ಕಲೆ, ಸಾಹಿತ್ಯದಿಂದ ಮನಸ್ಸಿಗೆ ಮುದ: ಶಾಸಕಿ ಲತಾ

| Published : Sep 17 2025, 01:07 AM IST

ಸಾರಾಂಶ

ಕಲೆ, ಸಾಹಿತ್ಯ ಕ್ಷೇತ್ರಗಳು ಮನಸ್ಸಿಗೆ ಮುದ ನೀಡುವುದರ ಜತೆಗೆ ಶಾಂತಿ, ನೆಮ್ಮದಿ ನೀಡುತ್ತವೆ.

ವಿವಿಧ ಸಾಂಸ್ಕೃತಿಕ ಸಂಘಗಳ ಉದ್ಘಾಟನಾ ಸಮಾರಂಭ

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ಕಲೆ, ಸಾಹಿತ್ಯ ಕ್ಷೇತ್ರಗಳು ಮನಸ್ಸಿಗೆ ಮುದ ನೀಡುವುದರ ಜತೆಗೆ ಶಾಂತಿ, ನೆಮ್ಮದಿ ನೀಡುತ್ತವೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದ ಅಂಬ್ಲಿ ದೊಡ್ಡ ಬರಮಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಿವಿಧ ಸಾಂಸ್ಕೃತಿಕ ಸಂಘಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ವಿದ್ಯೆ ಜತೆಗೆ ಸಾಹಿತ್ಯ, ಕಲೆ, ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದ ಅವರು, ಕಲೆ, ಸಾಹಿತ್ಯ ಸಂಗೀತ ಕ್ಷೇತ್ರ ಉಳಿಸಿ ಬೆಳೆಸುವ ಜವಾಬ್ದಾರಿ ಯುವ ಜನತೆಯ ಮೇಲಿದೆ ಎಂದರು.

ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಿಶ್ರಾಂತ ಕುಲ ಸಚಿವ ಡಾ. ಶಾಂತಿನಾಥ ದಿಬ್ಬದ ವಿಶೇಷ ಉಪನ್ಯಾಸ ನೀಡಿ, ಸಾಂಸ್ಕೃತಿಕ ಸಂಘ ಎಂದರೆ ಕೇವಲ ಹಾಡುವುದು, ಕುಣಿಯುವುದು ಅಲ್ಲ, ಪ್ರತಿ ನಿತ್ಯದ ಜೀವನ ವಿಧಾನ ನಮ್ಮ ಸಂಸ್ಕೃತಿ ಪರಿಚಯಿಸುವುದು ಎಂದು ತಿಳಿಸಿದರು.

ಶಿಷ್ಠ ಸಾಹಿತ್ಯಕ್ಕೆ ಮೂಲವೇ ಜನಪದ ಸಾಹಿತ್ಯ, ವಿದ್ಯಾರ್ಥಿಗಳು ಸಾಹಿತ್ಯದಲ್ಲಿ ಆಸಕ್ತಿ, ಬರವಣಿಗೆ ರೂಢಿಸಿಕೊಳ್ಳಬೇಕು, ಆತುರದ ನಿರ್ಧಾರ ತೆಗೆದುಕೊಳ್ಳಬಾರದು. ಇಂಗ್ಲಿಷ್‌ ಭಾಷೆಗೆ ಮರುಳಾಗಿ ಕನ್ನಡತನ ಕಳೆದುಕೊಳ್ಳಬಾರದು ಎಂದು ಹೇಳಿದರು.

ಎಡಿಬಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕೆ. ಕೊಟ್ರೇಶ್ವರ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಕಾಲೇಜು ಆಡ‍ಳಿತ ಮಂಡಳಿ ಸದಸ್ಯ ಆರುಂಡಿ ನಾಗರಾಜ, ಎಸ್.ಎಂ. ವೀರಭದ್ರಯ್ಯ, ಜಗದೀಶಗೌಡ್ರು, ಟಿ.ಎಚ್.ಎಂ. ಮಂಜುನಾಥ, ಡಾ. ಶಿವಾನಂದ, ಡಾ. ಜಿನದತ್ತ, ಪುರಸಭಾ ಸದಸ್ಯ ಲಾಟಿದಾದಾಪೀರ, ಎಂ.ಪಿ.ಎಂ. ಶಾಂತವೀರಯ್ಯ, ದಂಡಿನ ಹರೀಶ, ಎಡಿಬಿ ಕಾಲೇಜು ಪ್ರಾಚಾರ್ಯ ಡಾ. ಎಸ್.ಎಂ. ಸಿದ್ದಲಿಂಗಮೂರ್ತಿ, ಎಸ್.ಎಸ್.ಎಚ್. ಜೈನ್‌ ಪಿಯು ಕಾಲೇಜು ಪ್ರಾಚಾರ್ಯ ಮಹೇಶ ಉಪ್ಪಿನ, ಉಪನ್ಯಾಸಕ ರಾಜಶೇಖರ, ಸಿ.ನವಾಜ್‌ ಭಾಷ, ಡಾ. ಸುವರ್ಣ ಆರುಂಡಿ ನಾಗರಾಜ ಉಪಸ್ಥಿತರಿದ್ದರು.