿರಿಯ ರೈತ ಮುಖಂಡ ಎಸ್.ಪಿ. ಪಾಟೀಲ ಮಾತನಾಡಿ, ಹೆಸರು ಬೆಳೆಯ ಕಾಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಬೇಕು. ಸದ್ಯ ರೈತರು ಕಷ್ಟಪಟ್ಟು ಬೆಳೆದ ಎಲ್ಲ ಬೆಳೆಗಳು ಎಂಎಸ್‌ಪಿಗಿಂತ ಕಡಿಮೆ ದರದಲ್ಲಿ ಮಾರಾಟ ಆಗುತ್ತಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ. ಕಾರಣ ಬೆಂಬಲ ಬೆಲೆಯಲ್ಲಿ ರೈತರ ಉತ್ಪನ್ನ ಖರೀದಿಸಿ ಕೇಂದ್ರ ಸರ್ಕಾರ ಬರುವಂತೆ ಒತ್ತಡ ಹಾಕಬೇಕು ಎಂದು ಹೇಳಿದ ಅವರು, ಅಕಾಲಿಕ ಮಳೆ ಹತ್ತು ಅನಾನುಕೂಲ ವಾತಾವರಣದಿಂದ ಕಳೆದ ಮೂರ‍್ನಾಲ್ಕು ವರ್ಷಗಳಿಂದ ಯಾವುದೇ ಬೆಳೆಗಳು ಚೆನ್ನಾಗಿ ಬೆಳೆಯದೆ ರೈತರು ಕಣ್ಣೀರು ಸುರಿಸುವ ಪರಿಸ್ಥಿತಿ ಉದ್ಭವಿಸಿದೆ. ಆದ್ದರಿಂದ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಕೃಷಿಕ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಚೆನ್ನಪ್ಪ ಷಣ್ಮುಖಿ ಮಾತನಾಡಿ, ೨೦೧೯ರಿಂದ ಇಲ್ಲಿಯವರೆಗೆ ಕಿಸಾನ ಸಮ್ಮಾನ ಯೋಜನೆಯ ಹೊಸ ಫಲಾನುಭವಿ ರೈತರಿಗೆ ಅವಕಾಶ ದೊರೆತಿಲ್ಲ. ೨೦೨೫ರಲ್ಲಿ ನೊಂದಾಯಿಸಿಕೊಂಡ ರೈತರಿಗೆ ಈ ಯೋಜನೆ ದೊರೆಯುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಪಟ್ಟಣದ ಮುಖಂಡರು ಪಾಳಾ-ಬಾದಾಮಿ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಬೇಕು ಎಂದು ಮನವಿ ಸಲ್ಲಿಸಿದರಲ್ಲದೆ ಲಕ್ಷ್ಮೇಶ್ವರದ ಕಾಳಿಕಾದೇವಿ ಸಮುದಾಯ ಭವನ ಹಾಗೂ ಜೀರ್ಣೋದ್ಧಾರ ಸಮಿತಿ ಸದಸ್ಯರು ಇತಿಹಾಸ ಪ್ರಸಿದ್ಧ ಕಾಳಿಕ ದೇವಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಬೇಕು ಎಂದು ಮನವಿ ಸಲ್ಲಿಸಿದರು.

ಈ ವೇಳೆ ಲಕ್ಷ್ಮೇಶ್ವರ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಮಂಜುನಾಥ ಮಾಗಡಿ, ಬಸವರಾಜ ಜಾಲಗಾರ, ಅಭಯ ಜೈನ್, ಚಂದ್ರು ಮಾಗಡಿ, ಪರಶುರಾಮ ಮೈಲಾರಿ, ಈರಪಣ್ಣ ಮರಳಿಹಳ್ಳಿ, ನಾಗಯ್ಯ ಮಠಪತಿ, ಮುತ್ತು ನಿರಲಗಿ, ಮಲ್ಲಿಕಾರ್ಜುನ ನೀರಾಲೋಟಿ, ಮುತ್ತಣ್ಣಶೆಟ್ರ ವಡಕಣ್ಣವರ, ಜಿ.ಪಿ. ಮಾಡಳ್ಳಿ, ವಿರುಪಾಕ್ಷಪ್ಪ ವಡಕಣ್ಣವರ, ರುದ್ರಪ್ಪ ಚಾಕಲಬ್ಬಿ, ಜಿ.ಆರ್.ಪಾಟೀಲ, ರಾಚಪ್ಪ ಇದ್ದರು.

ಬೆಳೆ ಹಾನಿ ಮತ್ತು ಬೆಳೆ ವಿಮೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಬುಧವಾರ ಲಕ್ಷ್ಮೇಶ್ವರದಲ್ಲಿ ರೈತರು ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.