ಸಾರಾಂಶ
ಮಂಡ್ಯ : ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರ ಮನೆಮನೆಗೆ ಕರಪತ್ರ ಹಂಚಿ ಬಿಜೆಪಿ ಮುಖಂಡ ಅಶೋಕ್ ಜಯರಾಂ ಪ್ರಚಾರ ನಡೆಸಿದರು.
ತಾಲೂಕಿನ ಸಾತನೂರು ಗ್ರಾಮದಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರ ಕರಪತ್ರ ಹಂಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಧಾನಿ ಮೋದಿ ಅವರ ಆಡಳಿತದ ಸಾಧನೆ ತೋರಿಸಿ ಮತಯಾಚನೆ ಮಾಡಲಾಗುತ್ತಿದೆ ಎಂದರು.
ಚುನಾವಣಾ ಪ್ರಚಾರವನ್ನು ಜಂಟಿಯಾಗಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರು ಮಾಡುತ್ತಿದ್ದೇವೆ. ಬಿಜೆಪಿಯ ಚುನಾವಣಾ ಪ್ರಣಾಳಿಕೆಯು ದೇಶದ ಅಭಿವೃದ್ಧಿಗೆ ಪೂರಕಾಗಿದೆ. ಹಲವು ಕೇಂದ್ರ ಸರ್ಕಾರದ ಯೋಜನೆಗಳನ್ನು ಹಾಗೂ ಕಾಂಗ್ರೆಸ್ ಆಡಳಿತದ ವೈಫಲ್ಯವನ್ನು ಜನರಿಗೆ ತಿಳಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಾಗ ಹೊರ ಜಿಲ್ಲೆಯವರು ಎಂದು ಟೀಕಿಸುತ್ತಿರುವ ನಮ್ಮ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರೇ ಬಂದು ಆ ಕುಟುಂಬಗಳಿಗೆ ಸಾಂತ್ವನ ಹೇಳಿ ಆರ್ಥಿಕ ಸಹಾಯ ಮಾಡಿದರು ಅಂತಹವರು ಹೊರಗಿನವರು ಹೇಗೆ ಆಗುತ್ತಾರೆ ಎಂಬುದನ್ನು ಕಾಂಗ್ರೆಸ್ ತಿಳಿದುಕೊಳ್ಳಬೇಕು ಎಂದು ಸವಾಲು ಹಾಕಿದರು.
ಈ ವೇಳೆ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಭೀಮೇಶ್ ನೇತೃತ್ವದಲ್ಲಿ ಮನೆಮನೆಗೆ ಕರಪತ್ರ ನೀಡಿ ಮತಯಾಚನೆ ಮಾಡಲಾಯಿತು. ಮುಖಂಡರಾದ ಯೋಗೇಶ್, ದೇವರಾಜು, ಕರಿಯಪ್ಪ, ರಾಜು, ಸಚಿನ್, ಶಂಭುಲಿಂಗು ಭಾಗವಹಿಸಿದ್ದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿ ಎಚ್ .ಡಿ.ಕುಮಾರಸ್ವಾಮಿಯನ್ನು ಗೆಲ್ಲಿಸೋಣ: ರಾಮಚಂದ್ರ
ಮಂಡ್ಯ:ಜಿಲ್ಲೆ ಸಮಗ್ರ ಅಭಿವೃದ್ಧಿಗಾಗಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಗೆಲ್ಲಿಸೋಣ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ನಾಯಕ ರಾಮಚಂದ್ರ ಹೇಳಿದರು.
ನೆಹರು ನಗರದ ಶ್ರೀರಾಮಮಂದಿರ ದೇವಾಲಯದ ಬಳಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರ ಮನೆ ಮನೆಗೆ ತೆರಳಿ ಮತಯಾಚನೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ರೈತಪರ ಧ್ವನಿಯೆತ್ತಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಗೆಲ್ಲಿಸೋಣ. 2 ಲಕ್ಷಕ್ಕಿಂತ ಹೆಚ್ಚು ಬಹುಮತದೊಂದಿಗೆ ಆಯ್ಕೆ ಮಾಡಿ ಕಳಿಸಿ ಕೇಂದ್ರದ ಮಂತ್ರಿಯಾಗಲು ಮತದಾನದ ಮೂಲಕ ಶಕ್ತಿತುಂಬೋಣ ಎಂದು ಮನವಿ ಮಾಡಿದರು.
ಬಳಿಕ ಮಾತನಾಡಿದ ಜಿಪಂ ಮಾಜಿ ಸದಸ್ಯ ವಿಜಯಾನಂದ, ಇಂದು ಬಿಜೆಪಿ ಮತ್ತು ಜೆಡಿಎಸ್ನ ಪದಾಧಿಕಾರಗಳು, ಕಾರ್ಯಕರ್ತರು ಒಗ್ಗೂಡಿ ನೆಹರು ನಗರ, ಅಶೋಕನಗರ, ಹೊಸಹಳ್ಳಿ, ರಾಮನಹಳ್ಳಿ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರ ಮತಯಾಚಿಸಲಾಗುತ್ತಿದೆ ಎಂದರು.ಕುಮಾರಣ್ಣ ಗೆದ್ದರೆ ಕೇಂದ್ರದಲ್ಲಿ ಮಂತ್ರಿಯಾಗುತ್ತಾರೆ. ಹೆಚ್ಚಿನ ಅನುದಾನ ಜಿಲ್ಲೆಗೆ ಬರುತ್ತದೆ. ಇದರಿಂದ ಅಭಿವೃದ್ದಿ ಸಾಧ್ಯವಾಗುತ್ತದೆ, ಮತದಾರರು ಆಲೋಚನೆ ಮಾಡಿ, ಅಭಿವೃದ್ದಿಗಾಗಿ ಗೆಲ್ಲಿಸಿ ಎಂದು ಕೋರಿದರು.
ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ , ಮಂಡ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ನಾಯಕ ಅಶೋಕ್ ಜಯರಾಂ, ವಿವೇಕ್, ವಸಂತಕುಮಾರ್, ಸಿದ್ದರಾಮೇಗೌಡ, ತಿಮ್ಮೇಗೌಡ ಮತ್ತಿತರರಿದ್ದರು.