ಕೃತಕ ಬುದ್ಧಿಮತ್ತೆ ಮಾನವನ ಶತ್ರುವಲ್ಲ, ಸಹಾಯಕ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಲ್ಲಿ ಸಮಾಜದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಬಹುದು. ಆದರೆ ಇದರಿಂದ ಉದ್ಯೋಗ ಹಾನಿ, ಡೇಟಾ ಗೌಪ್ಯತೆ ಕೆಲವೊಂದು ಸವಾಲುಗಳು ಕೂಡ ಇವೆ.

ಕನ್ನಡಪ್ರಭ ವಾರ್ತೆ ಮೈಸೂರು

ಇಂದಿನ ಡಿಜಿಟಲ್‌ ಯುಗದಲ್ಲಿ ಕೃತಕ ಬುದ್ಧಿಮತ್ತೆ ಕೇವಲ ತಂತ್ರಜ್ಞಾನವಲ್ಲ, ಅದು ಮಾನವ ಜೀವನದ ಪ್ರತಿಯೊಂದು ಕ್ಷೇತ್ರವನ್ನು ರೂಪಾಂತರಗೊಳಿಸುತ್ತಿರುವ ಕ್ರಾಂತಿಕಾರಿ ಶಕ್ತಿ ಎಂದು ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಎನ್‌.ಕೆ. ಲೋಕನಾಥ್‌ ಹೇಳಿದರು.

ಮೈಸೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಮಾನಸ ಗಂಗೋತ್ರಿಯ ಸ್ಕೂಲ್‌ ಆಫ್‌ ಎಂಜಿನಿಯರಿಂಗ್‌ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಜ್ಞಾನ-ತಂತ್ರಜ್ಞಾನ ಕನ್ನಡೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮಾನವನ ಬುದ್ಧಿಶಕ್ತಿಯನ್ನು ಕಂಪ್ಯೂಟರ್‌ಗಳು ಮತ್ತು ಯಂತ್ರಗಳಲ್ಲಿ ಅನ್ಸಯಿಸುವ ವಿಜ್ಞಾನ ಎಐ ಎಂದರು.

ಎಐಯನ್ನು ಸರಿಯಾದ ರೀತಿಯಲ್ಲಿ ಬಳಸುವುದು ನಮ್ಮ ಜವಾಬ್ದಾರಿ, ಸರ್ಕಾರ ಕೂಡ ಕಾನೂನು ರೂಪಿಸಬೇಕು. ಸಂಶೋಧಕರು ನೈತಿಕ ಮಾರ್ಗಗಳನ್ನು ಅನುಸರಿಸಬೇಕು ಮತ್ತು ಜನರು ಕೂಡ ಜಾಗೃತರಾಗಬೇಕು ಎಂದು ಕರೆ ನೀಡಿದರು.

ಕೃತಕ ಬುದ್ಧಿಮತ್ತೆ ಮಾನವನ ಶತ್ರುವಲ್ಲ, ಸಹಾಯಕ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಲ್ಲಿ ಸಮಾಜದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಬಹುದು. ಆದರೆ ಇದರಿಂದ ಉದ್ಯೋಗ ಹಾನಿ, ಡೇಟಾ ಗೌಪ್ಯತೆ ಕೆಲವೊಂದು ಸವಾಲುಗಳು ಕೂಡ ಇವೆ ಎಂದು ವಿಶ್ಲೇಷಿಸಿದರು.

ಕುವೆಂಪು ವಿವಿ ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ ಕಾರ್ಯಕ್ರಮ ಉದ್ಘಾಟಿಸಿ, ಕೃತಕ ಬುದ್ಧಿಮತ್ತೆ-ಇತ್ತೀಚಿನ ಬೆಳವಣಿಗೆಗಳು ಕುರಿತು ವಿಚಾರ ಮಂಡಿಸಿದರು. ಮೈಸೂರು ವಿವಿ ಸ್ಕೂಲ್‌ ಆಫ್‌ ಎಂಜಿನಿಯರಿಂಗ್‌ ನಿರ್ದೇಶಕ ಡಾ.ಎಂ.ಎಸ್‌. ಗೋವಿಂದೇಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್‌ ಮುಖ್ಯಅತಿಥಿಗಳಾಗಿದ್ದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಪ್ರಶಸ್ತಿ ಪ್ರದಾನ ಮಾಡಿದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಪ್ರಾಸ್ತಾವಿಕ ಭಾಷಣ ಮಾಡಿದರು. ಜಿಲ್ಲಾ ಕಸಾಪ ಉಪಾಧ್ಯಕ್ಷರೂ ಆದ ಮೈಸೂರು ಕೇಂದ್ರ ಕಾರಾಗೃಹ ಮತ್ತು ಸುಧಾರಣೆ ಸೇವೆಯ ಸದಸ್ಯ ಜಾಕೀರ್‌ ಹುಸೇನ್‌ ಸ್ವಾಗತಿಸಿದರು.

ಮೈಸೂರು ತಾ. ಕಸಾಪ ಅಧ್ಯಕ್ಷ ಎ.ಸಿ. ಮಂಜುನಾಥ್‌, ಜಿಲ್ಲಾ ಉಪಾಧ್ಯಕ್ಷ ಡೈರಿ ವೆಂಕಟೇಶ್‌ ಇದ್ದರು. ಕಮಲಾ ಕಾರ್ಯಕ್ರಮ ನಿರೂಪಿಸಿದರು. ಸ್ಕೂಲ್‌ ಆಫ್‌ ಎಂಜಿನಿಯರಿಂಗ್‌ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು.

ಪ್ರಶಸ್ತಿ ಪುರಸ್ಕೃತರು

ಇದೇ ವೇಳೆ ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್‌, ಮೈಸೂರು ವಿವಿ ಸ್ಕೂಲ್‌ ಆಫ್‌ ಎಂಜಿನಿಯರಿಂಗ್‌ ನಿರ್ದೇಶಕ ಡಾ.ಎಂ.ಎಸ್‌. ಗೋವಿಂದೇಗೌಡ, ಡೈರಿ ವೆಂಕಟೇಶ್‌, ರಿಷಿ ವಿಶ್ವಕರ್ಮ, ಪ್ರೇಮ ಮಾದಪ್ಪ, ರದೀಉಲ್ಲಾ ಖಾನ್, ನಾಜಿಯಾ ಸುಲ್ತಾನ, ಎನ್‌. ಲೋಹಿತ್‌, ಎಚ್.ಕೆ. ಸುಶೀಲಾ, ಸ್ನೇಹಾ, ಗಾಯತ್ರಿ ಯಲ್ಲಪ್ಪಗೌಡ, ಎಂ. ಚಂದ್ರಪ್ಪ, ಕೆ.ಎಂ. ಕಾವ್ಯಾ, ಗಿರಿಜಾ ನಿರ್ವಾಣಿ, ಪ್ರಭಾ, ಎಚ್. ಗಿರೀಶ್‌, ಶೋಭಾ ನಾಗಶಯನ, ಎಸ್. ನಂದಿನಿ, ಎಂ.ಎ. ಸವಿತಾ, ನಂದಕುಮಾರ್‌, ಎ.ಜಿ. ದೇವರಾಜ ಅವರಿಗೆ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರಶಸ್ತಿ ಪ್ರದಾನ ಮಾಡಲಾಯಿತು.