ಮನೆ ಕಳ್ಳತನ ಮಾಡಿದ್ದ ಆರೋಪಿಗಳ ಬಂಧನ

| Published : Nov 11 2024, 11:49 PM IST

ಸಾರಾಂಶ

ಮುಂಡಗೋಡ ಪೊಲೀಸ್ ನಿರೀಕ್ಷಕ ರಂಗನಾಥ ನೀಲಮ್ಮನವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ವಿಚಾರಣೆ ನಡೆಸುವ ಮೂಲಕ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮುಂಡಗೋಡ: ಪಟ್ಟಣದ ಭಾರತ್ ನಗರದಲ್ಲಿ ನಡೆದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮುಂಡಗೋಡ ಪೊಲೀಸರು ಚಿನ್ನಾಭರಣ, ಮೊಬೈಲ್ ಸೇರಿದಂತೆ ಸುಮಾರು ₹೧ ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ನಗರದ ಸುಭಾಸನಗರ ಬಡಾವಣೆಯ ಚೇತನ ತಂದೆ ನರೇಶ ಪಾರ್ಗ, ವಿನಾಯಕ ಕಲಿಯಪ್ಪ ಭೋವಿವಡ್ಡರ ಬಂಧಿತ ಆರೋಪಿಗಳಾಗಿದ್ದು, ಕಳ್ಳತನ ಮಾಡಲಾದ ೧೦ ಗ್ರಾಂ ಬಂಗಾರದ ಚೈನ್ ೨.೫ ಗ್ರಾಂ ಬಂಗಾರದ ಉಂಗುರ ಹಾಗೂ ೧ ಮೊಬೈಲ್ ಪೋನ್‌ಅನ್ನು ವಶಪಡಿಸಿಕೊಳ್ಳಲಾಗಿದೆ.ಅ. ೨೮ರಂದು ಪಟ್ಟಣದ ಭಾರತ ನಗರ ಬಡಾವಣೆಯ ಅರ್ಜುನಸಿಂಗ್ ನಂದುಸಿಂಗ್ ಠಾಕೂರ ಎಂಬವರ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಮನೆಯೆ ಕಿಟಕಿ ಮುರಿದು ಒಳ ನುಗ್ಗಿ ಕಳ್ಳತನವಾದ ಬಗ್ಗೆ ಪ್ರಕರಣ ದಾಖಲಾಗಿತ್ತು. ಮುಂಡಗೋಡ ಪೊಲೀಸ್ ನಿರೀಕ್ಷಕ ರಂಗನಾಥ ನೀಲಮ್ಮನವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ವಿಚಾರಣೆ ನಡೆಸುವ ಮೂಲಕ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಿಎಸ್‌ಐ ಹನಮಂತ ಕುಡಗುಂಟಿ ಸಿಬ್ಬಂದಿಗಳಾದ ಕೋಟೇಶ ನಾಗರವಳ್ಳಿ, ಅಣ್ಣಪ್ಪ ಬಡಿಗೇರ, ಮಹಾಂತೇಶ, ತಿರುಪತಿ ಚೌಡಣ್ಣನವರ ಮುಂತಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ಅನಧಿಕೃತ ವಿಹಾರಾರ್ಥಿ ಬೋಟ್‌ಗಳಿಗೆ ಅನುಮತಿ ನೀಡದಿರಿ

