ಸಾರಾಂಶ
ಹೊನ್ನಾವರ ತಾಲೂಕಿನ ಮಂಕಿ ಗುಳದಕೇರಿಯ ಭವಾನಿ ಕಾಂಪ್ಲೆಕ್ಸ್ನಲ್ಲಿರುವ ಶ್ರೀ ಕಾಮಾಕ್ಷಿ ಜ್ಯುವೆಲರ್ ಶಟರ್ ಮುರಿದು ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನಾಭರಣ ಕದ್ದೊಯ್ದ 7 ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೊನ್ನಾವರ: ತಾಲೂಕಿನ ಮಂಕಿ ಗುಳದಕೇರಿಯ ಭವಾನಿ ಕಾಂಪ್ಲೆಕ್ಸ್ನಲ್ಲಿರುವ ಶ್ರೀ ಕಾಮಾಕ್ಷಿ ಜ್ಯುವೆಲರ್ ಶಟರ್ ಮುರಿದು ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನಾಭರಣ ಕದ್ದೊಯ್ದ 7 ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪೊಲೀಸರು 7 ಆರೋಪಿತರನ್ನು ವಶಕ್ಕೆ ಪಡೆದು ವಿಚಾರಿಸಿದ್ದರು. ಈ ಆರೋಪಿತರು ಮಂಕಿಯ ಕಾಮಾಕ್ಷಿ ಜ್ಯುವೆಲರಿ ಶಾಪ್ ಕಳ್ಳತನ ಸೇರಿ ಮಂಕಿ ಪೊಲೀಸ್ ಠಾಣೆಯ 2 ಪ್ರಕರಣ, ಬೈಂದೂರು ಪೊಲೀಸ್ ಠಾಣೆಯ 1 ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆ ವೇಳೆ ಪತ್ತೆಯಾಗಿದೆ. ಆರೋಪಿತರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿತರಿಂದ 230 ಗ್ರಾಂ ತೂಕದ ಗಟ್ಟಿ ಬಂಗಾರ ಹಾಗೂ ಬಂಗಾರದ ಆಭರಣಗಳು, 5 ಕೆಜಿ ಬೆಳ್ಳಿಯ ಆಭರಣಗಳು, ಕೃತ್ಯಕ್ಕೆ ಬಳಸಿದ ಒಂದು ಸ್ಕೂಟರ್, ಆಯುಧಗಳನ್ನು / ವಸ್ತುಗಳನ್ನು ಜಪ್ತಿ ಪಡಿಸಿಕೊಂಡಿದ್ದಾರೆ. ಅವುಗಳ ಒಟ್ಟು ಮೌಲ್ಯ ₹13,30,050 ಎಂದು ಅಂದಾಜಿಸಲಾಗಿದೆ.ಘಟನೆ ಹಿನ್ನೆಲೆ: ಏ. 29ರಂದು ತಡರಾತ್ರಿ ಮಂಕಿ ಮಾವಿನಕಟ್ಟಾದ ಅಣ್ಣಪ್ಪ ಪ್ರಭಾಕರ ಶೇಟ್ ಎಂಬವರಿಗೆ ಸೇರಿದ ಚಿನ್ನದ ಅಂಗಡಿ ಕಳ್ಳತನವಾಗಿತ್ತು. 296 ಗ್ರಾಂ ತೂಕದ ಅಂದಾಜು ₹14.55 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 22.50 ಕೆಜಿ ತೂಕದ ₹11.10 ಲಕ್ಷ ಮೌಲ್ಯದ ಬೆಳ್ಳಿಯ ಆಭರಣ, ವಸ್ತುಗಳನ್ನು ಕದ್ದೊಯ್ದಿದ್ದರು. ಈ ಕುರಿತು ಅಣ್ಣಪ್ಪ ಪ್ರಭಾಕರ ಶೇಟ್ ಏ. 30ರಂದು ಮಂಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಟಿ. ಜಯಕುಮಾರ, ಭಟ್ಕಳ ಪೊಲೀಸ್ ಉಪಾಧೀಕ್ಷಕ ಮಹೇಶ ಕೆ. ಮಾರ್ಗದರ್ಶನದಲ್ಲಿ, ಸಿಪಿಐ ಆನಂದ ಒನಕುದ್ರೆ ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು. ಮಂಕಿ ಪೊಲೀಸ್ ಠಾಣೆಯ ಉಪ-ನಿರೀಕ್ಷಕರಾದ ವಿನೋದಕುಮಾರ ಎಸ್.ಕೆ. ಹಾಗೂ ಶ್ರೀಕಾಂತ ರಾಠೋಡ ಮತ್ತು ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿ ಕಿರಣಕುಮಾರ ರೆಡ್ಡಿ, ರುದ್ರಯ್ಯ ಕಾಡದೇವರ, ಸುಬ್ರಹ್ಮಣ್ಯ ನಾಯ್ಕ, ರಾಜು ಗೌಡ, ಅಣ್ಣಪ್ಪ ಕೋರಿ, ಸಚೇತ ಆಚಾರಿ, ಜಾನು ಪಟಗಾರೆ, ವಿವೇಕ ನಾಯ್ಕ, ಚರಣರಾಜ ನಾಯ್ಕ, ಗಣೇಶ ಲಮಾಣಿ ಹಾಗೂ ಭಟ್ಕಳ ನಗರ ಠಾಣೆಯ ಸಿಬ್ಬಂದಿ ಲೋಕೇಶ ಕತ್ತಿ, ದಿನೇಶ ನಾಯಕ, ಈರಣ್ಣ ಪೂಜಾರಿ, ನಿಂಗನಗೌಡ ಪಾಟೀಲ್ ಜೀಪ್ ಚಾಲಕ ಗಣಪತಿ ನಾಯ್ಕ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.