ಕಲಾವಿದರ ಕಲಾಕೃತಿಗಳಿಗೆ ಮನ್ನಣೆ ಸಿಗಲಿ: ಬಾಬು ಜತ್ತಕರ

| Published : Jun 18 2025, 01:25 AM IST

ಸಾರಾಂಶ

ಸಮಾಜದಲ್ಲಿ ಮಾನವೀಯ ಸಂಬಂಧಗಳು ಬೆಳೆಯಲು ಕಲೆಯಿಂದ ಮಾತ್ರ ಸಾಧ್ಯ.

ಹಾವೇರಿ: ನಾಲ್ಕು ಗೋಡೆಗಳ ನಡುವೆ ಕಲಾಕೃತಿಗಳನ್ನು ಇಟ್ಟುಕೊಂಡರೆ ಕಲೆ ಬೆಳೆಯುವುದಿಲ್ಲ. ಬದಲಾಗಿ ಬೇರೆ ಬೇರೆ ಸ್ಥಳಗಳಲ್ಲಿ ಪ್ರದರ್ಶನವಾದಾಗ ಅವುಗಳಿಗೆ ಮಾತು ಮತ್ತು ವಿಮರ್ಶೆ ಸಿಕ್ಕು ಕಲಾವಿದ ಆತ್ಮವಿಶ್ವಾಸದಿಂದ ಬೆಳೆಯಲು ಸಾಧ್ಯವಾಗುತ್ತದೆ ಎಂದು ಕಲಾವಿದ, ಚಿತ್ರಕಲಾ ಪರಿಷತ್ತಿನ ಕಲಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ಬಾಬು ಜತ್ತಕರ ತಿಳಿಸಿದರು.ನಗರದ ನಂದಿ ಲೇಔಟ್‌ನಲ್ಲಿರುವ ಹಂಚಿನಮನಿ ಆರ್ಟ್ ಗ್ಯಾಲರಿಯಲ್ಲಿ ಶಿರಸಿಯ ತಾರಾನಾ ಬಳಗದ ಸಹಯೋಗದಲ್ಲಿ ಏರ್ಪಡಿಸಿದ್ದ ಕಲಾವಿದ ದಂಪತಿಗಳಾದ ಗ.ಮ. ತುಂಬೆಮನಿ ಮತ್ತು ಜಯಾ ತುಂಬೆಮನಿ ಹಾಗೂ ಪವಿತ್ರಾ ಹೆಮಟೆಮನಿ ಅವರ ಲಿಪ್ಪನ್ ಆರ್ಟ್, ಮಂಡಲ್ ಆರ್ಟ್‌ ಕಲಾ ಪ್ರದರ್ಶನಗಳ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಕರ್ನಾಟಕದ ಲಲಿತಕಲಾ ಅಕಾಡೆಮಿ ಸದಸ್ಯರಾದ ಕರಿಯಪ್ಪ ಹಂಚಿನಮನಿ ವಹಿಸಿ ಮಾತನಾಡಿ, ಸಮಾಜದಲ್ಲಿ ಮಾನವೀಯ ಸಂಬಂಧಗಳು ಬೆಳೆಯಲು ಕಲೆಯಿಂದ ಮಾತ್ರ ಸಾಧ್ಯ. ಈ ಭಾಗದ ಕುಂಚ ಕಲಾವಿದರಿಗೆ ಒಂದು ದೊಡ್ಡ ವೇದಿಕೆ ಕೊಡುವುದೇ ಗ್ಯಾಲರಿಯ ಉದ್ದೇಶ. ಇಂತಹ ಪ್ರದರ್ಶನಗಳಿಂದ ಕಲಾವಿದನೊಬ್ಬ ತಾನೆಲ್ಲಿದ್ದೇನೆಂದು ತಿಳಿದುಕೊಳ್ಳಲು ಸಾಧ್ಯ ಎಂದರು. ಪ್ರದರ್ಶನವನ್ನು ಉದ್ದೇಶಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಆರ್.ವಿ. ಚಿನ್ನಿಕಟ್ಟಿ, ಅಂಬಿಕಾ ಹಂಚಾಟೆ, ಪ್ರಾಚಾರ್ಯ ಸೋಮನಾಥ ಡಿ., ಲೇಖಕಿ ಶೋಭಾ ಹೆಗಡೆ, ಗಣಪತಿ ಹೆಗಡೆ, ಚಿತ್ರ ಪ್ರದರ್ಶನಗಳ ಕುರಿತು ಕಲಾವಿದರಾದ ಪರಮೇಶ ಹುಲ್ಲಮನಿ, ರೇಣುಕಾ ಗುಡಿಮನಿ ಮಾತನಾಡಿದರು.ಕಲಾವಿದರಾದ ಗ.ಮ. ತುಂಬೆಮನಿ, ಜಯಾ ತುಂಬೆಮನಿ ಹಾಗೂ ಪವಿತ್ರಾ ಹೆಮಟೆಮನಿ ಅವರನ್ನು ಗ್ಯಾಲರಿ ವತಿಯಿಂದ ಸನ್ಮಾನಿಸಲಾಯಿತು. ತಾರಾ ಹೆಗಡೆ ನಿರೂಪಿಸಿದರು. ಸತೀಶ ಕುಲಕರ್ಣಿ ಸ್ವಾಗತಿಸಿದರು. ಪೂಜಾ ಹೆಗಡೆ ವಂದಿಸಿದರು. ಶರಣ ಸಾಹಿತ್ಯ ಮನುಕುಲಕ್ಕೆ ಮಾರ್ಗದರ್ಶಿ

