ನೆಲಮಂಗಲ/ದಾಬಸ್ಪೇಟೆ: ವಿದ್ಯಾರ್ಥಿಗಳು ಕೇವಲ ವಿದ್ಯಾಭ್ಯಾಸಕ್ಕೆ ಸೀಮಿತರಾಗದೆ ಡ್ರಗ್ಸ್ ವಿರೋಧಿ ಜಾಗೃತಿ ಅಭಿಯಾನದ ರಾಯಭಾರಿಗಳಾಗಬೇಕು. ‘ಡ್ರಗ್ಸ್ ಗೆ ಬೇಡ ಬ್ರೋ’ ಸಂದೇಶವನ್ನು ಕುಟುಂಬ, ಸ್ನೇಹಿತರ ವಲಯ ಹಾಗೂ ಸಮಾಜದ ಎಲ್ಲ ಹಂತಗಳಿಗೆ ತಲುಪಿಸಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಶಾಸಕ ಎನ್.ಶ್ರೀನಿವಾಸ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪಟ್ಟಣದ ಪವಾಡ ಬಸವಣ್ಣ ದೇವರಮಠದಲ್ಲಿ ನೆಲಮಂಗಲ ಉಪವಿಭಾಗದ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ಆಪರೇಷನ್ ರೈಸ್ ಮತ್ತು ಬೇಡ ಬ್ರೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ಸರ್ಕಾರ ಮಾದಕ ದ್ರವ್ಯಗಳನ್ನು ತಡೆಗಟ್ಟಲು ದಿಟ್ಟ ಕ್ರಮ ಕೈಗೊಂಡು ಹಲರು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ವಿದ್ಯಾರ್ಥಿಗಳು ಉತ್ತಮ ಸ್ನೇಹಿತರು ಮತ್ತು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕೆಂದರು.
ಪವಾಡ ಬಸವಣ್ಣದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಡ್ರಗ್ಸ್ಗೆ ಒಳಗಾದವರು ಮಾನಸಿಕ ಖಿನ್ನತೆಗೆ ಒಳಗಾಗಿ ಜೀವನವನ್ನೇ ನಾಶ ಮಾಡಿಕೊಳ್ಳುತ್ತಾರೆ. ಆಪರೇಷನ್ ರೈಸ್ ಹಾಗೂ ಬೇಡ ಬ್ರೋ ಅಭಿಯಾನ ಯುವ ಜನತೆಗೆ ಪ್ರೇರಣೆಯಾಗಿದೆ. ವಿದ್ಯಾರ್ಥಿಗಳು ಇತರರಿಗೂ ಜಾಗೃತಿ ಮೂಡಿಸಿ, ದುಶ್ಚಟಗಳಿಂದ ದೂರವಿರಲು ಸಹಕರಿಸಬೇಕು ಎಂದು ಸಲಹೆ ನೀಡಿದರು.ಡಿವೈಎಸ್ಪಿ ಉಮಾರಾಣಿ ಮಾತನಾಡಿ, ತಾಲೂಕಿನಲ್ಲಿ ಮಾದಕ ವಸ್ತುಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಕಾರ್ಯಾಚರಣೆ ನಡೆಸುತ್ತಿದ್ದು, ಮಾದಕ ದ್ರವ್ಯ ಸೇವನೆ ತಡೆಗಟ್ಟಲು ಸರ್ಕಾರ ‘ಬೇಡ ಬ್ರೋ’ ಅಭಿಯಾನ ಪ್ರಾರಂಭಿಸಿದೆ. ದುಶ್ಚಟವನ್ನು ‘ಬೇಡ’ ಎಂದು ತಿರಸ್ಕರಿಸುವುದು ಕೀಳರಿಮೆಯಲ್ಲ, ಅದು ನಿಮ್ಮ ಧೈರ್ಯದ ಸಂಕೇತ. ನಿಮ್ಮ ಸುತ್ತಮುತ್ತ ಗಾಂಜಾ ಅಥವಾ ಅಫೀಮು ಬೆಳೆಯುವುದು ಕಂಡು ಬಂದರೆ ತಕ್ಷಣ 1908 ಉಚಿತ ದೂರವಾಣಿಗೆ ಕರೆ ಮಾಡಿ ಮಾಹಿತಿ ನೀಡಿ. ಈ ಪಿಡುಗು ಮುಕ್ತ ಸಮಾಜ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ಇದೇ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಡ್ರಗ್ಸ್ ಮುಕ್ತ ಕರ್ನಾಟಕ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಆಪರೇಷನ್ ರೈಸ್ ಮತ್ತು ಬೇಡ ಬ್ರೋ ಅಭಿಯಾನದ ಕರಪತ್ರ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಎನ್ಡಿಎ ಮಾಜಿ ಅಧ್ಯಕ್ಷ ನಾರಾಯಣಗೌಡ, ನಗರಸಭೆ ಅಧ್ಯಕ್ಷ ಗಣೇಶ್, ಇನ್ಸ್ಪೆಕ್ಟರ್ಗಳಾದ ಭರತ್ ಗೌಡ, ನರೇಂದ್ರಬಾಬು, ಮೋಹನ್ ಕುಮಾರ್, ಚನ್ನೇಗೌಡ, ಧರ್ಮೇಂದ್ರ, ಉಪನ್ಯಾಸಕ ವೃಂದ, ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
ಪೋಟೋ 1:ಪವಾಡ ಬಸವಣ್ಣ ದೇವರಮಠದಲ್ಲಿ ನೆಲಮಂಗಲ ಉಪವಿಭಾಗದ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನದ ಆಪರೇಷನ್ ರೈಸ್ ಮತ್ತು ಬೇಡ ಬ್ರೋ ಕಾರ್ಯಕ್ರಮದಲ್ಲಿ ಎನ್.ಶ್ರೀನಿವಾಸ್, ಪವಾಡ ಬಸವಣ್ಣದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಕರಪತ್ರ ಬಿಡುಗಡೆಗೊಳಿಸಿದರು.