ಸಿದ್ಧಲಿಂಗಪುರದ ಅರಿಶಿನಕುಪ್ಪೆ ಶ್ರೀ ಮಂಜುನಾಥಸ್ವಾಮಿ ಕ್ಷೇತ್ರದಲ್ಲಿ ಭಾನುವಾರ ಶ್ರದ್ಧಾ ಭಕ್ತಿಯಿಂದ ಮಹಾಶಿವರಾತ್ರಿ ಆಚರಿಸಲಾಯಿತು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಸಿದ್ಧಲಿಂಗಪುರದ ಅರಿಶಿನಕುಪ್ಪೆ ಶ್ರೀ ಮಂಜುನಾಥಸ್ವಾಮಿ ಕ್ಷೇತ್ರದಲ್ಲಿ ಭಾನುವಾರ ಶ್ರದ್ಧಾ ಭಕ್ತಿಯಿಂದ ಮಹಾಶಿವರಾತ್ರಿ ಆಚರಿಸಲಾಯಿತು.ಬೆಳಿಗ್ಗೆ 5 ಗಂಟೆಯಿಂದ ಕ್ಷೇತ್ರದ ಗುರುಗಳಾದ ರಾಜೇಶ್ನಾಥ್ ಗುರೂಜಿ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕ ಜಗದೀಶ್ ಉಡುಪ ಪೌರೋಹಿತ್ಯದಲ್ಲಿ ಗಣಪತಿ ಹೋಮದೊಂದಿಗೆ ಶಿವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಸಂಜೆ ಶ್ರೀಮಂಜುನಾಥಸ್ವಾಮಿಗೆ ಹಾಲಿನ ಅಭಿಷೇಕದೊಂದಿಗೆ ಪ್ರಥಮಯಾಮದ ಪೂಜೆ ನಡೆಯಿತು. ಪ್ರತಿ ಮೂರು ಗಂಟೆಗೆ ಅಭಿಷೇಕಾದಿಗಳು ನಡೆಯಿತು. 1108 ಎಳನೀರು ಅಭಿಷೇಕ, ಕಬ್ಬಿನ ಹಾಲಿನ ಅಭಿಷೇಕ, ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಜೇನುತುಪ್ಪದ ಅಭಿಷೇಕ, ಜಲಾಭಿಷೇಕಗಳು ನಡೆದವು. ಪ್ರತಿಯಾಮದ ಪೂಜೆಯಲ್ಲೂ ಏಕದಶಾವರ ರುದ್ರಾಭಿಷೇಕ ನಡೆಯಿತು. ರಾತ್ರಿ ಕುಶಾಲನಗರದ ಮಧುಸೂದನ್ ಮತ್ತು ತಂಡದವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಶನಿವಾರಸಂತೆಯ ಪ್ರದೀಪ್ ದೇವಾಲಯಕ್ಕೆ ಎರಡು ಗೋವುಗಳನ್ನು ದಾನವಾಗಿ ನೀಡಿದರು. ಕಾರ್ಯಕ್ರಮದ ಸಂದರ್ಭ ದೇವಾಲಯ ಜೀರ್ಣೋದ್ಧಾ ರ ಸಮಿತಿ ಅಧ್ಯಕ್ಷ ನಾಪಂಡ ಮುತ್ತಪ್ಪ, ಗೌರವ ಅಧ್ಯಕ್ಷ ನಾಪಂಡ ಮುದ್ದಪ್ಪ, ಕಾರ್ಯದರ್ಶಿ ಪ್ರಕಾಶ್ ರಮೇಶ್, ನವಚಂಡಿಕಾ ಸಮಿತಿ ಅಧ್ಯಕ್ಷ ಹೊಸೊಕ್ಲು ಸತೀಶ್, ಕಾರ್ಯದರ್ಶಿ ಹರೀಶ್ ಇದ್ದರು. ಪೂಜಾ ಕಾರ್ಯದಲ್ಲಿ ಅರ್ಚಕರುಗಳಾದ ಹರಿಭಟ್, ವಾದಿರಾಜ್ ಭಟ್, ರಮೇಶ್ ಭಟ್, ವೆಂಕಟೇಶ್ ಹೊಳ್ಳ, ಸೋಮನಾಥ ಹೊಳ್ಳ, ಜಯರಾಮ ಹೊಳ್ಳ, ಬಜೆಗುಂಡಿ ಮಣಿ ಸಹಕರಿಸಿದರು.ಇಂದಿನ ಕಾರ್ಯಕ್ರಮ: 16ರಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ದೇವಾಲಯದಲ್ಲಿ ಬೆಳಿಗ್ಗೆ ರುದ್ರಹೋಮ, 9.30ಕ್ಕೆ ಕಲಶಾಭಿಷೇಕ ನಂತರ 10ಕ್ಕೆ ಕ್ಷೇತ್ರದ ಪ್ರಧಾನಗುರುಗಳಾದ ಶ್ರೀ ರಾಜೇಶ್ನಾಥ್ಜಿಯವರ ನೇತೃತ್ವದಲ್ಲಿ ಭಕ್ತಾದಿಗಳಿಗೆ ತೀರ್ಥಸ್ನಾನ ನಡೆಯಲಿದೆ. ನಂತರ ಶ್ರೀ ಮಂಜುನಾಥಸ್ವಾಮಿ ಮತ್ತು ಪರಿವಾರ ದೇವರುಗಳಿಗೆ ಮಹಾ ನೈವೇದ್ಯ ಮತ್ತು ಮಹಾಪೂಜೆಯ ನಂತರ ಭಕ್ತಾದಿಗಳಿಗೆ ಅನ್ನಪ್ರಸಾದ ವಿತರಿಸಲಾಗುವುದು.