ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣದ ತೆಲಗಿ ರಸ್ತೆಯ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಗ್ರಂಥಾಲಯದಲ್ಲಿ ರಾತ್ರಿ ವೇಳೆ ಓದುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯ ಅಡುಗೆ ಸಹಾಯಕಿ ವಿದ್ಯಾರ್ಥಿನಿಯೊಬ್ಬಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ ಘಟನೆಗೆ ಅಕ್ರೋಶ ವ್ಯಕ್ತಪಡಿಸಿ ವಸತಿ ನಿಲಯದ ವಿದ್ಯಾರ್ಥಿನಿಯರು ಭಾನುವಾರ ವಸತಿ ನಿಲಯದ ಮುಂಭಾಗ ಪ್ರತಿಭಟನೆ ಮಾಡಿದರು.ವಸತಿ ನಿಲಯದ ಗ್ರಂಥಾಲಯದಲ್ಲಿ ವಿದ್ಯಾರ್ಥಿನಿಯರು ಶನಿವಾರ ರಾತ್ರಿ ಓದುತ್ತಿದ್ದಾಗ ಮುಖ್ಯ ಅಡುಗೆ ಸಹಾಯಕಿ ಗೀತಾ ಎಂಬುವರು ರಾತ್ರಿ 10ರ ಬಳಿಕ ಗ್ರಂಥಾಲಯದಲ್ಲಿ ಓದಲು ಅವಕಾಶವಿಲ್ಲ. ನಿಮ್ಮ ಕೊಠಡಿಗಳಲ್ಲೇ ಓದಿ ಎಂದು ತಡೆದಿದ್ದಾರೆ. ಆಗ ಉಂಟಾದ ವಾಗ್ವಾದವು ತೀವ್ರ ಸ್ವರೂಪ ಪಡೆದಿದ್ದು, ಮುಖ್ಯ ಅಡುಗೆ ಸಹಾಯಕಿ ವಿದ್ಯಾರ್ಥಿನಿಯೊಬ್ಬಳಿಗೆ ಕಪಾಳಮೋಕ್ಷ ಮಾಡಿ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆಯನ್ನು ಖಂಡಿಸಿ ಭಾನುವಾರ ಬೆಳಗ್ಗೆ ವಿದ್ಯಾರ್ಥಿನಿಯರು ವಸತಿ ನಿಲಯದ ಮುಂಭಾಗ ಕುಳಿತು ಪ್ರತಿಭಟನೆ ನಡೆಸಿದರು. ಅಡುಗೆಯ ಗುಣಮಟ್ಟದಿಂದ ಕೂಡಿಲ್ಲ. ವಸತಿ ನಿಲಯದ ಮೂಲಸೌಲಭ್ಯಗಳ ಅಭಾವದ ಕುರಿತು ಆಕ್ಷೇಪ ಹೊರಹಾಕಿದರು. ವಸತಿ ನಿಲಯದ ವಿದ್ಯಾರ್ಥಿನಿಯರ ಪ್ರತಿಭಟನೆಗೆ ಸ್ಥಳೀಯ ಡಿಎಸ್ಎಸ್ ಹಾಗೂ ಕರವೇ ಸಂಘಟನೆ ಮುಖಂಡರು ಬೆಂಬಲ ವ್ಯಕ್ತಪಡಿಸಿ ವಿದ್ಯಾರ್ಥಿನಿಯರ ಪರ ದನಿ ಎತ್ತಿದರು.ಪ್ರತಿಭಟನೆ ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಮಹೇಶ ಪೋದ್ಧಾರ ಭೇಟಿ ನೀಡಿ, ವಿದ್ಯಾರ್ಥಿನಿಯರ ಸಮಸ್ಯೆಗಳನ್ನು ಆಲಿಸಿದರು. ಈ ಘಟನೆಗೆ ಸಂಬಂಧಿಸಿದ ಅಡುಗೆ ಸಹಾಯಕಿಯನ್ನು ಅಮಾನತು ಮಾಡಲಾಗುವದು. ಉಳಿದ ಗುತ್ತಿಗೆ ಸಿಬ್ಬಂದಿಯನ್ನು ತೆಗೆದು ಹಾಕುವ ಅಧಿಕಾರ ನಮ್ಮ ವ್ಯಾಪ್ತಿಯಲ್ಲಿ ಬರುತ್ತದೆ. ಅವರನ್ನು ಸಹ ತೆಗೆದುಹಾಕುವ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು. ಈ ವಸತಿ ನಿಲಯಕ್ಕೆ ಬೇರೆ ಸಿಬ್ಬಂದಿ ನಿಯೋಜನೆ ಮಾಡಲಾಗುವದು. ವಸತಿ ನಿಲಯದ ಪಾಲಕರ ಮೇಲೆ ಕ್ರಮ ತೆಗೆದುಕೊಳ್ಳುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ, ಸಿಇಒ ಅವರಿಗೆ ಇರುತ್ತದೆ. ಇದರ ಸಮಗ್ರ ವರದಿಯನ್ನು ಜಿಲ್ಲಾಧಿಕಾರಿಗಳಿಗೆ, ಸಿಇಒ ಅವರಿಗೆ, ನಮ್ಮ ಇಲಾಖೆಯ ಮೇಲಾಧಿಕಾರಿಗಳಿಗೆ ನೀಡಲಾಗುವದು. ವಿದ್ಯಾರ್ಥಿನಿಯರು ತಮ್ಮ ಪ್ರತಿಭಟನೆ ಹಿಂಪಡೆಯುವಂತೆ ಮನವೊಲಿಸಿದರು.ವಸತಿ ನಿಲಯದ ವಿದ್ಯಾರ್ಥಿಗಳಿಗೆ ಮೂಲಸೌಲಭ್ಯ ಕಲ್ಪಿಸುವ ಜೊತೆಗೆ ಅವರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಸ್ಥಳದಲ್ಲಿ ಹಾಜರಿದ್ದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.