ಸಾರಾಂಶ
ಬಸವನಬಾಗೇವಾಡಿ ತಾಲೂಕಿನ ಕಾನ್ನಾಳ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಗುರುವಾರ ಗ್ರೇಡ್-೨ ತಹಸೀಲ್ದಾರ್ ಜಿ.ಎಸ್.ನಾಯಕ ಅವರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ತಾಲೂಕಿನ ಕಾನ್ನಾಳ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಗುರುವಾರ ಗ್ರೇಡ್-೨ ತಹಸೀಲ್ದಾರ್ ಜಿ.ಎಸ್.ನಾಯಕ ಅವರಿಗೆ ಮನವಿ ಸಲ್ಲಿಸಿದರು.ಕಣಕಾಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕಾನ್ನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಜನರು ತೋಟ-ತೋಟ ಅಲೆದಾಡಿ ಕುಡಿಯಲು ನೀರು ಪರಿಸ್ಥಿತಿ ಇದೆ. ಗ್ರಾಮದ 1 ಕಿಲೋ ಮೀಟರ್ ಅಂತರದಲ್ಲಿ ಮುಳವಾಡ ಏತನೀರಾವರಿಗೆ ಸಂಬಂಧಿಸಿದ ಕಾಲುವೆ ಇದೆ. ಈ ಕಾಲುವೆಯಿಂದ ಗ್ರಾಮದ ಕೆರೆ ಮತ್ತು ಬಾಂದಾರಕ್ಕೆ ನೀರು ಹರಿಸಬೇಕು. ಬಾಂದಾರ ಹತ್ತಿರವಿರುವ ಗ್ರಾಮ ಪಂಚಾಯತಿಯ 2 ಕೊಳವೆ ಬಾವಿಗಳಿವೆ. ಕೆರೆ, ಬಾಂದಾರಕ್ಕೆ ನೀರು ಹರಿಸುವುದರಿಂದಾಗಿ ಜಾನುವಾರುಗಳಿಗೆ ನೀರು ಸಿಗುವ ಜೊತೆಗೆ ಕೊಳವೆ ಬಾವಿಗೆ ಅಂತರ್ಜಲ ಮಟ್ಟ ಸಿಕ್ಕಂತಾಗುತ್ತದೆ. ಇದರಿಂದಾಗಿ ಗ್ರಾಮಕ್ಕೆ ಕುಡಿಯುವ ನೀರು ಸಿಗಬಹುದು. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಗ್ರಾಮದ ಕೆರೆ, ಬಾಂದಾರಕ್ಕೆ ನೀರು ಹರಿಸುವ ಕ್ರಮ ವಹಿಸಬೇಕೆಂದು ಆಗ್ರಹಿಸಲಾಗಿದೆ. ಈ ಕುರಿತು ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ಎಸ್.ಎಂ.ಸಜ್ಜನ, ಆರ್.ಎಂ.ಮೇಲಿನಮನಿ, ಎಂ.ಆರ್.ನಾಟೀಕಾರ, ವೈ.ಬಿ.ಬಸರಕೋಡ, ಶಿವಪ್ಪ ಹೂಗಾರ, ಶಂಕರಗೌಡ ತಂಗಡಗಿ, ಹುಚ್ಚೇಸಾಬ್ ಅತ್ತಾರ, ರಾಮನಗೌಡ ತಂಗಡಗಿ, ಬಸನಗೌಡ ಪಾಟೀಲ, ಪರಪ್ಪಶರಣ ಹೊಸೂರ, ವಿರೇಶ ಮಠಪತಿ, ಮುತ್ತು ನಾಟೀಕಾರ, ಮುದಕಪ್ಪ ಚಲವಾದಿ, ಸೋಮನಗೌಡ ಬಿರಾದಾರ ಇದ್ದರು.