ಕಾರವಾರ: ಗೋಕರ್ಣದ ಭಾಗದಲ್ಲಿ ಅನಧಿಕೃತವಾಗಿ ವಿಹಾರಾರ್ಥಿ ಬೊಟ್‌ಗಳು ಕಾರ್ಯಾಚರಣೆ ನಡೆಸುತ್ತಿದ್ದು, ಅನುಮತಿ ಪಡೆದವರಿಗೆ ತೊಂದರೆಯಾಗುತ್ತಿದೆ. ಜತೆಗೆ ಅವಘಡಗಳು ನಡೆಯಲು ಕಾರಣವಾಗುತ್ತಿದೆ. ಹೀಗಾಗಿ ಅನಧಿಕೃತ ಬೋಟ್‌ಗಳಿಗೆ ಅನುಮತಿ ನೀಡಬಾರದು ಎಂದು ಗೋಕರ್ಣ ಓಂ ಬೀಚ್ ರೆಸಾರ್ಟ್ ಅಸೋಸಿಯೇಶನ್ ಅಧ್ಯಕ್ಷ ಚಿದಾನಂದ ಲಕ್ಕುಮನೆ ಆಗ್ರಹಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಹಾರಾರ್ಥಿ ಬೋಟ್ ಎಂದರೆ ಪ್ರವಾಸಿಗರನ್ನು ಸಮುದ್ರದಲ್ಲಿ ಸುತ್ತಾಡಿಸುವ ಬೋಟ್‌ಗಳಾಗಿದ್ದು, ೨೦೨೩ರ ನವೆಂಬರ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಟೆಂಡರ್‌ದಾರರ ಹಾಗೂ ಅನಧಿಕೃತವಾಗಿ ಪ್ರವಾಸಿಗರನ್ನು ಹೊತ್ತೊಯ್ಯುವ ಬೋಟುದಾರರ ಮಧ್ಯೆ ಏರ್ಪಡಿಸಿದ ಸಂಧಾನದಲ್ಲಿ ಟೆಂಡರುದಾರಲ್ಲದವರಲ್ಲಿ ೭ ಬೋಟ್‌ಗಳಿಗೆ ನದಿಯ ಹಿನ್ನೀರಿನ ಪ್ರದೇಶದಲ್ಲಿ ಮಾತ್ರ ವಿಹಾರಾರ್ಥಿಗಳನ್ನು ಒಯ್ಯಬಹುದೇ ಹೊರತು ಟೆಂಡರ್ ಪಡೆದವರ ವ್ಯಾಪ್ತಿಯಲ್ಲಿರುವ ಪ್ಯಾರಡೈಸ್, ಹಾಫ್‌ಮೂನ್, ಓಂ, ಕುಡ್ಲೆ ಹಾಗೂ ಗೋಕರ್ಣ ಕಡಲ ತೀರದಲ್ಲಿ ಪ್ರವಾಸಿಗರನ್ನು ಒಯ್ಯುವಂತಿಲ್ಲ.ಒಂದು ವೇಳೆ ಅನಧಿಕೃತ ಬೋಟುಗಳು ಟೆಂಡರ್‌ದಾರರ ವ್ಯಾಪ್ತಿಗೆ ಬಂದರೆ ಅಂತಹ ಬೋಟುಗಳನ್ನು ಸೀಜ್ ಮಾಡುವುದೆಂದು ನಿರ್ಧರಿಸಲಾಗಿತ್ತು. ಆದರೆ ಅನಧಿಕೃತ ಬೋಟಿಂಗ್ ನಿಂತಿಲ್ಲ ಎಂದು ಆರೋಪಿಸಿದರು.

ಅನಧಿಕೃತ ವಿಹಾರಾರ್ಥಿ ಬೋಟಿನ ಸಂಖ್ಯೆ ೩೦ರಷ್ಟು ಆಗಿದ್ದು, ಅನಧಿಕೃತ ಬೋಟುಗಳ ಅಧಿಕ ಸಂಖ್ಯೆಯಿಂದ ಸ್ಪರ್ಧೆ ಏರ್ಪಟ್ಟು ಹೆಚ್ಚಿನ ಆದಾಯ ಸಂಪಾದಿಸಲು ತಮ್ಮ ಕಾರ್ಯದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದಿಲ್ಲ. ೧೫ ಜನ ಪ್ರಯಾಣ ಮಾಡಬಹುದಾದ ಬೋಟುಗಳಲ್ಲಿ ೩೦- ೪೦ರಷ್ಟು ಪ್ರವಾಸಿಗರನ್ನು ಕರೆದುಕೊಂಡು ಅಪಾಯಕಾರಿ ಸ್ಥಿತಿಯಲ್ಲಿ ಬೋಟಿಂಗ್ ನಡೆಸುತ್ತಿದ್ದಾರೆ ಎಂದು ದೂರಿದರು.

ಚಂದ್ರಕಾಂತ ಹರಿಕಂತ್ರ, ಸಂತೋಷ ಹರಿಕಂತ್ರ, ನಾಗರಾಜ ಹರಿಕಂತ್ರ, ಉಸ್ಮಾನ್ ಅಬ್ದುಲ್ ರೆಹಮಾನ, ಚಂದ್ರಕಾಂತ ಅಂಬಿಗ, ದೇವಾನಂದ ನಾಯಕ ಮೊದಲಾದವರು ಇದ್ದರು.