ಬ್ಯಾಡಗಿ: ಜಾಗತಿಕ ತಾಪಮಾನ ಏರಿಕೆ ಮತ್ತು ಪರಿಸರ ಹಾನಿ ಹೆಚ್ಚುತ್ತಿರುವ ಹಿನ್ನೆಲೆ, ಪರಿಸರ ಸಂರಕ್ಷಣೆಯ ಮಹತ್ವವನ್ನು ಪ್ರತಿಯೊಬ್ಬರಿಗೂ ತಿಳಿಸುವ ಅಗತ್ಯವಿದೆ ಎಂದು ಪರಿಸರ ಸ್ನೇಹಿ ಬಳಗ ಮೋಹನಕುಮಾರ ಹುಲ್ಲತ್ತಿ ಅಭಿಪ್ರಾಯಪಟ್ಟರು.
ಪರಿಸರ ಸ್ನೇಹಿ ಬಳಗ ಬ್ಯಾಡಗಿ ತಂಡದ ವತಿಯಿಂದ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಬೆಟ್ಟದ ಮಲ್ಲೇಶ್ವರ ಆವರಣದಲ್ಲಿ ಗಿಡ ನೆಡುವ ಮೂಲಕ ಏಪ್ರಿಲ್ ಕೂಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಜಾಗತಿಕ ತಾಪಮಾನ ಜೀವ ಸಂಕುಲಗಳಿಗೆ ಕಂಟಕ ತರುತ್ತಿದೆ, ತಾಪಮಾನ ಹೆಚ್ಚಳದಿಂದ ಈಗಾಗಲೇ ನದಿಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ, ಇದು ಮನುಷ್ಯ ಸಂಕುಲ ಮೇಲೆ ಸಾಕಷು ಪರಿಣಾಮ ಬೀರುತ್ತಿದ್ದು ನೀರಿಲ್ಲದೇ ಜೀವ ಸಂಕುಲದ ವಿನಾಶ ಹತ್ತಿರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪರಿಸರ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಬ್ಯಾಡಗಿಯಲ್ಲಿ “ಏಪ್ರಿಲ್ ಕೂಲ್” ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿ, ಗಿಡಮರಗಳ ಸಂರಕ್ಷಣೆ, ನೀರಿನ ಅಭಾವ ಮತ್ತು ಪ್ರಾಣಿ ಪಕ್ಷಿಗಳ ಸಂರಕ್ಷಣೆಯ ಅಗತ್ಯತೆ ಕುರಿತು ಜಾಗೃತಿ ಮೂಡಿಸಲಾಯಿತು. ಪರಿಸರ ಹಾನಿ ಮುಂದುವರೆದರೆ ಭವಿಷ್ಯದಲ್ಲಿ ತೀವ್ರ ಬಿಸಿಲು ಹಾಗೂ ವಿವಿಧ ರೋಗಗಳು ಮಾನವಕುಲಕ್ಕೆ ಭಾರೀ ಸವಾಲಾಗಲಿದೆ ಎಂಬ ಅರಿವು ಮೂಡಿಸಲಾಯಿತು.ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಕುದುರಿಹಾಳಮಠ, ನಿಂಗರಾಜ ಹರ್ಲಾಪುರ, ಆರ್.ಎಂ. ಪಾಟೀಲ, ಕೆ.ಬಿ. ದೊಡ್ಡಮನಿ, ಎಸ್.ಜಿ. ಕೋಟಿ, ರೇಣುಕಾ ಸೇರಿದಂತೆ ಸದಸ್ಯರು ಹಾಗೂ ದೀಕ್ಷಾ, ತೇಜಸ್, ಭರತ, ತೇಜರಾಜ, ಶ್ರೀನಿವಾಸ, ಜ್ಯೋತಿ, ಕ್ರತಿಕಾ, ಸಾನಿಯಾ, ಆಪಿಯಾ, ಪವಿತ್ರಾ, ಪ್ರಾರ್ಥನಾ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.