ಸಾರಾಂಶ
ಘಟನೆ ಕುರಿತು ದೂರು ದಾಖಲಿಸಿಕೊಂಡ ಹೊನ್ನಾವರ ಪೊಲಿಸರು ತನಿಖೆ ಮುಂದುವರಿಸಿದ್ದಾರೆ.
ಹೊನ್ನಾವರ: ಸಾರಿಗೆ ಬಸ್ ನಿಲ್ಲಿಸುವ ವಿಚಾರದಲ್ಲಿ ನಿರ್ವಾಹಕ ಹಾಗೂ ಯುವತಿ ನಡುವೆ ಉಂಟಾದ ವಾದ- ಪ್ರತಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಈ ಕುರಿತು ದೂರು- ಪ್ರತಿದೂರು ದಾಖಲಾದ ಘಟನೆ ಬುಧವಾರ ನಡೆದಿದೆ.
ಹಾವೇರಿ ಜಿಲ್ಲೆಯ ಹಿರೇಕೆರೂರು ಡಿಪೋಗೆ ಸೇರಿದ ಹಿರೇಕೆರೂರು- ಭಟ್ಕಳ ಸಾರಿಗೆ ಸಂಸ್ಥೆಯ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬರು ಸಿದ್ದಾಪುರದಿಂದ ಪುತ್ತೂರಿಗೆ ಪ್ರಯಾಣಿಸಲು ಹೊನ್ನಾವರಕ್ಕೆ ಟಿಕೆಟ್ ಪಡೆದಿದ್ದರು. ಬಸ್ನಲ್ಲಿ ಕುಳಿತುಕೊಳ್ಳಲು ಸೀಟ್ ಖಾಲಿ ಇರದ ಕಾರಣ ಮಾವಿನಗುಂಡಿ ಸಮೀಪ ಬಸ್ ಬರುತ್ತಿದ್ದಾಗ ಹಿಂಬದಿ ಬರುತ್ತಿದ್ದ ಧರ್ಮಸ್ಥಳ ಬಸ್ ಗಮನಿಸಿ ನಿರ್ವಾಹಕರ ಬಳಿ ಬಸ್ನಿಂದ ಇಳಿಯುತ್ತೇನೆ ಎಂದು ಯುವತಿ ಹೇಳಿದ್ದಾಳೆ. ಇದಕ್ಕೆ ಪ್ರತಿಕ್ರಿಯಿಸಿದ ನಿರ್ವಾಹಕ ಹೊನ್ನಾವರ ಟಿಕೆಟ್ ಪಡೆದಿದ್ದೀರಿ. ಇಲ್ಲಿ ಇಳಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.ನನ್ನ ಟಿಕೆಟ್ ಹಾಗೂ ಆಧಾರ ಕಾರ್ಡ್ ಪಡೆದಿದ್ದಾರೆ. ಈ ವೇಳೆ ನನಗೆ ನಿಂದಿಸಿದ್ದಾರೆ. ಬಳಿಕ ಮುಂದಿನ ನಿರ್ಜನ ಪ್ರದೇಶದ ನೆಟವರ್ಕ್ ಇಲ್ಲದ ಸ್ಥಳದಲ್ಲಿ ಇಳಿಸಿ ಹೋಗಿದ್ದಾರೆ ಎಂದು ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಯುವತಿ ಬಸ್ನಿಂದ ಇಳಿಯುತ್ತೇನೆ ಎಂದು ಹೇಳಿದಾಗ, ಶಕ್ತಿ ಯೋಜನೆಯ ನಿಯಮದ ಪ್ರಕಾರ ಇಳಿಯಲು ಬರಲ್ಲ ಎಂದು ಹೇಳಿದರೂ ಕೇಳದೆ ಮುಂದಿನ ನಿಲುಗಡೆಯಲ್ಲಿ ಇಳಿದಿದ್ದಾರೆ. ನಂತರ ಯುವತಿ ತಂದೆಯೊಂದಿಗೆ ಕಾರಿನಲ್ಲಿ ಆಗಮಿಸಿ ಬಸ್ ಅಡ್ಡಗಟ್ಟಿ ನಿಂದಿಸಿ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ನಿರ್ವಾಹಕ ತಿಳಿಸಿದ್ದಾರೆ.ಘಟನೆ ಕುರಿತು ದೂರು ದಾಖಲಿಸಿಕೊಂಡ ಹೊನ್ನಾವರ ಪೊಲಿಸರು ತನಿಖೆ ಮುಂದುವರಿಸಿದ್ದಾರೆ.