ಕನ್ನಡಪ್ರಭ ವಾರ್ತೆ ಯಲ್ಲಾಪುರಕಲೆ ವ್ಯಕ್ತಿತ್ವ ರೂಪಿಸುತ್ತದೆ. ಅಂತಹ ಭಾರತೀಯ ನೃತ್ಯಕಲೆಯನ್ನು ವಿದುಷಿ ಸುಮಾ ಹೆಗಡೆಯವರು ವಿದ್ಯಾರ್ಥಿಗಳಿಗೆ ತಾಯಿಯ ಮಮತೆ ತೋರಿಸುವ ಮೂಲಕ ಭರತನಾಟ್ಯ ಕಲೆಯನ್ನು ಧಾರೆ ಎರೆಯುತ್ತಿದ್ದಾರೆ. ಅವರ ಕಾರ್ಯ ಅನನ್ಯವಾದದ್ದು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ಟ ಹೇಳಿದರು.ಪಟ್ಟಣದ ಎಪಿಎಂಸಿ ಆವಾರದ ಅಡಕೆ ಭವನದಲ್ಲಿ ಪಟ್ಟಣದ ಭಾರತಿ ನೃತ್ಯ ಕಲಾಕೇಂದ್ರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಇವರ ಆಶ್ರಯದಲ್ಲಿ ನಡೆದ ನೃತ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಾನಿಪ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಪ್ರಭಾವತಿ ಗೋವಿ ಮಾತನಾಡಿ, ಭರತನಾಟ್ಯದ ವೇಷ ಭೂಷಣದಲ್ಲಿ ಮಕ್ಕಳು ನೃತ್ಯ ಮಾಡುವುದನ್ನು ನೋಡುವುದೇ ಒಂದು ಸೊಗಸು. ನೃತ್ಯ ಪ್ರಸ್ತುತಪಡಿಸುತ್ತಿರುವ ಮಕ್ಕಳೊಂದಿಗೆ ವಿದುಷಿ ಸುಮಾ ಹಾಗೂ ಪಾಲಕರ ಪರಿಶ್ರಮವಿದೆ. ಮಾನಸಿಕ ನೆಮ್ಮದಿ ನೀಡುವ ಇಂತಹ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದರಿಂದ ಮಕ್ಕಳಲ್ಲಿ ಖಿನ್ನತೆ ಸುಳಿಯದಂತೆ ಹಾಗೂ ಮೊಬೈಲ್ ಗೀಳಿನಿಂದ ದೂರವಿಡಬಹುದಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ವಿಶ್ವದರ್ಶನ ಶಾಲೆಯ ಪ್ರಾಂಶುಪಾಲೆ ಮಹಾದೇವಿ ಭಟ್ಟ ಮಾತನಾಡಿ, ಭರತನಾಟ್ಯ ಕಲೆ ವಿದ್ಯಾಭ್ಯಾಸಕ್ಕೆ ಪೂರಕವಾಗಿದ್ದು, ಏಕಾಗ್ರತೆ ಹೆಚ್ಚಿಸುತ್ತದೆ. ಸುಮಾ ಅವರಂತಹ ಗುರುಗಳು ಸಿಗುವುದು ವಿರಳ. ಈ ಕಲೆ ಮೂಲಕ ನಿಮ್ಮ ಅವಕಾಶಗಳನ್ನು ನೀವೇ ಸೃಷ್ಟಿಸಿಕೊಳ್ಳಬಹುದಾಗಿದೆ ಎಂದರು. ಮಹಿಳಾ ಉದ್ಯಮಿ ಅಪರ್ಣಾ ಘಟ್ಟಿ, ಕೇಂದ್ರದ ನೃತ್ಯ ಗುರು ವಿದುಷಿ ಸುಮಾ ಹೆಗಡೆ ಗುರುವಂದನೆ ಸ್ವೀಕರಿಸಿ, ಮಾತನಾಡಿದರು.

ಶಿಕ್ಷಕಿ ಸವಿತಾ ಭಟ್ಟ, ಕಲಾಕೇಂದ್ರದ ಅಧ್ಯಕ್ಷ ವಿ.ಟಿ.ಹೆಗಡೆ ಇತರರು ಇದ್ದರು. ನಿರ್ಮಲಾ ಭಾಗ್ವತ ಸ್ವಾಗತಿಸಿದರು. ಪೂಜಾ ನಿರ್ವಹಿಸಿದರು. ರಂಜನಾ ವಂದಿಸಿದರು. ಲಕ್ಷ್ಮಿ ಭಟ್ ಚಿಮ್ನಳ್ಳಿ ಗುರುವಂದನೆ ನಡೆಸಿಕೊಟ್ಟರು. ನಂತರ ಭಾರತೀ ನೃತ್ಯ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ನಡೆದ ನೃತ್ಯ ಪ್ರದರ್ಶನ ಜನಮನ ರಂಜಿಸಿತು.