ಸಾರಾಂಶ
ಮಂಗಳೂರಿನ ಸಂತ ಅಲೋಶಿಯಸ್ ವಿವಿಯಲ್ಲಿ ನಾಟಕ, ಸಂಗೀತ, ಚಿತ್ರ, ಸಿನೆಮಾ ಸಾಹಿತ್ಯಗಳ ಸಮ್ಮಿಲನದ ‘ನೇಹದ ನೇಯ್ಗೆ’ ಹಿನ್ನೆಲೆಯಲ್ಲಿ ‘ಬಯಲು ರಂಗ ಸಂಭ್ರಮ’ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ನಾಟಕ, ಹಾಡು, ಸಂಗೀತ, ಚಿತ್ರಕಲೆ, ಸಿನೆಮಾ ಮೂಲಕ ಪ್ರೀತಿಯ ವಾತಾವರಣ ನಿರ್ಮಾಣ ಮಾಡುವುದಕ್ಕೆ ಕಲಾವಿದರು, ಕಲಾಪ್ರೇಮಿಗಳು ಒಂದಾಗಬೇಕಾದ ಅಗತ್ಯತೆ ಇದೆ ಎಂದು ಖ್ಯಾತ ಚಿತ್ರ ನಟ ಅಚ್ಚುತ ಕುಮಾರ್ ಆಶಿಸಿದರು.ಮಂಗಳೂರಿನ ಸಂತ ಅಲೋಶಿಯಸ್ ವಿವಿಯಲ್ಲಿ ನಾಟಕ, ಸಂಗೀತ, ಚಿತ್ರ, ಸಿನೆಮಾ ಸಾಹಿತ್ಯಗಳ ಸಮ್ಮಿಲನದ ‘ನೇಹದ ನೇಯ್ಗೆ’ ಹಿನ್ನೆಲೆಯಲ್ಲಿ ‘ಬಯಲು ರಂಗ ಸಂಭ್ರಮ’ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.ನೇಹದ ನೇಯ್ಗೆಯು ತಾಂತ್ರಿಕ ತೊಂದರೆಯಿಂದ ಅಲ್ಲಲ್ಲಿ ತುಂಡಾಗಬಹುದು. ಅದನ್ನು ಮತ್ತೆ ನಾವು ಸಹೋದರತೆ, ಪ್ರೀತಿ, ಶಾಂತಿ ಬೆಸೆಯುತ್ತ ನೇಯುವ ಕೆಲಸ ಮಾಡಬೇಕಿದೆ. ತಾಂತ್ರಿಕವಾಗಿ ತೊಂದರೆಯಿಂದಷ್ಟೇ ತುಂಡರಿಸಿದರೆ ಸಮಸ್ಯೆ ಇಲ್ಲ. ಆದರೆ ನೇಯ್ಗೆಯ ಪಯಣ ಅಷ್ಟುಸುಲಭವಾಗಿಲ್ಲ. ಉದ್ದೇಶಪೂರ್ವಕವಾಗಿ ಇದನ್ನು ತುಂಡರಿಸಲೇಬೇಕು ಎಂದು ಒಂದಷ್ಟು ಕಿಡಿಗೇಡಿ ಮನಸ್ಥಿತಿಯವರು ಇರುತ್ತಾರೆ. ಹಾಗಿದ್ದರೂ ಕೂಡ ಅದನ್ನು ನಾವು ಪ್ರೀತಿಯಿಂದ ಒಳಗೊಳ್ಳುತ್ತಾ ನೇಯ್ಗೆ ನೇಯ್ದು ಮುಂದಕ್ಕೆ ದಾಟಿಸಬೇಕಾಗಿದೆ. ಅಂತಹ ತುರ್ತು ಇಂದು ನಮ್ಮೆಲ್ಲರಿಗೂ ಇದೆ. ಇದಕ್ಕಾಗಿ ನಾವು ಕಾರ್ಯನಿರ್ವಹಿಸೋಣ ಎಂದರು.
ನಿರ್ದಿಗಂತ ಸಂಸ್ಥೆಯ ರೂವಾರಿ, ನಟ ಪ್ರಕಾಶ್ರಾಜ್ ಸ್ವಾಗತಿಸಿದರು. ಬಳಿಕ ಮೈಸೂರಿನ ರಿದಂ ಅಡ್ಡಾ ತಂಡದಿಂದ ಲಯವಾದ್ಯ ಸಮ್ಮಿಳನ ನಡೆಯಿತು. ನಂತರ ಚಿಕ್ಕಮಗಳೂರಿನ ಅಭಿನಯ ದರ್ಪಣ ಯುವವೇದಿಕೆ ವತಿಯಿಂದ ‘ತಪ್ಪಿದ ಎಳೆ’ ನಾಟಕ ಪ್ರದರ್ಶನಗೊಂಡಿತು.