ಹಾಸನ: ಹಾಸನ ಮಹಾನಗರ ಪಾಲಿಕೆಯ ಎಂಜಿನಿಯರ್ ಕವಿತಾ ಕೆ.ಆರ್ ಅವರ ವಿರುದ್ಧ ಇತ್ತೀಚೆಗೆ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಆರೋಪಗಳ ಕುರಿತು ಸತ್ಯಾಸತ್ಯತೆ ಸಾರ್ವಜನಿಕರಿಗೆ ತಿಳಿಸಬೇಕೆಂದು ಸಕಲೇಶಪುರದ ಮಲೆನಾಡು ರಕ್ಷಣಾ ಸೇನೆಯಿಂದ ಪಾಲಿಕೆ ಆಯುಕ್ತರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಇದೇ ವೇಳೆ ಮಲೆನಾಡು ರಕ್ಷಣಾ ಸೇನೆಯ ಸಾಗರ್ ಜಾನೆಕೆರೆ ಮಾತನಾಡಿ, ಮೂಲತಃ ಸಕಲೇಶಪುರ ತಾಲೂಕಿನ ಕೊಂತನಮನೆ ಗ್ರಾಮದ ರೈತ ದಂಪತಿಗಳ ಪುತ್ರಿಯಾಗಿರುವ ಕವಿತಾ ಕೆ.ಆರ್‌ ಅವರು ೨೦೦೫ರಲ್ಲಿ ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನಗರಾಭಿವೃದ್ಧಿ ಇಲಾಖೆಗೆ ಸೇರ್ಪಡೆಯಾಗಿ ಕಳೆದ ೨೧ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ೨೦೨೨ ರಲ್ಲಿ “ಟಿವಿ೯ ಹೆಮ್ಮೆಯ ಕನ್ನಡತಿ” ಪ್ರಶಸ್ತಿ ಪಡೆದಿದ್ದು, ಟಿವಿ ವಾಹಿನಿಗಳಲ್ಲೂ ಇವರ ಸಾಧನೆ ಪ್ರಸಾರಗೊಂಡಿದೆ. “ಹಾಸನ ಆಕಾಶವಾಣಿ”ಯಲ್ಲಿ ಪರಿಸರ ಕಾಳಜಿ ಹಾಗೂ ಸಾಮಾಜಿಕ ಕಾರ್ಯಗಳ ಕುರಿತು ಸಂದರ್ಶನಗಳು ಮೂಡಿಬಂದಿವೆ. ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಅಗತ್ಯವಿರುವ ಕುಟುಂಬಗಳಿಗೆ ವೈದ್ಯಕೀಯ ಸಹಾಯ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಅವರು ನಿರ್ವಹಿಸಿದ್ದಾರೆ. ಅರಕಲಗೂಡಿನಲ್ಲಿ ಪೌರಕಾರ್ಮಿಕರ ಅಪಘಾತದ ಸಂದರ್ಭದಲ್ಲಿ ಗಾಯಾಳುಗಳ ಚಿಕಿತ್ಸೆಗೆ ನೆರವಾಗಿ, ಮೃತ ಗೋಪಾಲ್ ಅವರ ಅಂತ್ಯಸಂಸ್ಕಾರದ ವೆಚ್ಚವನ್ನು ಸಹ ಭರಿಸಿದ್ದರ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಹಿನ್ನೆಲೆಯಲ್ಲೇ ಇತ್ತೀಚೆಗೆ ಆಗಿಲೆ ಯೋಗೇಶ್ ಎಂಬವರ ಕುಡಿಯುವ ನೀರಿನ ನಲ್ಲಿಗಳ ಸಂಪರ್ಕ ಕುರಿತು ಉಂಟಾದ ವಿವಾದ, ಪಾಲಿಕೆ ಮುಂದೆ ನಡೆದ ಪೌರಕಾರ್ಮಿಕರ ಧರಣಿ ಹಾಗೂ ಪಾಲಿಕೆ ಕಚೇರಿಯ ಸಿಸಿಟಿವಿ ಕ್ಯಾಮೆರಾ ಹಾನಿ ಪ್ರಕರಣಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ ಎಂದರು.

ಅಗಿಲೆ ಯೋಗೇಶ್ ಅವರ ಮನೆಗೆ ಪಡೆದಿರುವ ನೀರಿನ ಸಂಪರ್ಕಗಳು ಸಕ್ರಮವಾಗಿವೆಯೇ? ಸಂಬಂಧಿತ ಅನುಮತಿ ಪತ್ರಗಳು ಮತ್ತು ಪಾವತಿ ದಾಖಲೆಗಳ ವಿವರ ಏನು? ಅಕ್ರಮವಾಗಿದ್ದರೆ ಯಾಕೆ ಕ್ರಮ ಕೈಗೊಳ್ಳಲಿಲ್ಲ? ಎಂಬ ಪ್ರಶ್ನೆಗಳನ್ನು ಎತ್ತಲಾಗಿದೆ. ಇದೇ ರೀತಿ, ಪೌರಕಾರ್ಮಿಕರು ನಡೆಸಿದ ಪ್ರತಿಭಟನೆಗೆ ಮೇಲಧಿಕಾರಿಗಳ ಅನುಮತಿ ಪಡೆದಿದೆಯೇ? ಆರೋಪಗಳಿಗೆ ಪೂರಕ ದಾಖಲೆಗಳಿವೆಯೇ? ಸರ್ಕಾರಿ ನೌಕರರು ಅನುಮತಿ ಇಲ್ಲದೆ ಧರಣಿ ನಡೆಸಿದರೆ ಯಾವ ಕ್ರಮ ಕೈಗೊಳ್ಳಲಾಗುತ್ತದೆ? ಎಂಬುದರ ಕುರಿತು ಸ್ಪಷ್ಟನೆ ಕೋರಲಾಗಿದೆ.

ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಸಂಬಂಧ, ಅಧಿಕೃತ ಅನುಮತಿ ಪಡೆದಿದ್ದರೇ? ಒಂದು ವೇಳೆ ಸರ್ಕಾರಿ ಆಸ್ತಿ ಹಾನಿ ನಡೆದಿದ್ದರೆ, ಸಂಬಂಧಪಟ್ಟವರ ವಿರುದ್ಧ ಯಾವ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ? ಎಂಬುದನ್ನು ಸಹ ಸಾರ್ವಜನಿಕರಿಗೆ ತಿಳಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದರು.