ಉಡುಪಿ: ಶ್ರೀ ಕೃಷ್ಣ ಮಠಕ್ಕೆ ಪರ್ಯಾಯ ಪೀಠಾಧೀಶರಾದ ಶ್ರೀ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಸಂದರ್ಭದಲ್ಲಿ, ಭಾನುವಾರ ಉತ್ತರಾಧಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ತಮ್ಮ ಪಟ್ಟದ ದೇವರಾದ ಶ್ರೀ ಮೂಲ ರಾಮ ದೇವರ ಸಮೇತ ಆಗಮಿಸಿದರು. ಅವರನ್ನು ಸಂಸ್ಕೃತ ಕಾಲೇಜಿನಿಂದ ಭವ್ಯವಾದ ಮೆರವಣಿಗೆ ಮೂಲವಕ ಸ್ವಾಗತಿಸಲಾಯಿತು. ನಂತರ ಉತ್ತರಾಧಿ ಮಠಾಧೀಶರು ಕನಕನ ಕಿಂಡಿಯಲ್ಲಿ ಕೃಷ್ಣ ದೇವರ ದರ್ಶನ ಮಾಡಿದರು. ಅವರನ್ನು ಕೃಷ್ಣ ಮಠದ ಮುಂಭಾಗದಲ್ಲಿ ಪರ್ಯಾಯ ಶ್ರೀಗಳು ಸಂಪ್ರದಾಯದಂತೆ ಬರ ಮಾಡಿಕೊಂಡು ಕೃಷ್ಣ ದೇವರ ದರ್ಶನ ಮಾಡಿಸಿದರು. ನಂತರ ಸಂಜೆ ರಾಜಾಂಗಣದಲ್ಲಿ ಉತ್ತರಾಧಿ ಶ್ರೀಗಳು ‘ಪ್ರಹ್ಲಾದರಾಜಕೃತ ನರಸಿಂಹ ಸ್ತುತಿ’ ಎಂಬ ಬಗ್ಗೆ ವಿಶೇಷ ಪ್ರವಚನ ನೀಡಿದರು.

ಈ ಸಂದರ್ಭದಲ್ಲಿ ಶೀರೂರು ಮಠದ ದಿವಾನರಾದ ಉದಯಕುಮಾರ್ ಸರಳತ್ತಾಯ. ಪಾರುಪತ್ಯೆಗಾರರಾದ ಶ್ರೀಶ ಭಟ್ ಕಡೆಕಾರು ಹಾಗೂ ನೂರಾರು ಶೀರೂರು ಮಠದ ಶಿಷ್ಯವರ್ಗದವರು ಹಾಗೂ ಉತ್ತರಾಧಿ ಮಠದ ಶಿಷ್ಯವರ್ಗದವರು ಉಪಸ್ಥಿತರಿದ್ದರು.