ದಾವಣಗೆರೆ ರಾಜ್ಯ ಬಜೆಟ್‌ ತುಷ್ಟೀಕರಣ: ಬಿಜೆಪಿ ಆಕ್ರೋಶ

| Published : Mar 09 2025, 01:48 AM IST

ಸಾರಾಂಶ

ಅನ್ನದಾತರನ್ನೇ ಕಡೆಗಣಿಸುವ ಜತೆಗೆ ಮುಸ್ಲಿಮರಿಗೆ ಹೆಚ್ಚು ಅನುದಾನ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ ಅನ್ನೇ ಇಸ್ಲಾಮೀಕರಣಗೊಳಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಟ್ರ್ಯಾಕ್ಟರ್ ಸಮೇತ ಪ್ರತಿಭಟನೆ ನಡೆಸಿದರು.

ಅನ್ನದಾತರ ಕಡೆಗಣಿಸಿ, ಮುಸ್ಲಿಮರಿಗೆ ಮಣೆ: ರಾಜಶೇಖರ । ಅಂಬೇಡ್ಕರ್‌ ಆಶಯಕ್ಕೆ ತಿಲಾಂಜಲಿ ಇಟ್ಟ ಹಲಾಲ್ ಬಜೆಟ್

ಕನ್ನಡಪ್ರಭ ವಾರ್ತೆ ದಾವಣಗೆರೆ

ಅನ್ನದಾತರನ್ನೇ ಕಡೆಗಣಿಸುವ ಜತೆಗೆ ಮುಸ್ಲಿಮರಿಗೆ ಹೆಚ್ಚು ಅನುದಾನ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ ಅನ್ನೇ ಇಸ್ಲಾಮೀಕರಣಗೊಳಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಟ್ರ್ಯಾಕ್ಟರ್ ಸಮೇತ ಪ್ರತಿಭಟನೆ ನಡೆಸಿದರು.

ನಗರದ ಶ್ರೀ ಜಯದೇವ ವೃತ್ತದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ ಇತರರ ನೇತೃತ್ವದಲ್ಲಿ ಎಸಿ ಕಚೇರಿವರೆಗೂ ರಾಜ್ಯ ಸರ್ಕಾರದ ತುಷ್ಟೀಕರಣದ ಬಜೆಟ್, ರೈತ ವಿರೋಧಿ ಬಜೆಟ್ ವಿರುದ್ಧ ಘೋಷಣೆ ಕೂಗುತ್ತ ಸಾಗಿದರು.

ನಂತರ ಎಸಿ ಕಚೇರಿ ಎದುರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎನ್.ರಾಜಶೇಖರ ನಾಗಪ್ಪ, ಮುಖ್ಯಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಮುಸ್ಲಿಮರಿಗೆ ಹೆಚ್ಚು ಅನುದಾನ ನೀಡಿ, ಬಜೆಟ್‌ ಅನ್ನೇ ಇಸ್ಲಾಮೀಕರಣ ಮಾಡಿದ್ದಾರೆ. ಇದೊಂದು ಹಲಾಲ್ ಬಜೆಟ್ ಆಗಿದ್ದು, ದಾದಾ ಸಾಹೇಬ್ ಡಾ.ಬಿ.ಆರ್‌.ಅಂಬೇಡ್ಕರ್‌ರ ಆಶಯಗಳಿಗೆ ತಿಲಾಂಜಲಿ ಇಟ್ಟಿದ್ದಾರೆ ಎಂದು ಕಿಡಿಕಾರಿದರು.

ಕಿತ್ತೂರು ಕರ್ನಾಟಕದ ಅಭಿವೃದ್ಧಿಗೂ ಕಡಿಮೆ ಅನುದಾನ ಘೋಷಿಸಿದ್ದಾರೆ. ವಿಧಾನಸಭಾ ಕ್ಷೇತ್ರಗಳ ರಸ್ತೆ, ನೀರು, ಮೂಲ ಸೌಕರ್ಯ ಕಲ್ಪಿಸಲು ಮೀಸಲಿಟ್ಟ ಅನುದಾನವಂತೂ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ನೀಡಿದಂತಾಗಿದೆ ಎಂದು ದೂರಿದರು.

