ಸಾರಾಂಶ
ಹುಬ್ಬಳ್ಳಿ/ಧಾರವಾಡ:
ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಸಿಗುತ್ತಿದ್ದಂತೆಯೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಗುರುವಾರ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಟೆಂಪಲ್ ರನ್ ಮಾಡಿದರು. ಜತೆಗೆ ಹುಬ್ಬಳ್ಳಿಯ ಆರ್ಎಸ್ಎಸ್ ಕಚೇರಿಗೂ ಭೇಟಿ ನೀಡಿ ಪ್ರಮುಖರೊಂದಿಗೆ ಚರ್ಚೆ ನಡೆಸಿದರು.
ಬೆಳಿಗ್ಗೆ ಶ್ರೀ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ ಸಚಿವರು, ಸಿದ್ಧಾರೂಢರ ಹಾಗೂ ಗುರುನಾಥಾರೂಢರ ಗದ್ದುಗೆಯ ದರ್ಶನಾಶೀರ್ವಾದ ಪಡೆದರು. ಇದೇ ವೇಳೆ ಶ್ರೀ ಸಿದ್ಧಾರೂಢ ಸ್ವಾಮಿಗಳ ಮಠ ಟ್ರಸ್ಟ್ ಕಮಿಟಿಯಿಂದ ಗೌರವಿಸಲಾಯಿತು.
ಈ ವೇಳೆ ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ಪ್ರಮುಖರಾದ ತಿಪ್ಪಣ್ಣ ಮಜ್ಜಗಿ, ಶ್ರೀಮಠದ ಟ್ರಸ್ಟ್ ಉಪಾಧ್ಯಕ್ಷ ಉದಯಕುಮಾರ ನಾಯಕ, ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಧರ್ಮದರ್ಶಿ ಬಾಳು ಮಗಜಿಕೊಂಡಿ, ರಂಗಾ ಬದ್ದಿ, ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ಬಸವರಾಜ ಕುಂದಗೋಳಮಠ, ನಿಂಗಪ್ಪ ಸುತಗಟ್ಟಿ, ಅನೂಪ ಬಿಜವಾಡ ಸೇರಿದಂತೆ ಹಲವರಿದ್ದರು.
ಕೇಶವಕುಂಜಕ್ಕೆ ಭೇಟಿ: ನಂತರ ಅಲ್ಲಿಂದ ಆರ್ಎಸ್ಎಸ್ ಕಚೇರಿ ಕೇಶವ ಕುಂಜಕ್ಕೆ ಭೇಟಿ ನೀಡಿ ಸಂಘದ ಹಿರಿಯ ಪ್ರಚಾರಕ ಸು. ರಾಮಣ್ಣ ಅವರನ್ನು ಭೇಟಿಯಾಗಿ ಕೆಲಕಾಲ ಚರ್ಚೆ ನಡೆಸಿದರು.
ಈ ವೇಳೆ ಆರ್ಎಸ್ಎಸ್ನ ಹಿರಿಯ ಪ್ರಚಾರಕ ಸುರೇಶ ರಾವ್, ಎಂ. ನಾಗರಾಜ, ದತ್ತಮೂರ್ತಿ ಕುಲಕರ್ಣಿ ಸೇರಿದಂತೆ ಹಲವರಿದ್ದರು.
ಧಾರವಾಡದಲ್ಲಿ ಲಕ್ಷ್ಮಿನಾರಾಯಣ ಹಾಗೂ ಪ್ರತಿಷ್ಠಿತ ಲಿಂಗಾಯತ ಮಠಗಳಲ್ಲಿ ಒಂದಾದ ಮುರಘಾಮಠಕ್ಕೆ ಭೇಟಿ ನೀಡಿದ ಜೋಶಿ, ಶ್ರೀಗಳ ಆರ್ಶೀವಾದ ಪಡೆದರು.
ಮಹಿಳೆಯರು ಆರತಿ ಬೆಳಗಿ ಮಠಕ್ಕೆ ಸ್ವಾಗತಿಸಿದರು. ಈ ವೇಳೆ ಮಾಜಿ ಶಾಸಕರಾದ ಸೀಮಾ ಮಸೂತಿ, ಅಮೃತ ದೇಸಾಯಿ, ಮಾಜಿ ಮೇಯರ್ ಈರೇಶ ಅಂಚಟಗೇರಿ ಸೇರಿದಂತೆ ಬಿಜೆಪಿಯ ಪ್ರಮುಖರು ಇದ್ದರು.