ಕನ್ನಡಪ್ರಭ ವಾರ್ತೆ ಮದ್ದೂರು
ಗ್ರಾಮೀಣ ಭಾಗದ ಕುಶಲಕರ್ಮಿಗಳು ಸರ್ಕಾರ ನೀಡುವ ಸೌಲಭ್ಯ ಪಡೆದುಕೊಂಡು ಸ್ವಂತ ಉದ್ಯೋಗ ಕೈಗೊಳ್ಳಬೇಕು ಎಂದು ಶಾಸಕ ಕೆ.ಎಂ.ಉದಯ್ ಶನಿವಾರ ಹೇಳಿದರು.ನಗರದ ಪ್ರವಾಸಿ ಮಂದಿರದಲ್ಲಿ ಗ್ರಾಮೀಣ ಕೈಗಾರಿಕಾ ಸಂಸ್ಥೆಯಿಂದ ಆಯ್ಕೆಯಾದ ಕುಶಲಕರ್ಮಿಗಳಿಗೆ ಸುಧಾರಿತ ಪವರ್ ಟೂಲ್ಸ್ ಉಪಕರಣ ವಿತರಿಸಿ ಮಾತನಾಡಿ, ಗ್ರಾಮೀಣ ಕೈಗಾರಿಕೆಗಳು ದೇಶದ ಆರ್ಥಿಕತೆಯ ಬೆನ್ನೆಲು. ಗ್ರಾಮೀಣ ಪುರುಷರು ಮತ್ತು ಮಹಿಳೆಯರಿಗೆ ಉದ್ಯೋಗ ಸೃಷ್ಟಿ ಮಾಡುವ ಮೂಲಕ ಸ್ವಾವಲಂಬನೆ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಕೌಶಲ್ಯ ಪೂರ್ಣ ಕುಶಲಕರ್ಮಿಗಳು ಅವರ ಮನೆ ಬಾಗಿಲಲ್ಲೇ ಸ್ವಂತ ಉದ್ಯೋಗ ನಡೆಸಿಕೊಂಡು ಆರ್ಥಿಕವಾಗಿ ಸದೃಢಗೊಳ್ಳಲು ಸಹಕಾರಿಯಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಗ್ರಾಮೀಣ ಭಾಗದ 91 ಮಂದಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಶೇಷ ಚೇತನರು, ಅಲ್ಪಸಂಖ್ಯಾತರು, ಸಾಮಾನ್ಯ ವರ್ಗ ರವರಿಗೆ ಮರಗೆಲಸ ,ಗಾರೆ ಕೆಲಸ, ಕ್ಷೌರಿಕ ವೃತ್ತಿ, ಧೋಬಿ ಗಳು ಒಳಗೊಂಡಂತೆ 17 ಮಂದಿಗೆ ಪವರ್ ಟೂಲ್ಸ್ ಉಪಕರಣ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮೀಣ ಕೈಗಾರಿಕಾ ಸಂಸ್ಥೆಯ ಉಪನಿರ್ದೇಶಕ ದೊರೈರಾಜು ಹಾಗೂ ಸಿಬ್ಬಂದಿ ಇದ್ದರು.
ಎಚ್ಡಿಕೆಯಿಂದ ಮುಖಂಡರು, ಕಾರ್ಯಕರ್ತರಿಗೆ ಸ್ಥಾನಮಾನ ನೀಡದೆ ಅನ್ಯಾಯ: ಕೆ.ಎಂ.ಉದಯ್
ಮದ್ದೂರು:
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಅಧಿಕಾರದಲ್ಲಿದ್ದಾಗ ಯಾವುದೇ ಸ್ಥಾನಮಾನ ನೀಡದೆ ಅನ್ಯಾಯ ಮಾಡಿದ ಫಲವನ್ನು ವಿಧಾನ ಪರಿಷತ್ ಚುನಾವಣೆಯಲ್ಲಿ ಎದುರಿಸುವಂತಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಟೀಕಿಸಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಶಾಸಕರು ಅಡ್ಡ ಕಸುಬಿಗಳು. ಇಂಥವರಿಗೆ ಕಾರ್ಯಕರ್ತರೇ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಎಚ್ಡಿಕೆ ತಪ್ಪಿನಿಂದ ಮುಂದಿನ ದಿನಗಳಲ್ಲಿ ಅವರ ಪಕ್ಷ ಯಾವ ಹೀನಾಯ ಸ್ಥಿತಿಗೆ ಬರುತ್ತದೆ. ಕಾದುನೋಡಿ ಲೇವಡಿ ಮಾಡಿದರು.
ತಾವು ಮತ್ತು ತಮ್ಮ ಕುಟುಂಬ ಅಧಿಕಾರ ಅನುಭವಿಸಿದರೆ ಸಾಕು ಎನ್ನುವ ಮನೋಭಾವ ಕುಮಾರಸ್ವಾಮಿ ಅವರಲ್ಲಿದೆ. ಜೆಡಿಎಸ್ ಪಕ್ಷದ ಸಂಘಟನೆಗೆ ದುಡಿದ ಮುಖಂಡರು, ಕಾರ್ಯಕರ್ತರನ್ನು ಮೂಲೆಗುಂಪು ಮಾಡಿದ ಫಲವನ್ನು ಅವರು ಈಗ ಅನುಭವಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.