ಆಶ್ರಯ ನಿವೇಶನ ಪಡೆಯಲು ಅರ್ಜಿ ಸಲ್ಲಿಸಿ: ಕೋನರಡ್ಡಿ

| Published : Jun 25 2025, 01:18 AM IST

ಸಾರಾಂಶ

ವಸತಿ ರಹಿತರಿಗೆ ಸರ್ಕಾರ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿವೇಶನ ನೀಡಲು ಅಣ್ಣಿಗೇರಿ ರಸ್ತೆಯಲ್ಲಿ ಈಗಾಗಲೇ 63 ಎಕರೆ ಭೂಮಿಯನ್ನು ಖರೀದಿಸಲಾಗಿದ್ದು, 2400ಕ್ಕೂ ಹೆಚ್ಚು ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಆಶ್ರಯ ನಿವೇಶನಗಳಿಗಾಗಿ ಈ ಹಿಂದೆ ಯಾರೇ ಅರ್ಜಿ ಸಲ್ಲಿಸಿದ್ದರೂ ಅವುಗಳು ಅನುರ್ಜಿತವಾಗಿವೆ. ಸರ್ಕಾರದ ಹೊಸ ನಿಯಮದಂತೆ ಅರ್ಹರು ಹೊಸದಾಗಿ ಅರ್ಜಿ ಸಲ್ಲಿಸಬೇಕು.

ನವಲಗುಂದ: ವಸತಿ ರಹಿತರು ಕರ್ನಾಟಕ ಒನ್ ಮೂಲಕ ಜು. 15ರ ಒಳಗಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.

ಸ್ಥಳೀಯ ಪುರಸಭೆ ಸಭಾಭವನದಲ್ಲಿ ಜರುಗಿದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಟ್ಟಣದಲ್ಲಿನ ವಸತಿ ರಹಿತರಿಗೆ ಸರ್ಕಾರ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿವೇಶನ ನೀಡಲು ಅಣ್ಣಿಗೇರಿ ರಸ್ತೆಯಲ್ಲಿ ಈಗಾಗಲೇ 63 ಎಕರೆ ಭೂಮಿಯನ್ನು ಖರೀದಿಸಲಾಗಿದ್ದು, 2400ಕ್ಕೂ ಹೆಚ್ಚು ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಆಶ್ರಯ ನಿವೇಶನಗಳಿಗಾಗಿ ಈ ಹಿಂದೆ ಯಾರೇ ಅರ್ಜಿ ಸಲ್ಲಿಸಿದ್ದರೂ ಅವುಗಳು ಅನುರ್ಜಿತವಾಗಿವೆ. ಸರ್ಕಾರದ ಹೊಸ ನಿಯಮದಂತೆ ಅರ್ಹರು ಹೊಸದಾಗಿ ಅರ್ಜಿ ಸಲ್ಲಿಸಬೇಕು. ಈಗಾಗಲೇ ಆಶ್ರಯ ಯೋಜನೆಯಡಿ ಹಕ್ಕು ಪತ್ರ ಪಡೆದವರು ಮನೆ ಕಟ್ಟಲು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

ಪಟ್ಟಣದಲ್ಲಿ ಒಳಚರಂಡಿ ಯೋಜನೆಗಾಗಿ ₹25 ಕೋಟಿ ಮಂಜೂರಾಗಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ಸ್ಥಳೀಯ ಪುರಸಭೆ ಕಟ್ಟಡ ಕಿರಿದಾಗಿದ್ದು, ನೂತನವಾಗಿ ಪುರಭವನ ನಿರ್ಮಾಣಕ್ಕಾಗಿ ಅಣ್ಣಿಗೇರಿ ಹಾಗೂ ನವಲಗುಂದ ಪಟ್ಟಣಕ್ಕೆ ₹7.5 ಕೋಟಿ ಮಂಜೂರಾಗಿದೆ ಎಂದರು.

ಪಟ್ಟಣದಲ್ಲಿ 24×7 ಕಾಮಗಾರಿ ಮುಗಿಯುವ ಹಂತದಲ್ಲಿರುವುದರಿಂದ ರಸ್ತೆಗಳು ಹದಗೆಟ್ಟಿದ್ದು ಒಳಚರಂಡಿ ಯೋಜನೆ ಪೂರ್ಣಗೊಂಡ ನಂತರ ಎಲ್ಲ ರಸ್ತೆಗಳನ್ನು ದುರಸ್ತಿ ಮಾಡಲಾಗುವುದು ಎಂದರು.

ತಹಸೀಲ್ದಾರ್ ಸುಧೀರ ಸಾಹುಕಾರ, ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಉಪಾಧ್ಯಕ್ಷೆ ಫರೀದಾಬೇಗಂ ಬಬರ್ಚಿ, ಮುಖ್ಯಾಧಿಕಾರಿ ಶರಣಪ್ಪ ಪೂಜಾರ, ಸದಸ್ಯರಾದ ಜೀವನ ಪವಾರ, ಶರಣಪ್ಪ ಹಕ್ಕರಕಿ, ಮೋದಿನಸಾಬ ಶಿರೂರು, ಮಹಾಂತೇಶ ಕಲಾಲ, ಪದ್ಮಾವತಿ ಪೂಜಾರ, ಮಂಜು ಜಾಧವ್, ಮಹಾಂತೇಶ ಭೋವಿ, ಬಾಬಾಜಾನ ಮಕಾನದಾರ, ಹನಮಂತಪ್ಪ ತಳವಾರ, ಆಶ್ರಯ ಸಮಿತಿ ಸದಸ್ಯರಾದ ಲಕ್ಷ್ಮಣ ಹಳ್ಳದ, ಮದಸಾಬ ಉಗರಗೋಳ, ಶೈಲಾ ನರಗುಂದ ಸೇರಿದಂತೆ ಹಲವರಿದ್ದರು.