ಹಾವೇರಿ: ಮಾನವ ಕುಲಕ್ಕೆ ಮಾರ್ಗದರ್ಶನ ನೀಡಬಲ್ಲ ಸಮೃದ್ಧ ಶರಣ ಸಾಹಿತ್ಯ ಸಂಪತ್ತಿದೆ. ಅದರ ಸವಿಯನ್ನು ಸಮಾಜಕ್ಕೆ ಉಣಬಡಿಸಿ ಸಾಮಾಜಿಕ ಹಿತ ಕಾಪಾಡಲು ಮುಂದಾಗುವುದು ಅಗತ್ಯವಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರೊ. ಮಾರುತಿ ಶಿಡ್ಲಾಪೂರ ತಿಳಿಸಿದರು.ಭಾನುವಾರ ಜಗದೀಶ ಹತ್ತಿಕೋಟಿ ಅವರನ್ನು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಯುವ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿ ಗೌರವಿಸಿ ಅಭಿನಂದಿಸಿ ಮಾತನಾಡಿ, ಸರಳ ಸಂತೃಪ್ತ ಜೀವನದ ಮಾರ್ಗದರ್ಶನ ಸಾಮಾಜಿಕ ಸಾಮರಸ್ಯದ ಸಾರ್ವಕಾಲಿಕ ಸಂದೇಶಗಳನ್ನು ಉಳ್ಳ ಶರಣ ಸಾಹಿತ್ಯ ಇಡೀ ಪ್ರಪಂಚಕ್ಕೆ ಮಾರ್ಗದರ್ಶನ ಮಾಡುವ ಶಕ್ತಿ ಹೊಂದಿದೆ ಎಂದರು.ನೂತನ ಜಿಲ್ಲಾ ಯುವ ಘಟಕದ ಅಧ್ಯಕ್ಷ ಜಗದೀಶ ಹತ್ತಿಕೊಟಿ ಗೌರವ ಸ್ವೀಕರಿಸಿ ಮಾತನಾಡಿದರು. ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ದಾಕ್ಷಾಯಿಣಿ ಗಾಣಿಗೇರ, ಉಪಾಧ್ಯಕ್ಷೆ ಅಮೃತಮ್ಮ ಶೀಲವಂತರ, ಶರಣ ಸಾಹಿತ್ಯ ಪರಿಷತ್ ಹಾವೇರಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಸತೀಶ ಎಂ.ಬಿ., ಅರುಣ ಮಳಿಯಣ್ಣನವರ, ವಾಣಿಶ್ರೀ ಹತ್ತಿಕೋಟಿ ಇತರರು ಇದ್ದರು.