ದಶಕಗಳಿಂದಲೂ ದಾವಣಗೆರೆ ನಗರ, ಜಿಲ್ಲೆಯ ಜನರ ಬೇಡಿಕೆಯಾದ ವಿಮಾನ ನಿಲ್ದಾಣ ಸ್ಥಾಪನೆಯಾಗಲಿ, ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡುವುದಾಗಲೀ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡುವುದಾಗಲೀ, ದಾವಣಗೆರೆ-ಚಿತ್ರದುರ್ಗ ಅವಳಿಗೆ ಜಿಲ್ಲೆಗಳಿಗೆ ಪ್ರತ್ಯೇಕ ಹಾಲು ಒಕ್ಕೂಟ ಮಾಡುವುದಾಗಲೀ, ಜವಳಿ ಪಾರ್ಕ್, ಐಟಿ ಬಿಟಿ, ಬಡವರಿಗೆ ಸೂರು ಕಲ್ಪಿಸುವ ಯೋಜನೆ ನೀಡದೇ ಕಾಂಗ್ರೆಸ್ ಸರ್ಕಾರ ದಾವಣಗೆರೆಯನ್ನು ಕಡೆಗಣಿಸಿದೆ. ಜಿಲ್ಲೆಯ ಜನರ ಬಹುತೇಕ ಬೇಡಿಕೆ ನನೆಗುದಿಗೆ ಬಿದ್ದಿದೆ ಎಂದು ಟೀಕಿಸಿದರು.

ಪಕ್ಷದ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ ಮಾತನಾಡಿ, ಜೀವನಾಡಿ ಭದ್ರಾ ಅಣೆಕಟ್ಟೆ ದುರಸ್ತಿ, ಜಿಲ್ಲೆಯ ಭದ್ರಾ ಕಾಲುವೆಗಳಲ್ಲಿ ಗಿಡಗಂಟೆಗಳು ಬೆಳೆದು, ಸಾಕಷ್ಟು ಹೂಳು ತುಂಬಿದೆ. ಇದರಿಂದಾಗಿ ಡ್ಯಾಂ ನೀರು ಕೊನೆಯ ಭಾಗಕ್ಕೆ ಸಮರ್ಪಕವಾಗಿ ಹರಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ಬಹುತೇಕ ಕಡೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದರೂ, ಕಡೆಗೆ ಜಿಲ್ಲೆಗೊಂದು ತೋಟಗಾರಿಕೆ ಕಾಲೇಜು ತರುವ ಆಸಕ್ತಿಯನ್ನೂ ತೋರಿಲ್ಲ ಎಂದು ಟೀಕಿಸಿದರು.

ಮುಖಂಡರಾದ ಶಿವನಹಳ್ಳಿ ರಮೇಶ, ಶ್ರೀನಿವಾಸ ಟಿ.ದಾಸಕರಿಯಪ್ಪ, ಲೋಕಿಕೆರೆ ನಾಗರಾಜ, ಚಂದ್ರಶೇಖರ ಪೂಜಾರ, ಬಿ.ಜಿ.ಅಜಯಕುಮಾರ, ಧನಂಜಯ ಕಡ್ಲೇಬಾಳ್‌, ಐರಣಿ ಅಣ್ಣೇಶ, ಅನಿಲಕುಮಾರ ನಾಯ್ಕ, ಎಚ್.ಪಿ.ವಿಶ್ವಾಸ, ನವೀನ, ಪಿ.ಎಸ್.ಬಸವರಾಜ, ಆಲೂರು ನಿಂಗರಾಜ, ಕೆ.ವಿ.ಗುರು, ಕೆ.ಎಂ.ವೀರೇಶ, ರಾಜು ವೀರಣ್ಣ, ಪ್ರವೀಣ ಜಾಧವ್, ಪಂಜು, ಕೆಟಿಜೆ ನಗರ ಆನಂದ, ನಿಂಗರಾಜ ರೆಡ್ಡಿ, ನರೇಂದ್ರ, ಎನ್.ಎಚ್.ಹಾಲೇಶ, ಕೆಟಿಜೆ ನಗರ ಲೋಕೇಶ, ಸ್ವಾಮಿ, ಗಂಗಾಧರ ಶಿವಯೋಗಪ್ಪ, ಚೇತು ಬಾಯಿ, ಸವಿತಾ ರವಿ, ಆರ್.ಶಿವಾನಂದ, ಆರ್.ಎಲ್.ಶಿವಪ್ರಕಾಶ್, ಕೊಟ್ರೇಶ ಗೌಡ, ಸಂತೋಷ್ ಪೈಲ್ವಾನ್, ಮಂಜು ಪೈಲ್ವಾನ, ನವೀನ, ಪಂಜು, ಶಾಮನೂರು ರಾಜು, ಗುಡ್ಡೇಶ್, ಕಿಶೋರ ,ಹರೀಶ, ನಿಂಗರಾಜ, ಹೆಬ್ಬಾಳ್ ಮಹೇಂದ್ರ, ಸಚಿನ್, ರಾಕೇಶ, ಕಾಡಜ್ಜಿ ಬಸವರಾಜ, ಕೆ.ರಾಜೇಶ, ಅಂಜನಪ್ಪ, ಬಾತಿ ರವಿಕುಮಾರ, ರೇವಣಸಿದ್ದಪ್ಪ ಇತರರು ಇದ್ದರು.