ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಶ್ರೀ ಅರಿಹಂತ ಶುಗರ್ಸ್ ಇಂಡಸ್ಟ್ರೀಜ್ ಸಕ್ಕರೆ ಕಾರ್ಖಾನೆಯು ಪ್ರಸಕ್ತ ವರ್ಷದಲ್ಲಿ 4 ಲಕ್ಷ ಮೆ.ಟನ್ ಕಬ್ಬು ನುರಿಸುವ ಗುರಿ ಹೊಂದಿದೆ ಎಂದು ಕಾರ್ಖಾನೆಯ ಸಂಸ್ಥಾಪಕ ಉತ್ತಮ ಪಾಟೀಲ ಹೇಳಿದರು.ತಾಲೂಕಿನ ಜೈನಾಪೂರ ಶ್ರೀ ಅರಿಹಂತ ಶುಗರ್ಸ್ ಇಂಡಸ್ಟ್ರೀಜ್ ಲಿ.ನ 7ನೇ ಹಂಗಾಮಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿ, ರೈತರು ಕಾರ್ಖಾನೆಗೆ ಹೆಚ್ಚೆಚ್ಚು ಕಬ್ಬು ಕಳುಹಿಸಿ ಸಹಕರಿಸಬೇಕೆಂದು ಮನವಿ ಮಾಡಿದರು.
ರೈತರಿಗೆ ಹೆಚ್ಚಿನ ದರ ನೀಡುವ ಹೆಗ್ಗಳಿಗೆ ಕಾರ್ಖಾನೆ ಪಾತ್ರವಾಗಿದೆ. ಸಕ್ಕರೆ ಉತ್ಪಾದನೆ ಹೊರತುಪಡಿಸಿ ಪರ್ಯಾಯ ಉತ್ಪಾದನೆ ಇಲ್ಲದೆ ಕೇವಲ ಸಕ್ಕರೆ ಉತ್ಪಾದಿಸಿ ರೈತರಿಗೆ ಹೆಚ್ಚು ದರ ನೀಡಿದೆ. ಪ್ರಸಕ್ತ ವರ್ಷದಲ್ಲಿಯೂ ಸಹ ಕಾರ್ಖಾನೆಗೆ ಕಬ್ಬು ಕಳುಹಿಸಿದ ರೈತರಿಗೆ ಎಫ್ಆರ್ಪಿ ದರ ನೀಡುವುದಾಗಿ ತಿಳಿಸಿದರು.ಕಾರ್ಖಾನೆ ಆರಂಭ ಮಾಡಲು ರಾಜ್ಯ ಸರ್ಕಾರ ನ.15 ತನಕ ಗಡವು ನೀಡಿದೆ. ಇಂದು ಶುಭ ಮುಹೂರ್ತ ಇರುವ ಕಾರಣದಿಂದ ಪ್ರಸಕ್ತ ವರ್ಷದ ಹಂಗಾಮಿಗೆ ಚಾಲನೆ ನೀಡಲಾಗಿದೆ. ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ ಬಳಿಕ ಕಾರ್ಖಾನೆ ಆರಂಭ ಮಾಡಲಾಗುವುದು. ಮುಂಬರುವ ದಿನಗಳಲ್ಲಿ ಡಿಸ್ಟಲರಿ ಮತ್ತು ಇಥೆನಾಲ್ ಘಟಕ ಆರಂಭಿಸುವ ಚಿಂತನೆ ಇದೆ. ಅರಿಹಂತ ಸಕ್ಕರೆ ಕಾರ್ಖಾನೆಯು ಉತ್ತರ ಕರ್ನಾಟಕ ಮತ್ತು ಪಶ್ಚಿಮ ಮಹಾರಾಷ್ಟ್ರದಲ್ಲಿ ಕಡಿಮೆ ಅವದಿಯಲ್ಲಿ ಹೆಚ್ಚು ಸಾಧನೆ ಮಾಡಿದೆ ಎಂದವರು ಮಾಹಿತಿ ನೀಡಿದರು.
ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಪ್ರಯತ್ನ:ಚಿಕ್ಕೋಡಿ ತಾಲೂಕಿನ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ ಮಂಜೂರಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಜಿಲ್ಲೆಯ ಹಿರಿಯರನ್ನು ವಿಶ್ವಾಸಕ್ಕೆ ಪಡೆದು ಎರಡೂ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ಪ್ರಮಾಣಿಕವಾಗಿ ಪ್ರಯತ್ನಿಸಿ ನೀರಾವರಿಯಿಂದ ವಂಚಿತ ಹಳ್ಳಿಯ ರೈತರಿಗೆ ಅನುಕೂಲ ಕಲ್ಪಿಸಿದರೆ ರೈತರು ಕಬ್ಬು ಬೆಳೆಯುವುದರಿಂದ ಕಾರ್ಖಾನೆಗೆ ಹೆಚ್ಚು ಕಬ್ಬು ಬರಲಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಖಾನೆಯ ಮುಖಂಡ ಅಭಿನಂದನ ಪಾಟೀಲ, ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಮಾಜಿ ಶಾಸಕ ಸುಭಾಷ ಜೋಶಿ, ದತ್ತು ಸಕ್ಕರೆ ಕಾರ್ಖಾನೆ ನಿರ್ದೇಶಕ ಇಂದ್ರಜೀತ ಪಾಟೀಲ, ಪುರಸಭೆ ಸದಸ್ಯ ಶ್ಯಾಮ ರೇವಡೆ, ಮಹಾವೀರ ದೊಂಡಗೆ, ಅರುಣ ದೇಸಾಯಿ, ಮೀನಾಕ್ಷಿ ಪಾಟೀಲ, ದೀಪಾಲಿ ಪಾಟೀಲ, ಯುವರಾಜ ಪಾಟೀಲ, ಸಿಇಒ ಆರ್.ಕೆ. ಶೆಟ್ಟಿ ಉಪಸ್ಥಿತರಿದ್ದರು.