ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ ಮೇಲ್ವಿಚಾರಣಾ ಸಮಿತಿ ನೇಮಕ

| Published : Aug 20 2024, 12:48 AM IST

ಸಾರಾಂಶ

ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಕೃಷ್ಣ ಅಧ್ಯಕ್ಷರಾಗಿದ್ದು, ಉಪಾಧ್ಯಕ್ಷರಾಗಿ ಜಿಲ್ಲಾ ನ್ಯಾಯಾಧೀಶರು, ಸದಸ್ಯರಾಗಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠರು ಸೇರಿ 8 ಜನ ಸಮಿತಿಯಲ್ಲಿ ಇರಲಿದ್ದಾರೆ.

ಕಾರವಾರ: ಗೋಕರ್ಣ ಮಹಾಬಲೇಶ್ವರ ದೇವಾಲಯದ ಎಲ್ಲ ವ್ಯವಹಾರ ನಿರ್ವಹಿಸಲು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಕೃಷ್ಣ ನೇತೃತ್ವದಲ್ಲಿ 8 ಸದಸ್ಯರ ಮೇಲ್ವಿಚಾರಣಾ ಸಮಿತಿ ನೇಮಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಕೃಷ್ಣ ಅಧ್ಯಕ್ಷರಾಗಿದ್ದು, ಉಪಾಧ್ಯಕ್ಷರಾಗಿ ಜಿಲ್ಲಾ ನ್ಯಾಯಾಧೀಶರು, ಸದಸ್ಯರಾಗಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠರು, ವಿ. ಗಣಪತಿ ಶಿವರಾಮ ಭಟ್ ಹಿರೇ, ಕೋಟಿತೀರ್ಥ, ವಿ. ಸುಬ್ರಹ್ಮಣ್ಯ ಚಂದ್ರಶೇಖರ ಅಡಿ ನಾಗಬೀದಿ, ಎರಡು ಜನ ವಿದ್ವಾಂಸರುಗಳಾದ ವಿ. ಪರಮೇಶ್ವರ ಸುಬ್ರಹ್ಮಣ್ಯ ಪ್ರಸಾದ ರಮಣಿ, ವಿ. ಮಹೇಶ ಗಣೇಶ ಹಿರೇಗಂಗೆ ಹಾಗೂ ಕಾರ್ಯದರ್ಶಿಯಾಗಿ ಕುಮಟಾ ಉಪವಿಭಾಗಾಧಿಕಾರಿ ಅವರನ್ನು ನೇಮಕ ಮಾಡಲಾಗಿದೆ.ಪಿಎಂ ಸ್ವ-ನಿಧಿ ಯೋಜನೆ: ಕಾರವಾರ ನಗರಸಭೆಗೆ ರಾಜ್ಯ ಮಟ್ಟದ ಪ್ರಶಸ್ತಿಯ ಗರಿ

ಕಾರವಾರ: ಪಿಎಂ. ಸ್ವ-ನಿಧಿ ಯೋಜನೆಯಡಿ ಉತ್ತಮ ಪ್ರಗತಿ ಸಾಧಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಸಭೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಕಾರವಾರ ನಗರಸಭೆಯು ಬೆಸ್ಟ್ ಪರ್ಪಾರ್ಮಿಂಗ್ ಯುಎಲ್ ಬಿ ಇನ್ ಲೋನ್ ಫರ್ಫಾರಮೆನ್ಸ್ ಅಟ್ ಸ್ಟೇಟ್ ಲೆವಲ್ ಪ್ರಶಸ್ತಿಗೆ ಆಯ್ಕೆಯಾಗಿದೆ.ಕೇಂದ್ರ ಸರ್ಕಾರದ ವತಿಯಿಂದ ಪಿಎಂ ಸ್ವ-ನಿಧಿ ಯೋಜನೆಯಡಿ ಉತ್ತಮ ಪ್ರಗತಿ ಸಾಧಿಸಿದ ರಾಜ್ಯಗಳಿಗೆ ನವದೆಹಲಿಯಲ್ಲಿ ಸಮಾರಂಭ ಆಯೋಜಿಸಿ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.

ಕರ್ನಾಟಕ ರಾಜ್ಯದಲ್ಲಿ ಪಿಎಂ ಸ್ವ-ನಿಧಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ನಗರಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಆ. 22 ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಕಾರವಾರ ನಗರಸಭೆಯಲ್ಲಿ ಈ ಯೋಜನೆಯನ್ನು ಯಶಸ್ವಿಗೊಳಿಸಲು ನಗರಸಭೆಯ ಪೌರಾಯುಕ್ತ ಜಗದೀಶ, ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ರಜತ್ ಕುಮಾರ ಹಬ್ಬು, ಕೌಶಲ್ಯಾಭಿವೃದ್ಧಿ ಇಲಾಖೆಯ ಮಲ್ಟಿಟಾಸ್ಕಿಂಗ್ ಆಫಿಸರ್ ಸುನೀಲ ವಸಂತ ನಾಯ್ಕ, ಸಮುದಾಯ ಸಂಘಟಕರಾದ ಪ್ರಭಾಕರ ನಾಯ್ಕ ಮತ್ತು ಮೇರಿ ಡಿಸೋಜಾ ಮತ್ತಿತರರು ಇದ್ದರು.