ಮಕ್ಕಳಿಗೆ ಕಲೆಗಳ ಅರಿವು ಮುಖ್ಯ: ಚಂದ್ರಕಾಂತ ಬೆಲ್ಲದ

| Published : Apr 11 2025, 12:31 AM IST

ಸಾರಾಂಶ

ಮಕ್ಕಳು ಕುಟುಂಬ ಮಾತ್ರವಲ್ಲದೆ ಭವಿಷ್ಯದಲ್ಲಿ ದೇಶದ ಆಸ್ತಿ. ಆದ್ದರಿಂದ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕ ವಾತಾವರಣ ಪೋಷಕರು ನೀಡಬೇಕು.

ಧಾರವಾಡ: ಮಕ್ಕಳು ಕೇವಲ ಓದಿನತ್ತ ಗಮನ ಹರಿಸುವುದರ ಜತೆಗೆ ಸಂಗೀತ, ನೃತ್ಯ, ನಾಟಕ, ಚಿತ್ರಕಲೆ ಸೇರಿದಂತೆ ಹಲವಾರು ಕಲೆಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಪಾಲಕರು ಪ್ರೇರೆಪಿಸಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಹೇಳಿದರು.

ಇಲ್ಲಿನ ರಂಗಾಯಣವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಟ್ರಸ್ಟ್‌ಗಳ ಸಹಯೋಗದಲ್ಲಿ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಸಭಾಭವನದಲ್ಲಿ ನಮ್ಮ ಸಂವಿಧಾನ ನಮ್ಮ ಕಲರವ ಧ್ಯೇಯವಾಕ್ಯದಡಿ ಹಮ್ಮಿಕೊಂಡಿದ್ದ ಚಿಣ್ಣರಮೇಳ 2025ನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಕುಟುಂಬ ಮಾತ್ರವಲ್ಲದೆ ಭವಿಷ್ಯದಲ್ಲಿ ದೇಶದ ಆಸ್ತಿ. ಆದ್ದರಿಂದ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕ ವಾತಾವರಣ ಪೋಷಕರು ನೀಡಬೇಕು. ಕಲೆ, ಬಹುಸಂಸ್ಕೃತಿಗಳ ಕುರಿತು ಅರಿವನ್ನು ಮೂಡಿಸುವ ಕಾರ್ಯ ರಂಗಾಯಣವು ಬೇಸಿಗೆ ಶಿಬಿರದ ಮೂಲಕ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಒಂದು ತಿಂಗಳ ಕಾಲ ನಡೆಯುವ ಈ ಶಿಬಿರವು ಮಕ್ಕಳ ಭವಿಷ್ಯಕ್ಕೆ ಬುನಾದಿಯಾಗಲಿದೆ ಎಂದು ಹೇಳಿದರು.

ಚಿತ್ರಕಲಾ ಶಿಲ್ಪಿ ಡಿ.ವಿ.ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸದಸ್ಯ ಸುರೇಶ ಹಾಲಭಾವಿ ಮಾತನಾಡಿ, ಮಕ್ಕಳು ಚಿಕ್ಕವರಿದ್ದಾಗಲೆ ಅವರಿಗೆ ಮುಂದಿನ ಭವಿಷ್ಯದ ಕುರಿತು ಉತ್ತಮ ಮಾರ್ಗ ನೀಡಬೇಕು.ಈ ಶಿಬಿರದಲ್ಲಿ ಹಲವಾರು ಕಲೆಗಳ ಕುರಿತು, ವಿಚಾರ,ಪ್ರಸ್ತುತ ವಿದ್ಯಮಾನ ಸೇರಿದಂತೆ ಬೇರೆ ಬೇರೆ ವಿಷಯಗಳ ಕುರಿತು ಪರಿಣಿತರಿಂದ ಮಕ್ಕಳಿಗೆ ತಿಳಿಸುವುದರ ಮೂಲಕ ಅವರನ್ನು ಉತ್ತಮ ನಾಗರಿಕನ್ನಾಗಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ರಂಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟಿ ಮಾತನಾಡಿ, ಮಕ್ಕಳೊಂದಿಗೆ ಬೆರೆಯುವುದೇ ಒಂದು ಸಂತೋಷದ ಸಂಗತಿ. ಇಂದಿನ ಮಕ್ಕಳು ಮೊಬೈಲ್‌ಗಳಲ್ಲಿ ಮುಳುಗಿ ಸಮಾಜದಲ್ಲಿ ಏನು ನಡೆಯುತ್ತಿದೆ ಎಂಬ ಅರಿವೆ ಇಲ್ಲ. ಈ ಶಿಬಿರದಲ್ಲಿ ಮಕ್ಕಳಿಗೆ ಹಲವಾರು ಕಲೆ, ಚಟುವಟಿಕೆಗಳು ಸೇರಿದಂತೆ ನಾಟಕ ಕಲಿಸುವುದರ ಮೂಲಕ ಅವರಲ್ಲಿರುವ ಕಲೆಯನ್ನು ಗುರುತಿಸುವ ಕಾರ್ಯ ರಂಗಾಯಣ ಮಾಡುತ್ತದೆ ಎಂದರು.

ಚಿತ್ರಕಲಾ ಶಿಲ್ಪಿ ಡಿ.ವಿ.ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸದಸ್ಯೆ ಪಾರ್ವತಿ ಹಾಲಭಾವಿ, ಬಿ.ಮಾರುತಿ, ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ಸದಸ್ಯ ನಿಜಗುಣಿ ರಾಜಗುರು, ಶಿಬಿರ ನಿರ್ದೇಶಕ ಲಕ್ಷ್ಮಣ ಪೀರಗಾರ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ವಂದಿಸಿದರು. ಡಾ. ಆನಂದಪ್ಪ ಜೋಗಿ ಕಿನ್ನರಿ ಜೋಗಿ ಕಲೆಯನ್ನು ಮಕ್ಕಳಿಗಾಗಿ ಪ್ರಸ್ತುತಪಡಿಸಿದರು.