ಉಡುಪಿ: ಆಸ್ವಾದಿಸುವ, ಪ್ರೋತ್ಸಾಹಿಸುವ ಪ್ರೇಕ್ಷಕರಿದ್ದರೆ ಮಾತ್ರ ಕಲೆ ಉಳಿಯುತ್ತದೆ. ಉತ್ತಮ ರಂಗಭೂಮಿ ಕಲಾವಿದರಿಂದ ಕಲೆ ಬೆಳೆಯುತ್ತದೆ ಎಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ. ಶ್ಯಾಮ್ ಭಟ್ ಹೇಳಿದರು. ಇಲ್ಲಿನ ಎಂಜಿಎo ಕಾಲೇಜಿನಲ್ಲಿ ರಂಗಭೂಮಿ ಉಡುಪಿ ಆಶ್ರಯದಲ್ಲಿ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಪರಿಷತ್ ಉಡುಪಿಯ ಸಹಭಾಗಿತ್ವದಲ್ಲಿ ನಡೆದ ದಕ್ಷಿಣ ಮಧ್ಯ ಭಾರತದ ರಾಜ್ಯಗಳ ಜಾನಪದ ಉತ್ಸವದ ಸಮಾರೋಪ ಸಮಾರಂಭದಲ್ಲಿ ಯಕ್ಷಗಾನ ಕಲೆಗೆ ನೀಡಿದ ಅನುಪಮ ಪ್ರೋತ್ಸಾಹಕ್ಕಾಗಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಕತ್ವದ ೨೦೨೬ನೇ ಸಾಲಿನ ‘ತಲ್ಲೂರ್ಸ್ ಯಕ್ಷರತ್ನ ಪ್ರಶಸ್ತಿ’ಸ್ವೀಕರಿಸಿ ಮಾತನಾಡಿದರು. ೨೦ ವರ್ಷಗಳ ಹಿಂದೆ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ಇಲ್ಲಿನ ಸಂಸ್ಕೃತಿ, ಜನಪದ ಕಲೆಗಳನ್ನು ನೋಡಿ ಅರಿತಿದ್ದೇನೆ. ಈ ಪ್ರಶಸ್ತಿಯನ್ನು ಕಲೆಯ ಪೋಷಕರಿಗೆ ಹಾಗೂ ಪ್ರೋತ್ಸಾಹಕರಿಗೆ ಅರ್ಪಿಸುತ್ತಿದ್ದೇನೆ. ಡಾ. ತಲ್ಲೂರು ಅವರ ನೇತೃತ್ವದಲ್ಲಿ ಇಂತಹ ಉತ್ತಮ ಕಾರ್ಯಗಳು ಇನ್ನಷ್ಟು ನಡೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದ ರೂವಾರಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಡಾ.ಟಿ. ಶ್ಯಾಮ್ ಭಟ್ ಅವರು ಯಕ್ಷಗಾನ ಕಲೆಗೆ ನೀಡುತ್ತಿರುವ ಪ್ರೋತ್ಸಾಹವನ್ನು ಕಂಡು ಬೆರಗಾಗಿದ್ದೇನೆ. ಇಂತಹ ಪ್ರೋತ್ಸಾಹಕರಿಂದಲೇ ಯಕ್ಷಗಾನ ಇಂದು ಜನಮಾನಸದಲ್ಲಿ ರಾರಾಜಿಸುತ್ತಿದೆ ಎಂದರು.ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ಎನ್.ಬಿ. ವಿಜಯ ಬಲ್ಲಾಳ್ ಶುಭ ಹಾರೈಸಿದರು. ಈ ಸಂದರ್ಭ ಈ ಮೂರು ದಿನಗಳ ಉತ್ತರ ಭಾರತದ ಜಾನಪದ ಉತ್ಸವಕ್ಕೆ ಸಹಕರಿಸಿದ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರದ ಅಧಿಕಾರಿಗಳಾದ ಗಜಾನನ ಹಾಗೂ ನೀಲೇಶ್ ಅವರನ್ನು ಗೌರವಿಸಲಾಯಿತು. ಉದ್ಯಮಿ ಗುಜ್ಜಾಡಿ ವರುಣ್ ನಾಯಕ್, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ನ ಟ್ರಸ್ಟಿ ತಲ್ಲೂರು ಗಿರಿಜಾ ಶಿವರಾಮ ಶೆಟ್ಟಿ, ರಂಗಭೂಮಿ ಪ್ರಧಾನ ಕಾರ್ಯದರ್ಶಿ ಪ್ರದೀಪಚಂದ್ರ ಕುತ್ಪಾಡಿ, ಉಪಾಧ್ಯಕ್ಷರಾದ ಎನ್.ಆರ್. ಬಲ್ಲಾಳ್ ಮತ್ತು ಭಾಸ್ಕರ ರಾವ್ ಕಿದಿಯೂರು ಉಪಸ್ಥಿತರಿದ್ದರು. ಶ್ರೀನಿವಾಸ ಉಪಾಧ್ಯಾಯ ಹಾಗೂ ರವಿರಾಜ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಅನುಷಾ ಆಚಾರ್ಯ ವಾಚಿಸಿದರು.